ಕಾಸರಗೋಡು: ಹಾಲು ಉತ್ಪಾದನೆಯಲ್ಲಿ ಹೆಚ್ಚಳ ಮತ್ತು ತತ್ಸಂಬಂಧಿ ಕೃಷಿಕರ ಬದುಕಿನ ಅಂತಸ್ತು ವೃದ್ಧಿಗೊಂಡಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಹಾಲು ಉತ್ಪಾದನೆ ವಲಯ ಪ್ರಗತಿಯತ್ತ ದಾಪುಗಾಲಿಕ್ಕುತ್ತಿರುವುದಾಗಿ ಜಿಲ್ಲಾ ಹಾಲು ಅಭಿವೃದ್ಧಿ ಮಂಡಳಿ ಅಧಿಕಾರಿಗಳು ತಿಳಿಸುತ್ತಾರೆ.
ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಜಾರಿಗೊಳಿಸಿದ ಅನೇಕ ಯೋಜನೆಗಳು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಜಿಲ್ಲೆಯ 144 (ಆಪ್ ಕೋಸ್-139, ಪರಂಪರಾಗತ-5) ಹಾಲು ಉತ್ಪಾದಕರ ಸಂಘಗಳು ಯಶಸ್ವಿ ಚಟುವಟಿಕೆ ನಡೆಸುತ್ತಿವೆ. 2020 ಡಿಸೆಂಬರ್ ತಿಂಗಳಲ್ಲಿ ಮಾತ್ರ 74459 ಲೀ. ಹಾಲು ಪ್ರತಿದಿನ ಅಳತೆಯನ್ವಯ ಸಂಗ್ರಹವಾಗಿದೆ. ತ್ರಿಸ್ತರ ಪಂಚಾಯಿತಿಗಳ ಜತೆಗೆ, ಹಾಲು ಉತ್ಪಾದನಾ ವಲಯದಲ್ಲಿ ವಿವಿಧ ಯೋಜನೆಗಳು, ವಿಮೆ ಸಂರಕ್ಷಣೆ ಇತ್ಯಾದಿಗಳೂ ಈ ವಲಯಕ್ಕೆ ಹೆಚ್ಚಿನ ಆಶಾಭಾವನೆ ಮೂಡಿಸಿದೆ.
ಶಾಸಕ ಅಧ್ಯಕ್ಷರಾಗಿರುವ ಮಾನಿಟರಿಂಗ್ ಸಮಿತಿಯ ನೇತೃತ್ವದಲ್ಲಿ ಕ್ಷೀರಗ್ರಾಮ ಯೋಜನೆ ಜಾರಿಗೊಳ್ಳುತ್ತಿದೆ. ಯೋಜನೆ ಪ್ರಕಾರ ಗರಿಷ್ಠ 50 ಲಕ್ಷ ರೂ. ಒಂದು ಕ್ಷೀರಗ್ರಾಮಕ್ಕೆ ಲಭಿಸುತ್ತದೆ. 2 ಹಸುಗಳ ಯೂನಿಟ್ ಗೆ 69000 ರೂ., 5ಹಸುಗಳ ಘಟಕಕ್ಕೆ 1,84,000 ರೂ., ಒಂದು ಹಸು, ಒಂದು ಕರು ಘಟಕಕ್ಕೆ 53,000 ರೂ., ಮೂರು ಹಸುಗಳು, ಒಂದು ಕರು ಘಟಕಕ್ಕೆ 1,5,000 ರೂ. ಸಬ್ಸಿಡಿ ರೂಪದಲ್ಲಿ ಲಭಿಸುತ್ತದೆ. ಫಾರ್ಮಿಗೆ ಬೇಕಾದ ಸಾಮಾಗ್ರಿಗಳ ಖರೀದಿಗಾಗಿ 50 ಸಾವಿರ ರೂ., ಹಾಲು ಕರೆಯುವ ಯಂತ್ರ ಖರೀದಿಗೆ 25 ಸಾವಿರ ರೂ., ಹಸುವಿನ ಹಟ್ಟಿ ನಿರ್ಮಾಣಕ್ಕೆ 50 ಸಾವಿರ ರೂ., ಹಟ್ಟಿಯಲ್ಲಿ ಸೆಕೆ ನಿಯಂತ್ರಣ ಸೌಲಭ್ಯ ಒದಗಿಸಲು 25 ಸಾವಿರ ರೂ., ಕ್ಯಾಲ್ಶಿಯಂ ಪುಡಿ ಖರೀದಿಗೆ 101 ರೂ. ಸಬ್ಸಿಡಿ ರೂಪದಲ್ಲಿ ಲಭಿಸುತ್ತಿದೆ. ಆಯ್ದ ಕೃಷಿಕರಿಗೆ ಪ್ರತ್ಯೇಕ ತರಬೇತಿ ನೀಡಿ ನಂತರ ಯೋಜನೆ ಜಾರಿಗೊಳಿಸಲಾಗುತ್ತಿದೆ.
