ನವದೆಹಲಿ: ದೇಶದಲ್ಲಿ ಕೋವಿಡ್-19 ಎರಡನೇ ಅಲೆ ಮುಂದಿನ ವಾರಗಳಲ್ಲಿ ಮತ್ತಷ್ಟು ಗಂಭೀರವಾಗಲಿದ್ದು, ಪರಿಸ್ಥಿತಿ ಹದಗೆಡುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಎಲ್ಲ ದೊಡ್ಡ ರಾಜ್ಯಗಳಲ್ಲಿ ಸೋಂಕು ಹಬ್ಬುತ್ತಿದೆ. ಸೋಂಕು ಹರಡುವ ವೈರಸ್ ಸಾಮರ್ಥ್ಯವನ್ನು ವಿಶ್ಲೇಷಿಸಿದಾಗ 17 ರಾಜ್ಯಗಳ ಪೈಕಿ 16ರಲ್ಲಿ ಪ್ರಕರಣಗಳು ಹೆಚ್ಚುತ್ತಿರುವುದು ಗೊತ್ತಾಗಿದೆ.
10 ಸೋಂಕಿತ ವ್ಯಕ್ತಿಗಳು ಇತರ 13 ಮಂದಿಗೆ ಕಾಯಿಲೆಯನ್ನು ಹಬ್ಬಿಸಬಹುದು. ಮಾರ್ಚ್ 17ರಿಂದ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಸಾಂಕ್ರಾಮಿಕ ಕಾಯಿಲೆ ಕುರಿತು ಕಂಪ್ಯೂಟರ್ ಮಾದರಿಗಳ ಮೂಲಕ ವಿಶ್ಲೇಷಣೆ ನಡೆಸಿದಾಗ ಈ ವಿಷಯ ಗೊತ್ತಾಗಿದೆ ಎಂದು ಚೆನ್ನೈನಲ್ಲಿರುವ ಗಣಿತ ವಿಜ್ಞಾನಗಳ ಸಂಸ್ಥೆಯ ವಿಜ್ಞಾನಿ ಸೀತಾಭ್ರಾ ಸಿನ್ಹಾ ತಿಳಿಸಿದ್ದಾರೆ.





