ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮಳೆನೀರು ಕೊಯ್ಲು ಮೂಲಕ ವಿವಿಧ ವಿಧಾನಗಳ ಮುಖೇನ ನೀರಿನ ಕ್ಷಾಮ ಪರಿಹಾರಕ್ಕೆ ನಡೆಸಿದ ಮಾದರಿ ಯತ್ನಗಳನ್ನು ಪರಿಶೀಲಿಸಿ ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಜಲಯೋಧ (ವಾಟರ್ ವಾರಿಯರ್) ಪುರಸ್ಕಾರ ಸಂದಿದೆ. ಜಿಲ್ಲಾಧಿಕಾರಿ ಅವರ ಜೊತೆಗೆ ಕಾಸರಗೋಡು ಜಿಲ್ಲೆಯ ಕುಂಡಂಕುಳಿ ನಿವಾಸಿ ಕುಂಞಂಬು ಅವರಿಗೂ ಈ ಪುರಸ್ಕಾರ ಲಭಿಸಿದೆ.
ವಿಶ್ವ ಜಲ ದಿನಾಚರಣೆಯ ಅಂಗವಾಗಿ ಮಾ.20ರಂದು ಸಂಜೆ 6 ಗಂಟೆಗೆ ಪಾಲಕ್ಕಾಡ್ ಧೋನಿ ಎಂಬಲ್ಲಿನ ಲೀಡ್ ಕಾಲೇಜು ಆಪ್ ಮೆನೆಜ್ ಮೆಂಟ್ ನಲ್ಲಿ ನಡೆಯುವ ಸಮಾರಂಭದಲ್ಲಿ ಪುರಸ್ಕಾರ ಪ್ರದಾನ ನಡೆಯಲಿದೆ. ಪುರಸ್ಕಾರವು ಸ್ಮರಣಿಕೆ ಮತ್ತು ಅರ್ಹತಾಪತ್ರ ಹೊಂದಿದೆ.
ಜಲಸಂರಕ್ಷಣೆ ಚಟುವಟಿಕೆಗಳಲ್ಲಿ ಇವರ ಸಹಿತ 5 ಮಂದಿ ನಡೆಸಿರುವ ಅವಿರತ ಯತ್ನವನ್ನು ಪ್ರಧಾನವಾಗಿಸಿ ಚಿತ್ರೀಕರಿಸಿದ "ರೈನ್ ವಾಟರ್ ದಿ ಗ್ರೇಟೆಸ್ಟ್ ಗಿಫ್ಟ್ " ಎಂಬ ವಿನೋದ್ ಮಂಗರ ಅವರ ಚಿತ್ರದ ಪ್ರದರ್ಶನ ಈ ವೇಳೆ ಜರಗಲಿದೆ.