ಮಿಲ್ಕ್ ಶೆಡ್ ಅಭಿವೃದ್ಧಿ ಯೋಜನೆ:
ಹಾಲು ಉತ್ಪಾದನೆ ನಡೆಸುತ್ತಿರುವವರಿಗೆ ಮತ್ತು ನೂತನವಾಗಿ ಹಾಲು ಉತ್ಪಾದನೆ ವಲಯಕ್ಕೆ ಹೆಜ್ಜೆಯಿರಿಸುವ ಮಂದಿಗೆ ಪ್ರಯೋಜನಕಾರಿಯಾಗಿರುವ ಮಿಲ್ಕ್ ಶೆಡ್ ಯೋಜನೆ ಇಲ್ಲಿದೆ. ಹಟ್ಟಿ ನಿರ್ಮಾಣ, ಹಾಲು ಕರೆಯುವ ಯಂತ್ರ, ತಿನಿಸು ಹುಲ್ಲು ಯಂತ್ರ, ಬಯೋಗ್ಯಾಸ್ ಘಟಕ, ಜನರೇಟರ್ ಸಹಿತ ಸೌಲಭ್ಯಗಳಿಗೆ ಆರ್ಥಿಕ ಸಹಾಯವೂ ಲಭಿಸಲಿದೆ. ಕೃಷಿಕರಿಗಿರುವ ಜೀವವಿಮೆ ಯೋಜನೆ, ಕೃಷಿಕರಿಗೆ ಚಿಕಿತ್ಸೆ ಆರ್ಥಿಕ ಸಹಾಯ ಒದಗಿಸುವ ಮೆಡಿಕಲ್ ವಿಮೆ, ಹಸುಗಳಿಗೆ ವಿಮೆ, ಉತ್ಪಾದನೆ ಸಾಮಥ್ರ್ಯ ಕುಂಠಿತಗೊಂಡ ಹಸುಗಳ ಮೌಲ್ಯವರ್ಧನೆ ಪ್ರಕಾರ ಲಭಿಸುವ ಪೇಮಂಟ್ ಟೋಟಲ್ ಡಿಸೆಬಿಲಿಟಿ ಕ್ಲೈಂ ಇತ್ಯಾದಿ ಯೋಜನೆಗಳು ಪ್ರಧಾನ ವಿಮೆಗಳಾಗಿವೆ.
ಮೇವಿನ ಹುಲ್ಲಿನ ವಲಯದಲ್ಲಿ ಸ್ವಾವಲಂಬಿತನ ಗಳಿಸುವ ನಿಟ್ಟಿನಲ್ಲಿ ತಿನಿಸು ಹಲ್ಲು ಬೆಳೆಸುವ ಯೋಜನೆಗಳು ಜಿಲ್ಲೆಯಲ್ಲಿ ಪ್ರಗತಿಯಲ್ಲಿದೆ. ಉತ್ತಮ ಗುಣಮಟ್ಟದ ಹುಲ್ಲುಗಳ ಬೀಜ ಅಥವಾ ಹುಲ್ಲುಗಳ ವಿತರಣೆ, ಕಿರು ಅವಧಿಯ ಹುಲ್ಲು ಬೆಳೆಗಳು, ಅಜೋಲ ಕೃಷಿ ಯಾ ನರ್ಸರಿಗಳು, ಬಂಜರು ಜಾಗದಲ್ಲಿ ಮೇವಿನ ಹುಲ್ಲು ಕೃಷಿ ಇತ್ಯಾದಿ ತತ್ಸಂಬಂಧಿ ಯೋಜನೆಗಳೂ ಒಳಗೊಂಡಿದೆ.
ಅಭಿಮತ:
ಹಾಲು ಉತ್ಪಾದನೆ ವಲಯವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ'ಕ್ಷೀರಗ್ರಾಮ' ಯೋಜನೆ ಪನತ್ತಡಿ ಗ್ರಾಮ ಪಂಚಾಯಿತಿಯಲ್ಲಿ ಆರಂಭಗೊಂಡಿದೆ. ಯೋಜನೆ ಆರಂಭಗೊಂಡ ಬಳಿಕ 2018-19 ರಲ್ಲಿ 1819478 ಲೀ. ಇದ್ದ ಹಾಲಿನ ಉತ್ಪಾದನೆ 2019-20ರಲ್ಲಿ 2003084 ಲೀ.ಗೆ ಏರಿಕೆಯಾಗಿದೆ.
ಜೀಜಾ ಸಿ.ಕೃಷ್ಣನ್, ಸಹಾಯಕ ನಿರ್ದೇಶಕಿ
ಹಾಲು ಅಭಿವೃದ್ಧಿ ಇಲಾಖೆ, ಕಾಸರಗೋಡು

