ಬದಿಯಡ್ಕ: ಪರವಾನಗಿ ಹೊಂದಿದ ಬಂದೂಕನ್ನು ಠಾಣೆಯಲ್ಲಿರಿಸುವಂತಿಲ್ಲವೆಂದು ಕೇರಳ ಹೈಕೋರ್ಟ್ ಮತ್ತೊಮ್ಮೆ ತೀರ್ಪು ನೀಡಿದೆ. ಇತ್ತೀಚೆಗೆ ನಡೆದ ಗ್ರಾಮಪಂಚಾಯಿತಿ ಚುನಾವಣೆಯ ನಂತರ ಬದಿಯಡ್ಕ ಉಕ್ಕಿನಡ್ಕ ಸಮೀಪದ ಕೃಷಿಕ ಏನಂಕೂಡ್ಲು ಸುಬ್ರಹ್ಮಣ್ಯ ಅವರು ತಮ್ಮ ಕೋವಿಯನ್ನು ವಾಪಸ್ ಪಡೆಯಲು ಬದಿಯಡ್ಕ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ ಅವರು ಕೋವಿಯನ್ನು ಹಿಂತಿರುಗಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆಹೋಗಿದ್ದರು. ಅವರ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್ ಮೇಲಿನ ಆದೇಶವನ್ನೇ ನೀಡಿದೆ.
ಚುನಾವಣೆಯ ಸಂದರ್ಭದಲ್ಲಿ ಪರವಾನಗಿ ಹೊಂದಿದ ಬಂದೂಕನ್ನು ಠಾಣೆಯಲ್ಲಿ ಶೇಖರಿಸಿಡುವ ಅಧಿಕಾರ ಪೊಲೀಸರಿಗಿಲ್ಲ. ಕ್ರಿಮಿನಲ್ ಕೇಸುಗಳಲ್ಲಿ ಭಾಗಿಯಾಗಿರುವ ಪರವಾನಗಿದಾರರ ಕೋವಿಗಳನ್ನು ಮಾತ್ರವೇ ಸುಸಜ್ಜಿತ ಚುನಾವಣೆ ನಡೆಸುವ ಸಲುವಾಗಿ ಶೇಖರಿಸಲು ಅನುಮತಿ ಇದೆ ಎಂದು ಹೈಕೋರ್ಟ್ ಪುನರಪಿ ಸ್ಪಷ್ಟಪಡಿಸಿದೆ. ಕೇರಳ ಹೈಕೋರ್ಟ್ನಲ್ಲಿ ಇತ್ತೀಚೆಗೆ ಕಾಸರಗೋಡಿನ ನ್ಯಾಯವಾದಿ ಪ್ರದೀಪ್ ರಾವ್ ಮೇಪೋಡ್ ಅವರು ಜಿಲ್ಲಾಧಿಕಾರಿಗಳ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು ಅರ್ಜಿದಾರರ ಪರವಾಗಿ ಹೈಕೋರ್ಟ್ ತೀರ್ಪನ್ನು ನೀಡಿತ್ತು ಎಂಬುದು ಗಮನಾರ್ಹ. ಅವರ ಸಲಹೆಯನ್ನು ಪಡೆದು ಸುಬ್ರಹ್ಮಣ್ಯ ಏನಂಕೂಡ್ಲು ಅವರೂ ಹೈಕೋರ್ಟ್ ಮೊರೆಹೋಗಿದ್ದರು.
ಅಭಿಮತ:
ಪರವಾನಗಿ ನವೀಕರಿಸುವ ಸಂದರ್ಭದಲ್ಲಿ 1500 ರೂಪಾಯಿ ಶುಲ್ಕವನ್ನು ತೆತ್ತು, ನಮ್ಮ ಉಪಯೋಗಕ್ಕಿಲ್ಲದೆ ಕೋವಿಯು ಅನಿರ್ಧಿಷ್ಟ ಸಮಯ ಠಾಣೆಯಲ್ಲಿರಿಸಬೇಕಾದ ದುಸ್ತಿತಿಯನ್ನು ಮನಗಂಡು ಹೈಕೋರ್ಟ್ ಮೊರೆಹೋಗಿದ್ದೆ. ಹೈಕೋರ್ಟ್ನ ಈ ಮಹತ್ವದ ತೀರ್ಪು ಸಂತಸವನ್ನು ತಂದಿದೆ.
- ಸುಬ್ರಹ್ಮಣ್ಯ ಏನಂಕೂಡ್ಲು