ನವದೆಹಲಿ: ಕೋವಿಡ್-19 ಇಂಜೆಕ್ಷನ್ ರೆಮಿಡಿಸಿವಿರ್ ನ ಲಕ್ಷಾಂತರ ಬಾಟಲಿಗಳನ್ನು ಭಾರತ ರಫ್ತು ಮಾಡಿರಬಹುದು. ಆದರೆ, ತನ್ನ ಸ್ವಂತ ದೇಶದ ಜನರು ಈ ಇಂಜೆಕ್ಷನ್ ಕೊರತೆಯಿಂದ ತೊಂದರೆ ಅನುಭವಿಸುವಂತಾಗಿದೆ ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಹೇಳಿದೆ.
ಭಾರತದಲ್ಲಿನ ಅನೇಕ ಕಂಪನಿಗಳು ಈ ಇಂಜೆಕ್ಷನ್ ಉತ್ಪಾದಿಸಲಿದ್ದು, ಲಕ್ಷಾಂತರ ಬಾಟಲಿಗಳನ್ನು ರಫ್ತು ಮಾಡಿರಬಹುದು. ಆದರೆ, ನಮ್ಮ ದೇಶದಲ್ಲಿನ ರೋಗಿಗಳಿಗೆ ಸಾಕಾಗುವಷ್ಟು ಇಂಜೆಕ್ಷನ್ ಇಲ್ಲದಂತಾಗಿದೆ ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಹೇಳಿದರು.
ದೆಹಲಿಯಲ್ಲಿ ಈ ಇಂಜೆಕ್ಷನ್ ಕೊರತೆಯಿರುವುದು ಅಂಕಿ ಅಂಶಗಳಿಂದ ತಿಳಿದುಬಂದಿದ್ದು, ಇವುಗಳಿಗೆ ಸಂಬಂಧಿಸಿದ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಬಹುದೇ ಎಂದು ಕೇಂದ್ರ ಸರ್ಕಾರ, ಡಿಸಿಜಿಐ ಮತ್ತು ಐಸಿಎಂಆರ್ ನ್ನು ನ್ಯಾಯಾಲಯ ಕೇಳಿದೆ.
ದೆಹಲಿ ಸರ್ಕಾರಕ್ಕೆ ಎಷ್ಟು ಇಂಜೆಕ್ಷನ್ ನ್ನು ಹಂಚಿಕೆ ಮಾಡಲಾಗಿದೆ. ಯಾವ ಆಧಾರದ ಮೇಲೆ ನಿರ್ಧರಿಸಲಾಗಿದೆ.ಯಾರಾದರೂ ನೇರವಾಗಿ ಈ ಇಂಜೆಕ್ಷನ್ ಖರೀದಿಗೆ ತಯಾರಕರು ಅಥವಾ ಪೂರೈಕೆದಾರರನ್ನು ಸಂಪರ್ಕಿಸಬಹುದೇ ಎಂದು ಕೇಂದ್ರ ಸರ್ಕಾರವನ್ನು ನ್ಯಾಯಾಲಯ ಕೇಳಿದ್ದು, ಈ ವಿಚಾರಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಏಪ್ರಿಲ್ 28ಕ್ಕೆ ಮುಂದೂಡಿದೆ.