ಮುಳ್ಳೇರಿಯ: ರಾಜ್ಯದಲ್ಲಿ ಇದೀಗ ಮತ್ತೊಂದು ಚುನಾವಣೆ ಸಜ್ಜಾಗುತ್ತಿದೆ. ಜನರು ಚುನಾವಣಾ ಸುದ್ದಿಗಳ ಬಗ್ಗೆ ತಿಳಿಯಲು ಇಷ್ಟಪಡುವುದು ಸಹಜ.ಇದೀಗ ನವ ಮಾದ್ಯಮಗಳ ಮೂಲಕ ತಕ್ಷಣದ ಸುದ್ದಿ ಮಾಹಿತಿಗಳನ್ನು ಪಡೆಯುತ್ತಿರುವುದು ಸಹಜ. ಆದರೆ ಸ್ಥಳೀಯರು ದಶಕಗಳ ಹಿಂದಿನ ದಿನಗಳಲ್ಲಿ ಸುದ್ದಿಗಳಿಗಾಗಿ ಒಟ್ಟುಗೂಡುತ್ತಿದ್ದ ರೇಡಿಯೊ ಪೆವಿಲಿಯನ್ ಇಂದಿನ ಹೊಸ ತಲೆಮಾರಿಗೆ ಕುತೂಹಲಕರವಾಗಿ ಗಮನ ಸೆಳೆಯುತ್ತಿದೆ. ಆದರೆ ಅದನ್ನು ರಕ್ಷಿಸಲು ಯಾರೂ ಇಲ್ಲದೆ ವಿನಾಶದ ಹಾದಿಯಲ್ಲಿದೆ.
ಪ್ರಸ್ತುತ ಬೋವಿಕ್ಕಾನ ಪೇಟೆಯ ಮುಳಿಯಾರ್ ಸಿಎಚ್ಸಿ ರಸ್ತೆಯಲ್ಲಿ ಇಂತಹ ಪ್ರಾಚೀನ ಐತಿಹ್ಯದ ಪಳೆಯುಳಿಕೆ ಈಗಲು ಕಂಡುಬರುತ್ತಿದೆ. ಭಾರತದ ಸ್ವಾತಂತ್ರ್ಯೋತ್ಸವದ ಬೆಳ್ಳಿ ಮಹೋತ್ಸವದ ಅಂಗವಾಗಿ ಜವಾಹರಲಾಲ್ ನೆಹರು ರೇಡಿಯೋ ಪೆವಿಲಿಯನ್ ನ್ನು ಮುಳಿಯಾರ್ ಪಂಚಾಯತಿ ಸ್ಥಾಪಿಸಿತ್ತು. 1972 ರಲ್ಲಿ ಮುಳಿಯಾರ್ ಪಂಚಾಯತಿ ಅಧ್ಯಕ್ಷರಾಗಿದ್ದ ನಾರಾಯಣನ್ ನಂಬಿಯಾರ್ ಅವರು ಪೆವಿಲಿಯನ್ಗೆ ಶಿಲಾನ್ಯಾಸ ಮಾಡಿದ್ದರು.
ನಂತರ ಪೆವಿಲಿಯನ್ ನ್ನು 1974 ರಲ್ಲಿ ಅಂದಿನ ಪಂಚಾಯತಿ ನಿರ್ದೇಶಕ ಎಂ.ಸುಬ್ಬಯ್ಯ ಉದ್ಘಾಟಿಸಿದ್ದರು. ಆ ಕಾಲದಲ್ಲಿ ಮುಳಿಯಾರ್ ಜನರು ಸುದ್ದಿ ಮತ್ತು ಸಂಗೀತ ಆಲಿಸಲು ಈ ರೋಡಿಯೊ ಪೆವಿಲಿಯನ್ ನ್ನು ಅವಲಂಬಿಸಿದ್ದರು. ಚುನಾವಣಾ ಸಮಯ ಬಂದಾಗ ಫಲಿತಾಂಶಗಳನ್ನು ತಿಳಿಯಲು ಮುಂಜಾನೆಯಿಂದಲೇ ಅನೇಕ ಜನರು ಪೆವಿಲಿಯನ್ ಬಳಿ ಸೇರುತ್ತಿದ್ದರು. ಮತ ಎಣಿಕೆಯ ಸಮಯದಲ್ಲಿ ತಡರಾತ್ರಿ ವರೆಗೂ ಕುಳಿತು, ಜನರು ಸುದ್ದಿ ತಿಳಿದುಕೊಳ್ಳುತ್ತಿದ್ದರು. ಆಲ್ ಇಂಡಿಯಾ ರೇಡಿಯೊದಲ್ಲಿ ಪ್ರಸಾರವಾದ ಕಾರ್ಯಕ್ರಮಗಳನ್ನು ಪೆವಿಲಿಯನ್ ಮೇಲೆ ಸ್ಥಾಪಿಸಲಾದ ಎರಡು ಧ್ವನಿವರ್ಧಕಗಳ ಮೂಲಕ ಪ್ರಸಾರ ಮಾಡಲಾಗುತ್ತಿತ್ತು. ಇಂದಿನಂತೆ ರಾಜಕೀಯ ದ್ವೇಷವಿರಲಿಲ್ಲ.
ಒಳನಾಡಿನ ಹಳ್ಳಿಗರು ತಮ್ಮ ಬಿಡುವಿನ ಸಮಯದಲ್ಲಿ ಸುದ್ದಿ-ಮನೋರಂಜನೆಗಳಿಗೆ ಏಕೈಕ ಮೂಲವಾಗಿತ್ತು ಇಂತಹ ರೇಡಿಯೋ ಪೆವಿಲಿನಿಯನ್ ಗಳು. ಆರಂಭದಲ್ಲಿ ಪೆವಿಲಿಯನ್ ಕಾವಲಿಗಾಗಿಯೇ ಒಬ್ಬ ಉದ್ಯೋಗಿ ಇದ್ದ. ರೇಡಿಯೊ ಪೆವಿಲಿಯನ್ ಕೇಂದ್ರದ ಬಳಿಕ ರೇಡಿಯೊ ಮತ್ತು ಆ ಬಳಿಕ ಟಿವಿ, ಇಂದಿಗ ಇಂಟರ್ನೆಟ್ ಗಳು ಪ್ರತಿ ಮನೆಯಲ್ಲೂ ಬಳಸಲ್ಪುಡುತ್ತಿರುವ ಇಂದು ಇಂತಹ ರೇಡಿಯೊ ಪೆವಿಲಿನಿಯನ್ ಗಳು ಪ್ರದರ್ಶನದ ಅವಶೇಷಗಳಾಗಿವೆ. ಇಂದು, ಬೋವಿಕ್ಕಾನದ ಈ ಕೇಂದ್ರ ದುಸ್ಥಿತಿಯಲ್ಲಿದೆ. ಹಳೆಯ ಕಟ್ಟಡವಾಗಿರುವುದರಿಂದ ಕಟ್ಟಡದೊಳಗೆ ಸಮಾಜ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ. ಈ ಐತಿಹಾಸಿಕ ಸ್ಮಾರಕವನ್ನು ಸಂರಕ್ಷಿಸಬೇಕೆಂದು ಸ್ಥಳೀಯರು ಬಯಸುತ್ತಾರೆ.






