ನವದೆಹಲಿ: ಚೀನಾದೊಂದಿಗಿನ ತನ್ನ ಸಂಬಂಧವು 'ಸಂಕೀರ್ಣ'ವಾದುದು ಎಂದು ಭಾರತ ಬುಧವಾರ ಪ್ರತಿಪಾದಿಸಿದೆ. ಜತೆಗೆ ಸೂಕ್ಷ್ಮ ವಿಷಯಗಳು, ಪರಸ್ಪರರ ಕಾಳಜಿ ಮತ್ತು ಆಕಾಂಕ್ಷೆಗಳನ್ನು ಗೌರವಿಸುವ ಮೂಲಕ ಭವಿಷ್ಯದ ದಿಕ್ಕನ್ನು ನಿರ್ಧರಿಸಿ, ಉತ್ತಮ ಸಂಬಂಧ ಸಾಧಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ.
ಎಲ್ಲ ರೀತಿಯ ಘರ್ಷಣೆಗೆ ಕೇಂದ್ರಬಿಂದುವಾಗಿರುವ ಪೂರ್ವ ಲಡಾಕ್ನ ವಾಸ್ತವ ಗಡಿ ನಿಯಂತ್ರಣ ರೇಖೆಯ ಬಳಿ ಇರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಭಾರತವು ಚೀನಾದೊಂದಿಗೆ ಚರ್ಚೆ ಮುಂದುವರಿಸಲಿದೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿರುವ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.
ಪೂರ್ವ ಲಡಾಖ್ ಸಂಘರ್ಷದ ವಿಷಯ ಉಲ್ಲೇಖಿಸಿರುವ ಮುರಳೀಧರನ್, 'ಕಳೆದ ವರ್ಷದ ಏಪ್ರಿಲ್, ಮೇ ತಿಂಗಳಿನಿಂದ ಚೀನಾ ಈ ಪ್ರದೇಶದಲ್ಲಿನ ಎಲ್ಎಸಿಯ ಉದ್ದಕ್ಕೂ ಯಥಾಸ್ಥಿತಿ ಬದಲಾಯಿಸುವ ಹಲವು ಪ್ರಯತ್ನಗಳನ್ನು ನಡೆಸಿತು. ನಮ್ಮ ದೇಶದ ಸಶಸ್ತ್ರ ಪಡೆಗಳು ಇದಕ್ಕೆ ತಕ್ಕ ಉತ್ತರ ನೀಡಿವೆ' ಎಂದು ಹೇಳಿದ್ದಾರೆ.
'ಇಂತಹ ಏಕಪಕ್ಷೀಯ ಪ್ರಯತ್ನಗಳು ಸ್ವೀಕಾರಾರ್ಹವಲ್ಲ ಮತ್ತು ಇಂತಹ ಪ್ರಯತ್ನಗಳು ಶಾಂತಿ ಹಾಗೂ ಸೌಹಾರ್ದ ಕೆಡಿಸುತ್ತವೆ ಎನ್ನುವುದನ್ನು ಚೀನಾಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಹಾಗೆಯೇ ಎರಡೂ ದೇಶಗಳು ತಮ್ಮ ಭಿನ್ನಾಭಿಪ್ರಾಯ ಬದಿಗೊತ್ತಲು, ಮುಂದೆ ಯಾವುದೇ ವಿಷಯದಲ್ಲಿ ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳು ಉದ್ಭವಿಸಲು ಅವಕಾಶ ನೀಡುವುದಿಲ್ಲವೆಂದು ಒಪ್ಪಿಕೊಂಡಿವೆ' ಎಂದು ಮುರಳೀಧರನ್ ಹೇಳಿದ್ದಾರೆ.


