ತಿರುವನಂತಪುರ: ವಿಶಿಷ್ಟ ವಿದ್ಯಮಾನವೊಂದರಲ್ಲಿ ಇಂದು ನಡೆದ ಸಿಪಿಎಂ ರಾಜ್ಯ ಪ್ಯಾಲಿಟ್ ಬ್ಯೂರೋ ಸಭೆಯು ಆರೋಗ್ಯ ಸಚಿವೆ ಕೆ.ಕೆ.ಶೈಲಜ ಟೀಚರ್ ಅವರಿಗೆ ಎರಡನೇ ಬಾರಿಗೆ ಮಂತ್ರಿ ಪದವಿ ನೀಡದಿರುವ ಮಹತ್ತರ ತೀರ್ಮಾನಕ್ಕೆ ಬಂದಿದ್ದು, ನಿಬ್ಬೆರಗು ಮೂಡಿಸಿದೆ. ಈ ಬಾರಿ ಶೈಲಾಜಾ ಅವರಿಗೆ ಪಕ್ಷದ ವಿಪ್ ಸ್ಥಾನ ನೀಡಲಾಗಿದೆ. ಕಳೆದ ಸಂಪುಟದಲ್ಲಿ ಆರೋಗ್ಯ ಇಲಾಖೆಯನ್ನು ಜಾಗತಿಕ ಮಟ್ಟದಲ್ಲೇ ಗುರುತಿಸುವಂತೆ ಮಾಡಿದ ಶೈಲಜ ಟೀಚರ್ ಅವರಿಗೆ ಈಬಾರಿ ಸಚಿವ ಸ್ಥಾನ ನೀಡದಿರುವುದು ರಾಜಕೀಯಯ ವಲಯದಲ್ಲಿ ಆಘಾತವನ್ನುಂಟುಮಾಡಿದೆ.
ಮಂಗಳವಾರ ಬೆಳಿಗ್ಗೆ ಸಭೆ ಸೇರಿದ ಸಿಪಿಎಂ ರಾಜ್ಯ ಸಮಿತಿಯಲ್ಲಿ ಕೊಡಿಯೇರಿ ಬಾಲಕೃಷ್ಣನ್ ಹೊಸ ಮಂತ್ರಿಗಳ ಪಟ್ಟಿಯನ್ನು ಮಂಡಿಸಿದರು. ಶೈಲಜ ಟೀಚರ್ ಅವರಿಗೆ ಮಾತ್ರ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಕೊಡಿಯೇರಿ ಸಭೆಗೆ ಮಾಹಿತಿ ನೀಡಿದರು. 88 ಸದಸ್ಯರ ರಾಜ್ಯ ಸಮಿತಿಯಲ್ಲಿ ಬಹುಮvದಿಂದ ಕೊಡಿಯೇರಿಯ ನಿಲುವನ್ನು ಬೆಂಬಲಿಸಿತು.
ಕೇವಲ ಏಳು ಜನರು ಶೈಲಾಜ ಪರ ವಾದಿಸಿದರು. ಸಿಪಿಎಂನಲ್ಲಿ ಇತಿಹಾಸವು ಮತ್ತೊಮ್ಮೆ ಪುನರಾವರ್ತನೆಯಾಗಿರುವುದು ಗಮನಾರ್ಹ. ಸಿ.ಪಿ.ಎಂ ಪಕ್ಷ ಈ ಹಿಂದೆ ಕೆ.ಆರ್.ಗೌರಿಯಮ್ಮ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡುವುದಾಗಿ ನಂಬಿಸಿ ಬಳಿಕ ಪಕ್ಷದಿಂದ ಸ್ಪರ್ಧಿಸದಂತೆ ತಡೆಹಿಡಿದ ಪರಂಪರೆ ಇರುವ ಸಿಪಿಎಂ ಅಂತಹದೇ ಹೆಜ್ಜೆಗಳನ್ನೇ ಶೈಲಜ ಅವರ ಬಗೆಗೂ ತಳೆದಂತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವಿಶ್ಲೇಷಣೆಗಳು ವ್ಯಕ್ತಗೊಂಡಿವೆ.
ಕೆ.ಕೆ.ಶೈಲಜಾ ಅವರು 2016 ರಲ್ಲಿ ಕೂತುಪರಂಬದಿಂದ ಮತ್ತು ಈ ಬಾರಿ ಮಟ್ಟನ್ನೂರಿನಿಂದ ವಿಧಾನಸಭೆಗೆ ಆಯ್ಕೆಯಾಗಿರುವರು. ಈ ಬಾರಿ ಶೈಲಜ ಅವರು ಸಿಪಿಎಂನ ಇತರ ಸ್ಪರ್ಧಾಳುಗಳಿಗಿಂತ ಅತೀ ಹೆಚ್ಚು ಬಹುಮತದಿಂದ ಗೆದ್ದ ಅಭ್ಯರ್ಥಿಯೂ ಆಗಿರುವುದು ವಿಶೇಷ. ನಿಪಾ ಮತ್ತು ಕೋವಿಡ್ ನಂತಹ ಸಾಂಕ್ರಾಮಿಕ ರೋಗಗಳನ್ನು ಎದುರಿಸುವ ಕಾಲಘಟ್ಟದಲ್ಲಿ ಆರೋಗ್ಯ ಸಚಿವೆಯಾಗಿ ಶೈಲಜ ಅವರ ಆಡಳಿತ ಶೈಲಿಯು ದೊಡ್ಡ ಜನಪ್ರಿಯತೆಗಳಿಸಿತ್ತು.
ಪಿಣರಾಯಿ ಸರ್ಕಾರÀ ಎರಡನೇ ಅವಧಿಗೆ ಪುನರಾಯ್ಕೆಗೊಳ್ಳಲು ಶೈಲಾಜಾ ಅವರ ಚಟುವಟಿಕೆಗಳು ಹೆಚ್ಚು ಕಾರಣವೆಂದು ಪಕ್ಷದ ಮೂಲಗಳೇ ಈಹಿಂದೆ ತಿಳಿಸಿದ್ದವು. ಈ ಮಧ್ಯೆ ಶೈಲಜರಿಗೆ ಸಚಿವ ಸ್ಥಾನ ನೀಡದಿರುವುದು ಪಕ್ಷದೊಳಗೆ ಸ್ಥಿತ್ಯಂತರಕ್ಕೆ ಕಾರಣವಾಗಲಿದೆ ಎಂದು ಅಂದಾಜಿಸಲಾಗಿದೆ.
ಸಚಿವ ಸ್ಥಾನ ನೀಡದಿರುವ ಬಗ್ಗೆ ಪ್ರತಿಕ್ರಿಸಿರುವ ಶೈಲಜ ಅವರು ಪಕ್ಷದ ತೀರ್ಮಾನಕ್ಕೆ ತಾನು ಸದಾ ಬದ್ದ. ಯಾವುದೇ ಪ್ರತಿಭಟನೆಯೂ ತನ್ನ ಕಡೆಯಿಂದ ಇಲ್ಲ ಎಂದು ಹೇಳುವ ಮೂಲಕ ತನ್ನ ದೊಡ್ಡತನವನ್ನು ಮೆರೆದಿರುವುದು ಮತ್ತಷ್ಟು ಅಚ್ಚರಿಗೂ ಕಾರಣವಾಗಿದೆ.