ನವದೆಹಲಿ: ಕೊರೋನ ವೈರಸ್ ನ ಪ್ರಾರಂಭ ಘಟ್ಟದಲ್ಲಿ ಭಾರತದಾದ್ಯಂತ 2020 ಮಾರ್ಚ್ 22ರಂದು ಜನತಾ ಕಫ್ರ್ಯೂ ಹಾಗೂ ಬಳಿಕ ಲಾಕ್ ಡೌನ್ ಹೇರಲಾಗಿತ್ತು. ಈ ಸಂದರ್ಭದಲ್ಲಿ ಹಲವರ ಮೂರ್ಖತನದ ನಡೆಗಳು ಮತ್ತು ಬಾಲಿಷ ಹೇಳಿಕೆಗಳನ್ನು ಮುಂದಿಟ್ಟುಕೊಂಡು ಟ್ವಿಟರ್ ನಲ್ಲಿ ಜನತಾ ಕಫ್ರ್ಯೂ ನ 'ವಾರ್ಷಿಕೋತ್ಸವವನ್ನು' ಆಚರಿಸಿದರು.
ಪ್ರಧಾನಿ ನರೇಂದ್ರ ಮೋದಿಯ ಸೂಚನೆಯ ಮೇರೆಗೆ ಹಲವಾರು ಮಂದಿ ತಟ್ಟೆಗಳನ್ನು ಬಾರಿಸಿದ ವೀಡಿಯೋಗಳು ಹಾಗೂ ಇನ್ನಿತರ ವ್ಯಂಗ್ಯ ವೀಡಿಯೋಗಳನ್ನು ಸಾಮಾಜಿಕ ತಾಣದಲ್ಲಿ ಹರಿಬಿಡಲಾಗಿತ್ತು. ಇದು ಮಾತ್ರವಲ್ಲದೇ ಬಿಜೆಪಿ ಸಂಸದರು ಗೋ ಕೊರೊನಾ ಗೋ ಎಂದು ಗುಂಪಾಗಿ ನಿಂತು ಹೇಳುವ ವೀಡಿಯೋವನ್ನೂ ಬಹುತೇಕ ಮಂದಿ ಶೇರ್ ಮಾಡಿ ವ್ಯಂಗ್ಯವಾಡಿದ್ದಾರೆ. ಕೊರೋನ ಪ್ರಾರಂಭ ಘಟ್ಟದಲ್ಲಿ ಪೆÇಲೀಸರು ಜನಸಾಮಾನ್ಯರ ಮೇಲೆ ನಡೆಸಿದ್ದ ದೌರ್ಜನ್ಯಗಳ ಕುರಿತಾದಂತೆಯೂ ಜನರು ನೆನಪಿಸಿಕೊಂಡಿದ್ದಾರೆ.
"ಕಳೆದ ವರ್ಷ ಈ ಸಂದರ್ಭದಲ್ಲಿ ಕೊರೋನಾ ಕುರಿತಾದಂತೆ ನಾವೆಲ್ಲರೂ ಭಯಪಟ್ಟಿದ್ದೆವು. ಆದರೆ ಸದ್ಯ ಈ ಪರಿಸ್ಥಿತಿಯೆಲ್ಲಾ ತಿಳಿಯಾಗಿದೆ. ಆದರೂ, ಕೊರೋನ 2ನೆ ಅಲೆಯ ಕುರಿತು ನಾವು ಎಚ್ಚರಿಕೆ ವಹಿಸಬೇಕಾಗಿದೆ ಎಂದು ಬಳಕೆದಾರರೋರ್ವರು ಟ್ವೀಟ್ ಮಾಡಿದ್ದಾರೆ. "21 ದಿನಗಳ ಲಾಕ್ ಡೌನ್ ವಿಧಿಸಿದ ಬಳಿಕ ನಾವು ಕೊರೋನವನ್ನು ಸೋಲಿಸಿ ಸುರಕ್ಷಿತರಾಗಬೇಕಿತ್ತು. ಆದರೆ ಅದರ ಬಳಿಕ ಏನು ನಡೆಯಿತು ಎಂದು ಎಲ್ಲರಿಗೂ ತಿಳಿದಿದೆ. ಇದೊಂದು ಮೂರ್ಖತನದ ನಿರ್ಧಾರವಾಗಿತ್ತು" ಎಂದು ವ್ಯಕ್ತಿಯೋರ್ವರು ಕಮೆಂಟ್ ಮಾಡಿದ್ದಾರೆ.