ಕೊಯಮತ್ತೂರು: ಅಪಘಾತದಲ್ಲಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ 51 ವರ್ಷದ ವ್ಯಕ್ತಿಯ ಅಂಗಾಂಗಗಳ ದಾನದಿಂದ 8 ಮಂದಿಗೆ ಜೀವದಾನ ಸಿಕ್ಕಿದೆ.
ನಗರದ ಸಿಂಗನಲ್ಲೂರ್ ನಿವಾಸಿ, ವೃತ್ತಿಯಲ್ಲಿ ದರ್ಜಿಯಾಗಿದ್ದ ಆರ್.ಚೆಂತಮರೈ ಅವರು ಇದೇ 6ರಂದು ಅಪಘಾತಕ್ಕೀಡಾಗಿದ್ದರು. ಇದೇ 8ರಂದು ಇಲ್ಲಿನ ಕೆಎಂಸಿ ಆಸ್ಪತ್ರೆಯಲ್ಲಿ ಮಿದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಲಾಗಿತ್ತು. ಮೃತ ವ್ಯಕ್ತಿಯ ಅಂಗಾಂಗಳನ್ನು ದಾನ ಮಾಡಲು ಆತನ ಕುಟುಂಬದ ಸದಸ್ಯರು ಮುಂದೆ ಬಂದು, ಅಂಗಾಂಗಳನ್ನು ದಾನ ಮಾಡಿದರು.
ಮೃತ ವ್ಯಕ್ತಿಯ ಯಕೃತ್ತು ಮತ್ತು ಒಂದು ಮೂತ್ರಪಿಂಡವನ್ನು ಕೆಎಂಸಿ ಆಸ್ಪತ್ರೆಯಲ್ಲಿ ಅಗತ್ಯವಿದ್ದ ವ್ಯಕ್ತಿಗೆ ಕಸಿ ಮಾಡಿ ಜೋಡಿಸಲಾಯಿತು. ಇನ್ನೊಂದು ಮೂತ್ರಪಿಂಡವನ್ನು ವೆಲ್ಲೂರಿನ ಖಾಸಗಿ ಆಸ್ಪತ್ರೆಗೆ ಮತ್ತು ಹೃದಯವನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲದೆ, ಕಣ್ಣು, ಚರ್ಮ ಮತ್ತು ಮೂಳೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ನೀಡಲಾಯಿತು ಎಂದು ಕೆಎಂಸಿ ಆಸ್ಪತ್ರೆ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.