ತಿರುವನಂತಪುರ: ಎರಡನೇ ಅವಧಿಗೆ ಎಲ್.ಡಿ.ಎಫ್ ಸರ್ಕಾರ ಈ ತಿಂಗಳ 20 ರಂದು ಪ್ರಮಾಣವಚನ ಸ್ವೀಕರಿಸಲಿರುವ ಕಾರಣ, ಏಕ ಪಕ್ಷಗಳಿಗೆ ಮಂತ್ರಿ ಸ್ಥಾನಗಳನ್ನು ನೀಡುವ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆ ಬಲಗೊಳ್ಳುತ್ತಿದೆ. ಸ್ಥಳೀಯಾಡಳಿತಗಳ ಚುನಾವಣೆಯ ಮಾದರಿಯಲ್ಲಿ ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ನಾಲ್ಕು ಏಕ ಪಕ್ಷಗಳ ನಡುವೆ ಸಚಿವ ಸ್ಥಾನಗಳನ್ನು ಹಂಚುವ ಕ್ರಮಗಳು ಪ್ರತಿಭಟನೆಗಳು ಭುಗಿಲೇಳಲು ಕಾರಣವಾಗುವ ಸೂಚನೆಗಳಿವೆ.
ಇಂತಹ ಅಧಿಕಾರದ ಸ್ಥಾನಗಳನ್ನು ಸಾಮಾನ್ಯವಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಹಂಚಿಕೊಳ್ಳಲಾಗುತ್ತದೆ. ಸಹ ಪಕ್ಷಗಳೆಂಬ ಸಭ್ಯತೆಯ ಹೆಸರಿನಲ್ಲಿ ಮತ್ತು ಆಡಳಿತವನ್ನು ಭದ್ರಪಡಿಸಿಕೊಳ್ಳಲು ಇದನ್ನು ಮಾಡಲಾಗುತ್ತಿದೆ. ಆದರೆ ಸಚಿವರಿಗೆ ಇದು ಬಿಕಟ್ಟನ್ನಷ್ಟೇ ಸೃಷ್ಟಿಸಲಿದೆ.
ಸಚಿವ ಸ್ಥಾನಕ್ಕಾಗಿ ಪಕ್ಷದೊಳಗೆ ಅಥವಾ ನಾಯಕರ ನಡುವೆ ವಿವಾದವಿದ್ದರೆ ಇಂತಹ ಹೊಂದಾಣಿಕೆ ಮಾಡಲಾಗುತ್ತದೆ. ಒಟ್ಟು ಅವಧಿಯ ಅರ್ಧದಷ್ಟು ಕಾಲವನ್ನು ಒಬ್ಬ ವ್ಯಕ್ತಿಗೆ ಮತ್ತು ಇನ್ನೊಬ್ಬರಿಗೆ ಮತ್ತರ್ಧವನ್ನು ಹಂಚಲಾಗುವ ಪರಿಪಾಠವಿದೆ. ಆದರೆ ರಾಜ್ಯ ಆಡಳಿತದ ಚುಕ್ಕಾಣಿ ಹಿಡಿಯುವ ಸರ್ಕಾರವೇ ಇಂತಹ ನಡೆ ಅನುಸರಿಸುವುದು ಹಿತಕರವಲ್ಲ ಎನ್ನುವುದೇ ವಿಶ್ಲೇಷಕರ ಅಭಿಮತ.
ಕ್ಲೀನ್ ಬಹುಮತ ಹೊಂದಿರದಿದ್ದಲ್ಲಿ ಸರ್ಕಾರವು ಅದನ್ನು ನಿರ್ವಹಿಸಲು ಇಂತಹ ಕ್ರಮಗಳನ್ನು ತೆಗೆದುಕೊಳ್ಳುವುದು ಸಹಜ. ಆದರೆ 99 ಸ್ಥಾನಗಳ ಅತ್ಯುಚ್ಚ ಬಹುಮತವಿದ್ದರೂ ರಾಠಜ್ಯದ ಎಡರಂಗ ಸರ್ಕಾರ ಇಂತಹದೊಂದು ಪ್ರಯತ್ನಕ್ಕೆ ಯಾಕೆ ಕೈಯಿಕ್ಕಿದೆ ಎಂಬುದು ಇಲ್ಲಿನ ಮುಖ್ಯ ಪ್ರಶ್ನೆಯಾಗಿದೆ.
ಕೇರಳ ಕಾಂಗ್ರೆಸ್ ಬಿ ಸದಸ್ಯ ಕೆ.ಬಿ. ಗಣೇಶ್ ಕುಮಾರ್ ಅವರನ್ನು ಮೊದಲ ಎರಡೂವರೆ ವರ್ಷ ಮತ್ತು ಉಳಿದ ಎರಡೂವರೆ ವರ್ಷಗಳ ಕಾಲ ಅಹ್ಮದ್ ದೇವರ್ಕೋವಿಲ್ ಗೆ ಸಚಿವ ಸ್ಥಾನ ಹಂಚಿಕೊಳ್ಳಲು ಸಿಪಿಎಂ ನಾಮನಿರ್ದೇಶನ ಮಾಡಿದೆ. ಡೆಮಾಕ್ರಟಿಕ್ ಕೇರಳ ಕಾಂಗ್ರೆಸ್ ನ ಆಂಟನಿ ರಾಜು ಮತ್ತು ಕಾಂಗ್ರೆಸ್ ಎಸ್ ಬಣದ ಕಡನ್ನಪಲ್ಲಿ ರಾಮಚಂದ್ರನ್ ಅವರು ಸಚಿವ ಸ್ಥಾನಗಳನ್ನು ಹಂಚಿಕೊಳ್ಳಲಿದ್ದಾರೆ. ಮೊದಲ ಅವಧಿಯಲ್ಲಿ ಯಾರಿರಬೇಕೆಂಬುzನ್ನು ಆ ಪಕ್ಷಗಳೇ ಪರಸ್ಪರ ನಿರ್ಧರಿಸಬೇಕೆಂಬುದು ಎಲ್.ಡಿ.ಎಫ್ ನೀಡಿರುವ ಉಚಿತ ಸಲಹೆಯಾಗಿದೆಯಂತೆ!
ಏನೇ ಇರಲಿ, ಎಡಪಂಥೀಯರ ಈ ಕ್ರಮವು ಈ ಮಂತ್ರಿಗಳು ನಿರ್ವಹಿಸುವ ಇಲಾಖೆಗಳಲ್ಲಿ ಭ್ರಷ್ಟಾಚಾರ, ಅಧಿಕಾರ ದುರುಪಯೋಗಕ್ಕೆ ಕಾರಣವಾಗುತ್ತದೆ ಎಂಬುದು ಖಚಿತ. ಈ ರೀತಿಯಾಗಿ ಸಚಿವರ ನೇಮಕವು ಇಲಾಖೆಯ ಕಾರ್ಯವೈಖರಿಯ ಮೇಲೂ ಪರಿಣಾಮ ಬೀರುತ್ತದೆ. ಏನಿದ್ದರೂ ಈಗಾಗಲೇ ಹೊಗೆ ಏಳತೊಡಗಿರುವುವ ಅತೃಪ್ತಿಗಳು ಇಂದಿನ ಎಡರಂಗದ ಸಭೆಯಲ್ಲಿ ಚರ್ಚೆಯ ಮುಖ್ಯ ವಿಷಯವಾಗಿರಲಿದೆ ಎಂದು ತಿಳಿದುಬಂದಿದೆ.