ನವದೆಹಲಿ: ದೇಶದಲ್ಲಿ 6 ತಿಂಗಳ ಬಳಿಕ ಅತ್ಯಧಿಕ ದಾಖಲೆ ಪ್ರಮಾಣದಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ 8 ರಾಜ್ಯಗಳಲ್ಲಿ ಶೇಕಡ 81.42ರಷ್ಟು ಪ್ರಮಾಣ ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಮಹಾರಾಷ್ಟ್ರ, ಕರ್ನಾಟಕ, ಛತ್ತೀಸ್ಗಢ, ದೆಹಲಿ, ತಮಿಳುನಾಡು, ಉತ್ತರ ಪ್ರದೇಶ, ಪಂಜಾಬ್ ಮತ್ತು ಮಧ್ಯಪ್ರದೇಶದಲ್ಲಿ ಸೋಂಕು ಹೆಚ್ಚಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ದೇಶದಲ್ಲಿ ಸೋಂಕು ಹೆಚ್ಚಾಗುತ್ತಿರುವ ಬೆನ್ನಲ್ಲೇ ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚಾಗುತ್ತಲೇ ಇದೆ. ದೇಶದಲ್ಲಿ ಇದೀಗ ಸಕ್ರಿಯ ಪ್ರಕರಣಗಳ ಸಂಖ್ಯೆ 6 ಲಕ್ಷ ಗಡಿ ದಾಟಿದೆ.
ಪ್ರಸ್ತುತ ದೇಶದಲ್ಲಿರುವ ಒಟ್ಟಾರೆ ಸಕ್ರಿಯ ಪ್ರಕರಣಗಳ ಪೈಕಿ ಶೇ.50ರಷ್ಟು ಪ್ರಕರಣಗಳು ಪುಣೆ, ಮುಂಬೈ, ನಾಗ್ಪುರ, ನಾಶಿಕ್, ಬೆಂಗಳೂರು ನಗರ, ಔರಂಗಾಬಾದ್, ದೆಹಲಿ, ಅಹ್ಮದಾಬಾದ್, ನಂದೆಡ್ ಈ 10 ಜಿಲ್ಲೆಗಳಲ್ಲಿಯೇ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರ, ಕರ್ನಾಟಕ, ಛತ್ತೀಸ್ಗಡ, ಕೇರಳ ಮತ್ತು ಪಂಜಾಬ್ ರಾಜ್ಯಗಳಲ್ಲಿಯೇ ಶೇ.77.3ರಷ್ಟು ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.
ದೇಶದಲ್ಲಿಂದು ಒಟ್ಟಾರೆ 89,219 ಹೊಸ ಪ್ರಕಱಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1.23 ಕೋಟಿಗೆ ಏರಿಕೆಯಾಗಿದೆ. ಇದಲ್ಲದೆ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 714 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 1,64,110ಕ್ಕೆ ತಲುಪಿದೆ. ದೇಶದಲ್ಲಿಂದು ಪತ್ತೆಯಾಗಿರುವ 714 ಸಾವುಗಳ ಪೈಕಿ ಮಹಾರಾಷ್ಟ್ರ ಒಂದರಲ್ಲಿಯೇ 481, ಪಂಜಾಬ್ ನಲ್ಲಿ 57 ಸಾವುಗಳು ಸಂಭವಿಸಿವೆ.
ದೇಶದಲ್ಲಿಂದು ಪತ್ತೆಯಾಗಿರುವ 89,129 ಹೊಸ ಪ್ರಕರಣಗಳಲ್ಲಿ ಮಹಾರಾಷ್ಟ್ರ ರಾಜ್ಯವೊಂದರಲ್ಲಿಯೇ 47,913, ಕರ್ನಾಟದಲ್ಲಿ 4,991, ಛತ್ತೀಸ್ಗಢದಲ್ಲಿ 4,174 ಕೇಸ್ ಗಳು ಪತ್ತೆಯಾಗಿರುವುದು ಕಂಡು ಬಂದಿದೆ.
ದೇಶದ ಕೆಲವು ರಾಜ್ಯಗಳಲ್ಲಿ ಕೊರೋನಾ ಅಬ್ಬರಿಸುತ್ತಿದ್ದರೆ, ಇನ್ನೂ ಕೆಲವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಳಿಕೆಮುಖವಾಗುತ್ತಿರುವುದು ಕಂಡು ಬಂದಿದೆ.
ಒಡಿಶಾ, ಅಸ್ಸಾಂ, ಲಡಾಖ್, ದಾದ್ರ, ನಗರ್ ಹವೇಲಿ, ದಮನ್, ದಿಯು, ನಾಗಾಲ್ಯಾಂಡ್, ಮೇಘಾಲಯ, ಮಣಿಪುರ, ತ್ರಿಪುರ, ಸಿಕ್ಕಿಂ, ಲಕ್ಷದ್ವೀಪ, ಮಿಜೋರಾಂ, ಅಂಡಮಾನ್ ಮತ್ತು ನಿಕೋಬಾರ್, ಅರುಣಾಚಲ ಪ್ರದೇಶದಲ್ಲಿ ಒಂದೂ ಸಾವು ಸಂಭವಿಸಿಲ್ಲ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ದೇಶದಲ್ಲಿನ ಕೊರೋನಾ ಪರಿಸ್ಥಿತಿ ಕುರಿತು ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರು, ಮಹಾರಾಷ್ಟ್ರ, ಕರ್ನಾಟಕ ಸೇರಿದಂದೆ ದೇಶದ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೋನಾ ಬಿಕ್ಕಟ್ಟು ತೀವ್ರ ಗಂಭೀರ ಸ್ಥಿತಿ ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ದೇಶದಲ್ಲಿ ಈ 11 ರಾಜ್ಯಗಳಲ್ಲೇ ಶೇ.90 ರಷ್ಟು ಸೋಂಕು ಹಾಗೂ ಶೇ.90.05 ಸಾವಿನ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಈ ಎಲ್ಲಾ ರಾಜ್ಯಗಳು ಸೋಂಕು ನಿಯಂತ್ರಣದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸೋಂಕನ್ನು ನಿಗ್ರಹಿಸಬೇಕೆಂದು ಸೂಚನೆ ನೀಡಿದ್ದರು.