ಕೊಚ್ಚಿ: ಲಾಕ್ ಡೌನ್ ಕಾರಣ ಮನೆಗಳೊಳಗೇ ಬಂಧಿಗಳಾಗಿರುವ ವಿದ್ಯಾರ್ಥಿಗಳ ಮನೋದೃಢತೆಯನ್ನು ಬಲಗೊಳಿಸಲು ಅಧ್ಯಾಪಕರೋರ್ವರ ಶ್ರಮ ಶ್ಲಾಘನೆಗೊಳಗಾಗಿದೆ. ಪರವೂರು ಎಸ್.ಎನ್.ವಿ. ಸಂಸ್ಕøತ ಶಾಲೆಯ ಶಿಕ್ಷಕ ಪ್ರಮೋದ್ ಮಲ್ಯಂಕರ ಅವರು ಮಕ್ಕಳಿಗಾಗಿ ಹಲವು-ಹತ್ತು ಚಟುವಟಿಕೆಗಳನ್ನು ಆನ್ ಲೈನ್ ಮೂಲಕ ಆಯೋಜಿಸಿ ತರಬೇತಿ ನೀಡುತ್ತಿರುವುದು ಭಾರೀ ಪ್ರಶಂಸನೆಗೆ ಕಾರಣವಾಗಿದೆ. ಮೊಬೈಲ್ ಪೋನ್ ಬಳಕೆಯಿಂದ ತೊಡಗಿ ದೈನಂದಿನ ವೇಳಾಪಟ್ಟಿಯವರೆಗೆ ವಿದ್ಯಾರ್ಥಿಗಳಿಗೆ ಕಲಿಸಲು ಶಿಕ್ಷಕನು ವಿದ್ಯಾರ್ಥಿಗಳನ್ನು ತಯಾರುಗೊಳಿಸುತ್ತಿರುವುದು ಪ್ರಶಂಸೆಗೆ ಕಾರಣವಾಗಿದೆ.
ಪ್ರತಿಯೊಬ್ಬರೂ ತಮ್ಮ ಮೊಬೈಲ್ ಪೋನ್ ನ್ನು ಕಲಿಕೆ ಮತ್ತು ಸೃಜನಶೀಲತೆಗಾಗಿ ಬಳಸುವುದರ ಕುರಿತು ಪ್ರಮೋದ್ ಮಾಸ್ತರ್ ಅವರ ಪ್ರಮುಖ ಮಾರ್ಗದರ್ಶನವಾಗಿ ವಿದ್ಯಾರ್ಥಿಗಳ ಸುಲಲಿತ ಬದುಕಿಗೆ ಪ್ರೇರಣೆಯಾಗಿದೆ. ಮನೆ, ಪರಿಸರದ ಗಿಡ-ಮರಗÀಳು, ಹೂಗಳು ಮತ್ತು ಇತರ ಭೂಮಿಯ ದೃಶ್ಯಗಳನ್ನು ಸೆರೆಹಿಡಿದು ಎಡಿಟಿಂಗ್ ಮಾಡುವುದು, ಮತ್ತು ವೀಡಿಯೊಗಳಿಗೆ ಸಂಗೀತವನ್ನು ಜೋಡಿಸುವ ಕ್ರಮಗಳು ಮೊದಲಾದವುಗಳನ್ನು ಪ್ರಮೋದ್ ಮಾಸ್ತರ್ ಸ್ತುತ್ಯರ್ಹವಾಗಿ ಕಲಿಸಿಕೊಡುತ್ತಿದ್ದಾರೆ. ದಿನವಿಡೀ ಆನ್ಲೈನ್ ತರಗತಿಗಳು ಲಭ್ಯವಿಲ್ಲದ ಕಾರಣ ಇತರ ಸಣ್ಣ ಕೋರ್ಸ್ಗಳನ್ನು ಆನ್ಲೈನ್ನಲ್ಲಿ ಕಲಿಯಲು ಅವರು ಸೂಚಿಸಿದ್ದಾರೆ. ಅಡುಗೆ ಮನೆ ನಮ್ಮ ನೆಚ್ಚಿನ ಸ್ಥಳವಾಗಿ ಆಕರ್ಷಣೀಯವಾಗಿರಬೇಕು ಮತ್ತು ತಾಯಂದಿರಿಗೆ ಸಹಾಯ ಮಾಡಲು ಮಕ್ಕಳು ಕೈಜೋಡಿಸಬೇಕು ಎಂದು ಪ್ರಮೋದ್ ಮಾಸ್ತರ್ ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಾರೆ. ಹೊಸ ಆಹಾರವನ್ನು ಸ್ವತಃ ಹೇಗೆ ತಯಾರಿಸಬೇಕೆಂದು ಕಲಿಸುತ್ತಿರುವ ಪ್ರಮೋದ್ ಮಾಸ್ತರ್, ಹಳೆಯ-ಶೈಲಿಯ ಮೇಲೋಗರಗಳು ಯಾವುವು ಮತ್ತು ತಯಾರಿಸುವುದು ಹೇಗೆ ಎಂದು ತನ್ನ ಹೆತ್ತವರನ್ನು ಕೇಳಲು ಸೂಚಿಸುತ್ತಾರೆ.
