ಬದಿಯಡ್ಕ: ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳ ಆದಾಯದಲ್ಲಿ ವ್ಯಾಪಾರಿಗಳ ಪಾಲೂ ಇದೆ. ತಮ್ಮ ವ್ಯಾಪಾರ ಸಂಸ್ಥೆಗಳಲ್ಲಿ ಹಗಲಿರುಳು ದುಡಿದು ಕುಟುಂಬದ ಹಾಗೂ ಊರಿನ ಜನರ ಅವಶ್ಯಕತೆಗಳಿಗೆ ಸ್ಪಂದಿಸುವ ವ್ಯಾಪಾರಿಗಳ ಬೇಡಿಕೆಯನ್ನು ಈಡೇರಿಸಲು ಸರ್ಕಾರವು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಬದಿಯಡ್ಕ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕೆ.ಎನ್.ಕೃಷ್ಣ ಭಟ್ ಹೇಳಿದ್ದಾರೆ.
ವಿವಿಧ ಬೇಡಿಕೆಗಳೊಂದಿಗೆ ಮಂಗಳವಾರ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯು ರಾಜ್ಯಾದ್ಯಂತ ವ್ಯಾಪಾರ ಸಂಸ್ಥೆಗಳನ್ನು ಮುಚ್ಚಿ ನಡೆಸಿದ ಚಳುವಳಿಯನ್ನು ಅವರು ಉದ್ಘಾಟಿಸಿದರು. ಬದಿಯಡ್ಕ ಘಟಕದ ನೇತೃತ್ವದಲ್ಲಿ ನಡೆದ ಚಳುವಳಿಯಲ್ಲಿ ಗ್ರಾಮಪಂಚಾಯಿತಿಯ ಮುಂಭಾಗ ಅವರು ಮಾತನಾಡುತ್ತಾ ಕೋವಿಡ್ ಕಾಲಘಟ್ಟದಲ್ಲಿ ಇಂದು ಆನ್ಲೈನ್ ವ್ಯಾಪಾರವು ಯಥೇಚ್ಛವಾಗಿ ನಡೆಯುತ್ತಿದ್ದು, ಸಾಲ ಮಾಡಿ ತಮ್ಮ ಸಂಸ್ಥೆಗಳನ್ನು ನಡೆಸುತ್ತಿರುವ ವ್ಯಾಪಾರಿಗಳು ನೆಲಕಚ್ಚುತ್ತಿದ್ದಾರೆ. ದಿನದಲ್ಲಿ 5-6 ಗಂಟೆಗಳ ಕಾಲವಾದರೂ ಎಲ್ಲಾ ವ್ಯಾಪಾರಕ್ಕೂ ಅವಕಾಶವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಕೆವಿವಿಇಎಸ್ ಬದಿಯಡ್ಕ ಘಟಕ ಅಧ್ಯಕ್ಷ ಕುಂಜಾರು ಮುಹಮ್ಮದ್ ಹಾಜಿ ಮುಂದಾಳುತ್ವವನ್ನು ವಹಿಸಿ ಮಾತನಾಡಿ ಟಿಪಿಆರ್ ಕೆಟಗರಿ ವಿಂಗಡಣೆಯ ಮೂಲಕ ವ್ಯಾಪಾರ ಸಂಸ್ಥೆಗಳಿಗೆ ಕಡಿವಾಣ ಹಾಕುವುದು ಸರಿಯಲ್ಲ. ಭಂಡವಾಳ ಶಾಹಿಗಳು ಇಂದು ದೇಶದಾದ್ಯಂತ ಆನ್ಲೈನ್ ಮೂಲಕ ತಮ್ಮ ವ್ಯಾಪಾರವನ್ನು ಕೈಗೊಳ್ಳುತ್ತಿದ್ದು, ಇದು ಸಣ್ಣ ವ್ಯಾಪಾರಿಗಳಿಗೆ ದೊಡ್ಡ ಹೊಡೆತವನ್ನೇ ನೀಡಿದೆ. ಇದೇ ವೇಳೆ ಸರ್ಕಾರದ ವಿವಿಧ ಕಾನೂನುಗಳು ನಮಗೆ ಅನುಕೂಲಕರಲ್ಲ. ಇಂತಹ ನಿಲುವನ್ನು ಕೊನೆಗಾಣಿಸದಿದ್ದಲ್ಲಿ ಮುಂದೆಯೂ ಪ್ರತಿಭಟನೆಯನ್ನು ನಡೆಸಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದರು.
ಬದಿಯಡ್ಕ ಪೇಟೆಯ ಬಸ್ ನಿಲ್ದಾಣ ಪರಿಸರ, ಪ್ರಧಾನ ಕೂಡು ರಸ್ತೆ, ಗ್ರಾಮಪಂಚಾಯಿತಿ ಮುಂಭಾಗ ಹಾಗೂ ಮೇಲಿನ ಪೇಟೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಗ್ರಾಮಪಂಚಾಯಿತಿ ಉಪಾಧ್ಯಕ್ಷ ಎಂ.ಅಬ್ಬಾಸ್, ಸದಸ್ಯ ಹಮೀದ್ ಪಳ್ಳತ್ತಡ್ಕ, ಡಾ.ಶ್ರೀನಿಧಿ ಸರಳಾಯ ಪಾಲ್ಗೊಂಡು ಮಾತನಾಡಿದರು. ವ್ಯಾಪಾರಿಗಳು ಹಾಗೂ ಸಂಸ್ಥೆಯ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.





