ಕಾಸರಗೋಡು: ಲಿಂಗತಾರತಮ್ಯವನ್ನು ಜೈವಿಕ ವ್ಯತ್ಯಾಸವಾಗಿ ಮಾತ್ರ ಗುರುತಿಸಬೇಕು ಹೊರತು, ಸಾಮಾಜಿಕವಾಗಿ ಗಂಡು- ಹೆಣ್ಣು ಭೇದಭಾವವು ಸಮಂಜಸವಲ್ಲ. ಭಾರತೀಯ ಪರಂಪರೆಯಲ್ಲಿ ಸ್ತ್ರೀಗೆ ಶಕ್ತಿಯ ಸ್ಥಾನವಿದೆ. ಅದೇ ರೀತಿಯಲ್ಲಿ ಅರ್ಧನಾರೀಶ್ವರ ಕಲ್ಪನೆಯನ್ನೂ ಕಾಣುತ್ತೇವೆ. ಕರಾವಳಿ ಪ್ರದೇಶದ ಮಾತೃಮೂಲೀಯ ಸಂಸ್ಕøತಿಯಲ್ಲೂ ಹೆಣ್ಣಿಗೆ ಮಹತ್ವವಿರುವುದನ್ನು ಕಾಣುತ್ತೇವೆ. ಆದರೆ ಸಾಮಾಜಿಕವಾಗಿ ಹಲವು ಕಡೆಗಳಲ್ಲಿ ಭಾವನಾತ್ಮಕ ನೆಲೆಯಲ್ಲಿ ಹೆಣ್ಣನ್ನು ಮೃದುವಾಗಿಯೂ ಗಂಡನ್ನು ಸಿಂಹವಾಗಿಯೂ ಚಿತ್ರಿಸಿರುವುದನ್ನು ಕಾಣುತ್ತೇವೆ ಎಂದು ಮೈಸೂರು ಪೋಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ. ಧರಣಿದೇವಿ ಮಾಲಗತ್ತಿ ಅವರು ಅಭಿಪ್ರಾಯಪಟ್ಟರು.
ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ನೇತೃತ್ವದಲ್ಲಿ ಕಾಸರಗೋಡು ಕನ್ನಡ ಬಳಗ ಇದರ ಸಹಯೋಗದೊಂದಿಗೆ ನಡೆದ ಮಾನಸೋಲ್ಲಾಸ ಸರಣಿಯ ಎರಡನೆಯ ಜಾಲಗೋಷ್ಠಿ ಕಾರ್ಯಕ್ರಮದಲ್ಲಿ 'ಲಿಂಗ ತಾರತಮ್ಯ : ಕಾನೂನು ಮತ್ತು ಸಾಂಸ್ಕೃತಿಕ ನೆಲೆ' ಎಂಬ ವಿಷಯದಲ್ಲಿ ಅವರು ಮಾತನಾಡುತ್ತಿದ್ದರು.
ಮಹಿಳಾಪರ ಕಾನೂನುಗಳು ಸ್ತ್ರೀಸಶಸ್ತ್ರೀಕರಣಕ್ಕೆ ಕಾರಣವಾಗಿವೆ. ಸಾಮಾಜಿಕವಾಗಿ ಸ್ತ್ರೀಗೆ ದೊರಕಬೇಕಾದ ರಕ್ಷಣಾತ್ಮಕವಾದ ನ್ಯಾಯಯುತ ಹಕ್ಕುಗಳು ಸಿಗಬೇಕು. ಗಂಡು – ಹೆಣ್ಣು ಎಂಬ ವ್ಯತ್ಯಾಸವಿಲ್ಲದೆ ಎಲ್ಲರೂ ಇವುಗಳನ್ನು ಮನಗಾಣಬೇಕು ಎಂದು ಅವರು ತಿಳಿಸಿದರು.
ವಿಭಾಗದ ಮುಖ್ಯಸ್ಥೆ ಸುಜಾತ ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಂ.ಎ ವಿದ್ಯಾರ್ಥಿಗಳಾದ ದಿವ್ಯಶ್ರೀ ಎಸ್, ಸ್ವಾಗತಿಸಿ, ದೀಪಿಕಾ ಎ ವಂದಿಸಿದರು. ದಿವ್ಯಶ್ರೀ ಎಂ, ಕಾರ್ಯಕ್ರಮ ನಿರೂಪಿಸಿದರು. ವಿಭಾಗದ ಅಧ್ಯಾಪಕರು, .ವಿದ್ಯಾರ್ಥಿಗಳು, ನಾಡಿನ ಬೇರೆ ಬೇರೆ ಭಾಗದ ಹಿರಿಯರು, ಸಹೃದಯಿಗಳು ಜಾಲಗೋಷ್ಠಿಯಲ್ಲಿ ಭಾಗವಹಿಸಿದ್ದರು.


