ಮಂಜೇಶ್ವರ: ಕೇರಳದಲ್ಲಿ ಕೊರೊನಾ ಸೋಂಕಿನ ವ್ಯಾಪಕತೆಯ ಹಿನ್ನೆಲೆಯಲ್ಲಿ ಈ ಹಿಂದಿನ ವರ್ಷದಂತೆ ಸೋಮವಾರದಿಂದ ಮತ್ತೆ ಗಡಿ ನಿಯಂತ್ರಿಸಲಾಗಿದ್ದು, ಜನರು ಅತ್ತಿತ್ತ ಸುಲಭವಾಗಿ ಸಂಚರಿಸುವುದನ್ನೂ ನಿಯಂತ್ರಿಸಲಾಗಿದೆ. ಮತ್ತೆ ಮುಚ್ಚಿರುವ ಕೇರಳ-ಕರ್ನಾಟಕ ಗಡಿಯನ್ನು ತೆರೆಯುವಂತೆ ಎರಡೂ ಸರ್ಕಾರಗಳ ಮೇಲೆ ಒತ್ತಡ ಹೆಚ್ಚುತ್ತಿದೆ.
ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಎರಡು ಪ್ರತ್ಯೇಕ ರಾಜ್ಯಗಳಲ್ಲಿದ್ದರೂ ಪರಸ್ಪರ ವಿಶೇಷ ಸಂಬಂಧ ಹಾಗೂ ಸಾಮಾನ್ಯ ಅಸ್ಮಿತೆಯನ್ನು ಹೊಂದಿರುವ ಪ್ರದೇಶವಾಗಿದೆ. ಕಾಸರಗೋಡು ಜಿಲ್ಲೆಯು ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಭಾಗವೇ ಆಗಿತ್ತು. ಆದರೆ ಈಗ ಆಡಳಿತಾತ್ಮಕವಾಗಿ ಮಾತ್ರ ಕೇರಳದ್ದಾಗಿದೆ.
ಕಾಸರಗೋಡು ಕನ್ನಡಿಗರು ಅತಂತ್ರ.:
ಕೊರೊನಾ ಹಿನ್ನೆಲೆಯಲ್ಲಿ ಮುಚ್ಚಿರುವ ಗಡಿ ಮೂಲಕ ಇದೀಗ ಆರ್ ಟಿ ಪಿ ಸಿ ಆರ್ ನೆಗೆಟಿವ್ ಪ್ರಮಾಣ ಪತ್ರ ಹಾಜರುಪಡಿಸಿ ಮಂಗಳೂರಿನತ್ತ ಸಂಚರಿಸಬಹುದಾಗಿದೆ. ನೆಗೆಟಿವ್ ಪ್ರಮಾಣ ಪತ್ರದ ಹೊರತಾಗಿ ಬೇರೆ ಯಾವುದಿದ್ದರೂ ಪ್ರವೇಶಕ್ಕೆ ದ.ಕ. ಆಡಳಿತ ಅನುಮತಿ ನೀಡುತ್ತಿಲ್ಲ. ಹೀಗಾಗಿ, ಮಂಗಳೂರನ್ನು ಆಶ್ರಯಿಸಿದ ಕಾಸರಗೋಡಿನ ಜನತೆ, ಅದರಲ್ಲೂ ಪ್ರಧಾನವಾಗಿ ಕನ್ನಡಿಗರು ಇದೀಗ ಅತಂತ್ರರಾಗಿದ್ದಾರೆ. ಎಲ್ಲ ವ್ಯವಹಾರ, ಉದ್ಯೋಗ, ವೈದ್ಯಕೀಯ, ಶಿಕ್ಷಣ ಸೇರಿದಂತೆ ಹತ್ತಿರ ಸಂಪರ್ಕವನ್ನು ಇಟ್ಟುಕೊಂಡಿರುವ ಕನ್ನಡಿಗರು, ಇದೀಗ ದ.ಕ. ಪ್ರವೇಶಕ್ಕೆ ಅವಕಾಶವಿಲ್ಲದೆ ಉದ್ಯೋಗ, ವ್ಯವಹಾರಗಳಿಂದ ವಂಚಿತರಾಗಿದ್ದಾರೆ.
ಕನ್ನಡಿಗರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ:
ಕೊರೊನಾ ಹಿನ್ನೆಲೆಯಲ್ಲಿ ಕಳೆದ ಬಾರಿ ಇದೇ ರೀತಿಯ ನಿಯಂತ್ರಣ ಹೇರಿದ್ದರಿಂದ ಮಂಗಳೂರಿನ ವಿವಿಧೆಡೆ ವೃತ್ತಿ ನಿರತರಾಗಿದ್ದ ಆರು ನೂರಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಂಡಿರುವರೆಂದು ಅಂದಾಜಿಸಲಾಗಿದೆ. ಇದರ ಬೆನ್ನಿಗೇ ಇದೀಗ ಮತ್ತೆ ಅಂತದೇ ಸ್ಥಿತಿ ನಿರ್ಮಾಣವಾಗಿರುವುದರಿಂದ ಮತ್ತಷ್ಟು ಜನ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಇನ್ನೂ ಅನೇಕರಿಗೆ ತಮ್ಮ ವ್ಯಾಪಾರ ಸ್ಥಗಿತಗೊಂಡಿದೆ. ಬಹುತೇಕ ಮಂದಿ ಮಂಗಳೂರಿನ ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಇವರಿಗೆ ತೆರಳಲು ಸಾಧ್ಯವಾಗದಿರುವುದು ಸಮಸ್ಯೆಯಾಗಿದೆ.