ವಿಶೇಷವೆಂದರೆ ತಮ್ಮ-ತಮ್ಮ ಕುಟುಂಬಗಳ, ಕುಟುಂಬ ವೃಕ್ಷವನ್ನು ಪುಸ್ತಕದಲ್ಲಿ ಹೇಗೆ ರಚಿಸಬೇಕೆಂಬುದನ್ನೂ ತರಬೇತಿಯ ಮೂಲಕ ಕಲಿಸಿ ಗಮನ ಸೆಳೆದಿರುವರು. ಅಜ್ಜ-ಅಜ್ಜಿಯರನ್ನು ಮರೆಯಬಾರದು ಮತ್ತು ಕುಟುಂಬದ ಎಲ್ಲರನ್ನೂ ನೆನಪಿಸಿಕೊಳ್ಳಬೇಕು. ಮತ್ತು ಅವರ ಹೆಸರು ಮತ್ತು ಚಿತ್ರದೊಂದಿಗೆ ಉತ್ತಮ ಆತ್ಮಚರಿತ್ರೆ ಮಾಡಬೇಕೆಂದು ಮಾಸ್ತರ್ ವಿದ್ಯಾರ್ಥಿಗಳಿಗೆ ನೆನಪಿಸುತ್ತಾರೆ. ಚಲನಚಿತ್ರಗಳನ್ನು ನೋಡುವುದು ತಪ್ಪಲ್ಲ ಮತ್ತು ಚಲನಚಿತ್ರಗಳ ಇತಿಹಾಸ ಮತ್ತು ವಿಜ್ಞಾನವನ್ನು ತಿಳಿದಿರಬೇಕು. ಅವುಗಳಲ್ಲಿರುವ ಜ್ಞಾನ ಮತ್ತು ಭಾಷೆಯ ಬಗ್ಗೆ ಪ್ರತಿಯೊಬ್ಬರೂ ಕಲಿಯಬೇಕು ಎಂದು ಮಾಸ್ತರ್ ಹೇಳುತ್ತಾರೆ. ಪ್ರತಿದಿನ ವ್ಯಾಯಾಮ ಮಾಡಿ ಹೇಗೆ ರಿಫ್ರೆಶ್ ಆಗಬೇಕೆಂದು ಹೇಳುವ ಪ್ರಮೋದ್ ಮಾಸ್ತರ್ ಹಳೆಯ ಶೈಲಿಯ ಜಾನಪದ ಆಟಗಳು ಮತ್ತು ಕಾಲಕ್ಷೇಪಗಳನ್ನು ಕಲಿಸಲು ಪೋಷಕರಿಗೆ ಸಲಹೆಗಳನ್ನೂ ನೀಡುತ್ತಾರೆ. ಇಂದಿನ ಪರಿಸ್ಥಿತಿಯಲ್ಲಿ ಮನೆಯನ್ನು ಉತ್ತಮ ಶಾಲೆಯನ್ನಾಗಿ ಮಾಡಲು ನಾವು ಪ್ರಯತ್ನಿಸಬೇಕು ಎಂದು ಪ್ರಮೋದ್ ಮಾಸ್ತರ್ ಪದೇ-ಪದೇ ನೆನಪಿಸಿ ಮಾದರಿಯಾಗಿರುವರು.







