ಬದಿಯಡ್ಕ: ಬದಿಯಡ್ಕ ಪೇಟೆಯಲ್ಲಿ ವಿಜಯೋತ್ಸವ ನಡೆಸುತ್ತಿದ್ದ ಯುಡಿಎಫ್ ಕಾರ್ಯಕರ್ತರು ಮತ್ತು ಎಲ್.ಡಿ.ಎಫ್ ಕಾರ್ಯಕರ್ತರ ಮಧ್ಯೆ ಗುರುವಾರ ಸಂಜೆ ಸಂಘರ್ಷ ಸೃಷ್ಟಿಯಾದ ಘಟನೆ ನಡೆದಿದೆ. ಯುಡಿಎಫ್ ಕಾರ್ಯಕರ್ತರು ಮೆರವಣಿಗೆ ನಡೆಸುತ್ತಿದ್ದಾಗ ಪಕ್ಷದ ಕಾರ್ಯಾಲಯದ ಮುಂದೆ ಜಮಾಯಿಸಿದ್ದ ಎಲ್.ಡಿ.ಎಫ್ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಬಾವುಟ ಪ್ರದರ್ಶಿಸಿದ ಬೆನ್ನಿಗೆ ಯುಡಿಎಫ್ ಕಾರ್ಯಕರ್ತರು ವಿಕೋಪಕ್ಕೆ ಹೇತುವಾಗಿ ಸಂಘರ್ಷಕ್ಕೆ ದಾರಿಮಾಡಿಕೊಟ್ಟಿತು.
ಈ ಮಧ್ಯೆ ಸಿಪಿಎಂ ಲೋಕಲ್ ಸಮಿತಿ ಕಾರ್ಯಾಲಯಕ್ಕೆ ಯುಡಿಎಫ್ ಕಾರ್ಯಕರ್ತರು ಸಿಡಿಮದ್ದು ಎಸೆದರು. ಲೋಕಲ್ ಕಾರ್ಯದರ್ಶಿ ಸಹಿತ ಐವರು ಗಾಯಗೊಂಡಿರುವರೆಂದು ಸಿಪಿಎಂ ನೇತಾರರು ದೂರಿದ್ದಾರೆ.
ಸಂಘರ್ಷದಲ್ಲಿ ಸಿಪಿಎಂ ಪಕ್ಷದ ಬ್ಯಾನರ್ ಗಳನ್ನು ಪುಡಿಗೈಯ್ಯಲಾಯಿತೆಂದು ದೂರಲಾಗಿದೆ. ಸಂಘರ್ಷದಲ್ಲಿ ಗಾಯಗೊಂಡ ಸಿಪಿಎಂ ಲೋಕಲ್ ಸಮಿತಿ ಕಾರ್ಯದರ್ಶಿ ಕೃಷ್ಣ ಬದಿಯಡ್ಕ ಸಹಿತ ಐವರು ಕಾರ್ಯಕರ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿ ದೂರು ದಾಖಲಿಸದ ಪೋಲೀಸರ ಕ್ರಮ ವಿರೋಧಿಸಿ ಸಿಪಿಎಂ ಕಾರ್ಯಕರ್ತರು ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು. ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ರಘುದೇವನ್ ಮಾಸ್ತರ್, ಏರಿಯಾ ಕಾರ್ಯದರ್ಶಿ ಸಿ.ಎ.ಸುಬೈರ್, ಕೆ.ಜಗನ್ನಾಥ ಶೆಟ್ಟಿ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ಸಮಧಾನಪಡಿಸಿ ಹಿಂದೆ ಕಳಿಸಿದರು. ಪೋಲೀಸರು ಕ್ರಮ ಕೈಗೊಳ್ಳುವರೆಂದು ಮುಖಂಡರು ತಿಳಿಸಿದ್ದಾರೆ.
ಬದಿಯಡ್ಕ ಗ್ರಾ.ಪಂ. ಆಡಳಿತ ಕೈತಪ್ಪಿದ ನಿರಾಶೆಯಲ್ಲಿ ಯುಡಿಎಫ್ ಆಕ್ರಮಣಕಾರಿ ಚಟುವಟಿಕೆ ನಡೆಸಿತೆಂದು ಸಿಪಿಎಂ ಕುಂಬಳೆ ಏರಿಯಾ ಸಮಿತಿ ತೀವ್ರ ಟೀಕೆ ವ್ಯಕ್ತಪಡಿಸಿದೆ. ಆಕ್ರಮಣ ನಡೆಸಿದವರನ್ನು ಶೀಘ್ರ ಬಂಧಿಸಿ ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ಸಿಪಿಎಂ ನೇತಾರರು ಆಗ್ರಹಿಸಿದ್ದಾರೆ.