ಮಂಗಳೂರು ನಗರ ಕೇರಳದ ಗಡಿಯಿಂದ ಕೇವಲ 12 ಕಿ.ಮೀ.ದೂರದಲ್ಲಿರುವುದು ವಿಶೇಷತೆಯಾಗಿದೆ. ಕೇರಳದಿಂದ ದಿನನಿತ್ಯ ವಿವಿಧ ಅಗತ್ಯಗಳಿಗಾಗಿ 35 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಮಂಗಳೂರಿಗೆ ತೆರಳುತ್ತಾರೆ.
ಕೊರೊನಾ ಹಿನ್ನೆಲೆಯಲ್ಲಿ ಎರಡೂ ಜಿಲ್ಲೆಗಳ ವಿದ್ಯಾರ್ಥಿಗಳು, ಕೃಷಿಕರು, ಉದ್ಯೋಗಸ್ಥರು, ವೃತ್ತಿಪರರು, ವ್ಯಾಪಾರಿಗಳು ಸೇರಿದಂತೆ ಹಲವು ವಲಯಗಳವರಿಗೆ ಸಾಮಾಜಿಕ ಅಂತರ ಮತ್ತು ಇತರ ಆರೋಗ್ಯ ಸಂಬಂಧಿ ಸಲಹೆಗಳನ್ನು ಪಾಲಿಸಿಕೊಂಡು ಸಂಚರಿಸುವುದಕ್ಕಾಗಿ ನೆಗೆಟಿವ್ ಸರ್ಟಿಫಿಕೇಟ್ ಹೊರತು ಪ್ರತ್ಯೇಕ ಪಾಸ್ ನೀಡಬೇಕೆಂಬ ಬೇಡಿಕೆ ಕೂಡಾ ಇದೆ.
ನೆಗೆಟಿವ್ ಸರ್ಟಿಫಿಕೇಟ್ ಗೆ ಪರದಾಟ:
ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಇರುವವರಿಗೆ ದಕ್ಷಿಣ ಕನ್ನಡ ಪ್ರವೇಶಿಸಲು ಅಡೆತಡೆ ಇಲ್ಲ. ಆದರೆ ಕೇರಳದಲ್ಲಿ ಕೋವಿಡ್ ಪರೀಕ್ಷೆ ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿದೆ. ಜಿಲ್ಲೆಯ ಯಾವ ಮೂಲೆಗೆ ಸಂಚರಿಸಿದರೂ ಬೇಕಾದಾಗ ಪರೀಕ್ಷೆ ಮಾಡಿಸಿಕೊಳ್ಳುವ ಯಾವುದೇ ವ್ಯವಸ್ಥೆಗಳಿಲ್ಲ. ಇದರಿಂದ ಖಾಸಗೀ ಆಸ್ಪತ್ರೆಗೆ ತೆರಳಬೇಕಿದ್ದು, ದುಬಾರಿ ಬೆಲೆ ನೀಡಬೇಕಿರುವುದರಿಂದ ಸಾಮಾನ್ಯ ಜನರಿಗೆ ಇದು ಅಸಾಧ್ಯವಾಗಿದೆ.
ಪ್ರಧಾನವಾಗಿ ಮಂಗಳೂರಿನ ವೈದ್ಯರು, ಎಂಜಿನಿಯರ್ಗಳಿಗೆ ತಮ್ಮ ಸೇವೆ ನೀಡುವುದಕ್ಕಾಗಿ ಮತ್ತು ಮಂಗಳೂರಿನ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಪರೀಕ್ಷೆಗಳಿಗೆ ಇಲ್ಲಿನ ವಿದ್ಯಾರ್ಥಿಗಳು ಹಾಜರಾಗುವಂತೆ ಮಾಡಲು, ಇಲ್ಲಿನ ಕೃಷಿಕರ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು, ಮೀನು ಮಾರಾಟ ಇವುಗಳಿಗೆ ಪ್ರತ್ಯೇಕ ಪಾಸ್ ನೀಡಬೇಕೆಂದೂ, ಬಡ ಕುಟುಂಬಗಳ ಹಿತ ಸಂರಕ್ಷಿಸಲು ಪಾಸ್ಗಳ ವ್ಯವಸ್ಥೆ ಮಾಡದಿದ್ದರೆ ಪರಿಸ್ಥಿತಿ ಇನ್ನು ಹದಗೆಡುವುದರಲ್ಲಿಸಂಶಯವಿಲ್ಲ. ಅದಕ್ಕಾಗಿ ಎರಡೂ ಜಿಲ್ಲಾಡಳಿತಗಳು ಸೂಕ್ತ ಕ್ರಮ ಕೈಗೊಳ್ಳಬೇಕು.