ಮೈಸೂರು: ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಯಿ ತಯಾರಿಸುವ ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್, 6.99 ಲಕ್ಷ ಬಾಟಲ್ ಅಳಿಸಲಾಗದ ಶಾಯಿಯನ್ನು ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಪೂರೈಸಿದೆ.
ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಈಗಾಗಲೇ ಚುನಾವಣಾ ಕಣ ರಂಗೇರಿದ್ದು, ರಾಜ್ಯ ಸರ್ಕಾರಿ ಸ್ವಾಮ್ಯದ ಕಂಪನಿ ಕೋವಿಡ್ ಸಾಂಕ್ರಾಮಿಕದ ವೇಳೆಯಲ್ಲೂ 6.99 ಲಕ್ಷ ಅಳಿಸಲಾಗದ ಶಾಯಿ ಬಾಟಲಿಗಳನ್ನು ತಯಾರಿಸಿದೆ.
ಭಾರತೀಯ ಚುನಾವಣಾ ಆಯೋಗದಿಂದ ಆದೇಶ ಪಡೆದ ನಂತರ ದೇಶದಲ್ಲಿ ಅಳಿಸಲಾಗದ ಇಂಕ್ ಉತ್ಪಾದಿಸುವ ಏಕೈಕ ಕಂಪನಿಯಾದ ಎಂಪಿವಿಎಲ್, ಕಾರ್ಯವನ್ನು ತ್ವರಿತಗೊಳಿಸಿದ್ದು, ಸಂಬಂಧಿತ ರಾಜ್ಯಗಳಿಗೆ ಪೂರೈಸಿದೆ. ಪಶ್ಚಿಮ ಬಂಗಾಳಕ್ಕೆ 2.7 ಬಾಟಲಿಗಳನ್ನು ಕಳುಹಿಸಿರುವ ಕಂಪನಿ, ಅಸ್ಸಾಂಗೆ 83,860, ತಮಿಳುನಾಡಿಗೆ 2.37 ಲಕ್ಷ, ಕೇರಳಕ್ಕೆ 1.02 ಮತ್ತು ಪುದುಚೇರಿಗೆ 6 ಸಾವಿರ ಬಾಟಲಿಗಳನ್ನು ಕಳುಹಿಸಲಾಗಿದೆ ಎಂದು ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ ಅಧ್ಯಕ್ಷ ಎನ್. ವಿ. ಫಣೀಶ್ ತಿಳಿಸಿದ್ದಾರೆ.
ಜಿಎಸ್ ಟಿ ಹೊರತುಪಡಿಸಿದಂತೆ 11.09 ಕೋಟಿ ಮೊತ್ತದ ಇಂಕ್ ನ್ನು ಚುನಾವಣೆ ನಡೆಯಲಿರುವ ಪ್ರದೇಶಗಳಿಗೆ ಕಳುಹಿಸಲಾಗಿದೆ. ಬಾಟಲಿಗಳ ಸಾಗಣೆಯಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
1937ರಲ್ಲಿ ಮೈಸೂರು ಒಡೆಯರ್ ಅವರಿಂದ ಸ್ಥಾಪನೆಯಾದ ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್, ತದನಂತರ ಸರ್ಕಾರ ವಶಕ್ಕೆ ಬಂದಿತು. ಇದು ಚುನಾವಣೆ ಸಂದರ್ಭದಲ್ಲಿ ದೇಶ, ವಿದೇಶಗಳಿಗೆ ಅಳಿಸಲಾಗದ ಇಂಕ್ ನ್ನು ಪೂರೈಸುತ್ತದೆ.