ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ಸೇನೆಗಳು ತಮ್ಮ ಎಲ್ಲಾ ಕದನ ವಿರಾಮ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಒಪ್ಪಿದ ಬೆನ್ನಲ್ಲೇ, ಪಾಕಿಸ್ತಾನ ಸೇರಿದಂತೆ ಎಲ್ಲಾ ನೆರೆಹೊರೆಯವರೊಂದಿಗೆ ಸಾಮಾನ್ಯ ಸಂಬಂಧ ಬಯಸುವುದಾಗಿ ಭಾರತ ಶುಕ್ರವಾರ ಹೇಳಿದೆ ಮತ್ತು ಉಭಯ ದೇಶಗಳ ನಡುವಿನ ಎಲ್ಲಾ ಸಮಸ್ಯೆಗಳನ್ನು ದ್ವಿಪಕ್ಷೀಯವಾಗಿ ಮತ್ತು ಶಾಂತಿಯುತವಾಗಿ ಬಗೆಹರಿಯಬೇಕು ಎಂದು ಪ್ರತಿಪಾದಿಸಿದೆ.
ಕಳೆದ ತಿಂಗಳು ಭಾರತ ಮತ್ತು ಪಾಕಿಸ್ತಾನ ಡಿಜಿಎಂಒಗಳ ನಡುವಿನ ಹಾಟ್ಲೈನ್ ಚರ್ಚೆಯ ನಂತರ, ನಿಯಂತ್ರಣ ರೇಖೆ ಮತ್ತಿತರ ಇತರ ಎಲ್ಲ ಕ್ಷೇತ್ರಗಳ ಉದ್ದಕ್ಕೂ ಎಲ್ಲಾ ಒಪ್ಪಂದಗಳು, ತಿಳುವಳಿಕೆಗಳು ಮತ್ತು ಕದನ ವಿರಾಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಉಭಯ ಪಕ್ಷಗಳು ಒಪ್ಪಿಕೊಂಡಿವೆ.
ಎರಡು ಕಡೆಯವರ ಕದನ ವಿರಾಮ ಒಪ್ಪಂದ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ, ಭಾರತವು ಪಾಕಿಸ್ತಾನ ಸೇರಿದಂತೆ ತನ್ನ ಎಲ್ಲಾ ನೆರೆಹೊರೆಯವರೊಂದಿಗೆ ಸಾಮಾನ್ಯ ಸಂಬಂಧವನ್ನು ಬಯಸುತ್ತದೆ.ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಸ್ಯೆಗಳನ್ನು ದ್ವಿಪಕ್ಷೀಯವಾಗಿ ಮತ್ತು ಶಾಂತಿಯುತವಾಗಿ ಪರಿಹರಿಸಬೇಕು ಎಂದು ನಾವು ನಿರಂತರವಾಗಿ ಹೇಳಿಕೊಂಡು ಬಂದಿದ್ದೇವೆ. ಪ್ರಮುಖ ವಿಷಯಗಳ ಬಗ್ಗೆ ನಮ್ಮ ನಿಲುವು ಬದಲಾಗದೆ ಉಳಿದಿದೆ ಎಂದು ಅವರು ಹೇಳಿದರು.
ಭಾರತ ಮತ್ತು ಪಾಕಿಸ್ತಾನ 2003 ರಲ್ಲಿ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದವು, ಆದರೆ, ಕಳೆದ ಹಲವಾರು ವರ್ಷಗಳಲ್ಲಿ ಒಪ್ಪಂದಕ್ಕಿಂತಲೂ ಉಲ್ಲಂಘನೆಗಳೇ ಹೆಚ್ಚಾಗಿವೆ.





