ಕಾಸರಗೋಡು: ಮಂಗಲ್ಪಾಡಿ ಪಂಚಾಯಿತಿ ವ್ಯಾಪ್ತಿಯ ಎಸ್ಸಿ-ಎಸ್ಟಿ ವಿಭಾಗದ ಜನತೆಗೆ ಆಯೋಜಿಸಲಾಗಿದ್ದ ಕೋವಿಡ್ ವ್ಯಾಕ್ಸಿನ್ ವಿತರಣೆಯನ್ನು ಸಂಪೂರ್ಣ ಬುಡಮೇಲುಗೊಳಿಸಿರುವುದಲ್ಲದೆ, ಇದನ್ನು ಪ್ರಶ್ನಿಸಿದವರ ಮೇಲೆ ಸುಳ್ಳು ಕೇಸು ದಾಖಲಿಸಿ ಬಂಧಿಸಿರುವುದು ಖಂಡನೀಯ. ಇದರ ವಿರುದ್ಧ ಪ. ಜಾತಿ-ಪ.ವರ್ಗ ಸಂರಕ್ಷಣಾ ಸಮಿತಿ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಪ್ರಬಲ ಹೋರಾಟ ನಡೆಸಲಿರುವುದಾಗಿ ಸಮಾಜಸೇವಕ ರಾಮಪ್ಪ ಮಂಜೇಶ್ವರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಯ ಪ್ರತ್ಯೇಕ ಆದೇಶಾನುಸಾರ ಜುಲೈ 26ರಂದು ಎಸ್ಸಿ-ಎಸ್ಟಿ ವಿಭಾಗದ ಜನತೆಗೆ ಮಂಗಲ್ಪಾಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವ್ಯಾಕ್ಸಿನೇಶನ್ ಆಯೋಜಿಸಲಾಗಿದ್ದು, ಇದಕ್ಕಾಗಿ ಬೆಳಗ್ಗಿನಿಂದಲೇ ಸರತಿಸಾಲಲ್ಲಿ ನಿಂತಿದ್ದರೂ, ಕೆಲವು ರಾಜಕೀಯ ಮುಖಂಡರು ಇತರ ಸಮುದಾಯದವರನ್ನು ಕರೆತಂದು ಸಾಲು ತಪ್ಪಿಸಿ ವ್ಯಾಕ್ಸೀನ್ ನೀಡಿ ಕಳುಹಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ ಭಾರಿ ನೂಕುನುಗ್ಗಲು ನಡೆಸಿ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಿಸಲಾಗಿದೆ. ಈ ಸಂದರ್ಭ ಲ್ಯಾಪ್ಟಾಪ್ಗೆ ಉಂಟದ ಹಾನಿಯನ್ನು ಎಸ್ಸಿ-ಎಸ್ಟಿ ವಿಭಾಗದ ಜನತೆಯ ಮೇಲೆ ಹೊರಿಸಿ ಕೇಸು ದಾಖಲಿಸಲಾಗಿದೆ. ಈ ಬಗ್ಗೆ ವೈದ್ಯಾಧಿಖಾರಿಗೆ ದೂರು ನೀಡಿದಾಗ, ಪಂಚಾಯಿತಿ ಸದಸ್ಯ ಬಾಬು ಬಂದಿಯೋಡು ಅವರನ್ನು ಜಾತಿ ಹೆಸರೆತ್ತಿ ಹೀಯಾಳಿಸಿದ್ದಾರೆ. ನಂತರ ಪೊಲೀಸರನ್ನು ಕರೆತಂದು ವ್ಯಾಕ್ಸಿನ್ಗಾಗಿ ಆಗಮಿಸಿದ ಎಸ್ಸಿ-ಎಸ್ಟಿ ವಿಭಾಗದ ಜನತೆಯ ಮೇಲೆ ಲಾಟಿಪ್ರಹಾರವನ್ನೂ ನಡೆಸಿದ್ದಾರೆ. ಜಾತಿ ಹೆಸರೆತ್ತಿ ನಿಂದಿಸಿದ ವೈದ್ಯಾಧಿಕಾರಿಯನ್ನು ಅಮಾನತುಗೊಳಿಸಬೇಕು, ಸುಳ್ಳು ಕೇಸು ದಾಖಲಿಸಿ ಬಂಧಿಸಿರುವ ಸಮುದಾಯದ ಇಬ್ಬರನ್ನು ಬಿಡುಗಡೆಗೊಳಿಸಬೇಕು ಹಾಗೂ ಲಾಟಿಚಾರ್ಜ್ ನಡೆಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಸಂತ ಆರಿಕ್ಕಾಡಿ, ಸಂಜೀವ ಪುಳ್ಕೂರು, ಉದಯ ಬೆದ್ರಡ್ಕ, ರಘುರಾಮ ಚತ್ರಂಪಳ್ಳ, ಹರಿರಾಮ ಕುಳೂರು, ಗೋಪಾಲ ಡಿ. ರವಿಕಾಂತ್, ಹರೀಶ್ಚಂದ್ರ ಪುತ್ತಿಗೆ, ರಾಮ ಆರಿಕ್ಕಾಡಿ ಉಪಸ್ಥಿತರಿದ್ದರು.