ಮಡಿಕೇರಿ ; ಭಾಗಮಂಡಲದಿಂದ ಕೇರಳಕ್ಕೆ ಕರಿಕೆ ಮೂಲಕ ಸಂಪರ್ಕ ಕಲ್ಪಿಸುವ ರಸ್ತೆಯ ಮರುಡಾಂಬರೀಕರಣ ಕಾಮಗಾರಿಯನ್ನು ಜನರು ತಡೆದಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ಅತ್ಯಂತ ಕಳಪೆ ಮಟ್ಟದ್ದು ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಅಂತರ ರಾಜ್ಯ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ ಕೆಲವು ವರ್ಷಗಳಿಂದ ಹದಗೆಟ್ಟಿತ್ತು. ನಡೆದುಕೊಂಡು ಹೋಗಲು ಕೂಡ ಸಾಧ್ಯವಾಗದಷ್ಟು ಗುಂಡಿ ಬಿದ್ದಿತ್ತು. ಮಳೆಗಾಲದಲ್ಲಿ ಪರಿಸ್ತಿತಿ ಮತ್ತಷ್ಟು ಶೋಚನೀಯವಾಗಿತ್ತು.
ಸ್ಥಳೀಯರ ಒತ್ತಾಯದಿಂದ ಲೋಕೋಪಯೋಗಿ ಇಲಾಖೆಯು ಒಟ್ಟು 10 ಕಿ. ಮೀ. ಉದ್ದದ ರಸ್ತೆಯ ಮರುಡಾಂಬರೀಕರಣ ಯೋಜನೆಯನ್ನು 4.2 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮೂವರು ಗುತ್ತಿಗೆದಾರರಿಗೆ ನೀಡಿತ್ತು.
ಇದರಲ್ಲಿ 2.1 ಕಿ. ಮೀ. ಉದ್ದದ ರಸ್ತೆಯ ಕಾಮಗಾರಿಯನ್ನು ಗುತ್ತಿಗೆಯನ್ನು ಉಮ್ಮರ್ ಎಂಬುವವರು 82 ಲಕ್ಷಕ್ಕೆ ಪಡೆದಿದ್ದರು. ಆದರೆ ಕಾಮಗಾರಿ ಆರಂಭಿಸಿದ ಗುತ್ತಿಗೆದಾರ ಅತ್ಯಂತ ಕಳಪೆ ಕಾಮಗಾರಿ ಮಾಡಿದ ಕಾರಣದಿಂದ ರಸ್ತೆಗೆ ಹಾಕಿದ ಜಲ್ಲಿ ಕಲ್ಲುಗಳು ಎದ್ದು ಬರಲು ಆರಂಭವಾದವು.
ಜಲ್ಲಿಗಳನ್ನು ಹಾಕಿ ಡಾಂಬರು ಹಾಕಿದ್ದರೂ ರಸ್ತೆಯ ಮೇಲೆ ಸುಮ್ಮನೆ ಹರಡಿದಂತೆ ಇದೆ. ನಡೆಯುವಾಗಲೇ ನಡುಗುತ್ತಿವೆ. ಕಳಪೆ ಕಾಮಗಾರಿಯನ್ನು ಪರಿಶೀಲಿಸಿದ ಗ್ರಾಮಸ್ಥರು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೂ ದೂರು ನೀಡಿದ್ದು ಇದೀಗ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ" ಎಂದು ಸಹಾಯಕ ಇಂಜಿನಿಯರ್ ದೇವರಾಜು ಒನ್ ಇಂಡಿಯಾ ಪ್ರತಿನಿಧಿಗೆ ತಿಳಿಸಿದ್ದಾರೆ.
"ಡಾಂಬರ್ ಪ್ಲಾಂಟ್ನಲ್ಲಿಯೂ ಸಹ ಹೆಚ್ಚಿನ ಉಷ್ಣದ ಕಾರಣದಿಂದಾಗಿ ಟಾರಿನ ಅಂಶ ಕಡಿಮೆ ಆಗಿದೆ. ಸುಮಾರು ನೂರು ಮೀಟರ್ ದೂರದವರೆಗಿನ ರಸ್ತೆ ಮಾತ್ರ ಈ ರೀತಿ ಆಗಿದ್ದು, ಇದನ್ನು ತೆಗೆದು ಮರುಡಾಂಬರೀಕರಣ ಮಾಡಲು ಗುತ್ತಿಗೆದಾರನಿಗೆ ತಿಳಿಸಲಾಗಿದೆ" ಎಂದರು ಹೇಳಿದ್ದಾರೆ.



