ಕಾಸರಗೋಡು: ಅನೇಕ ತಲೆಮಾರು ನಡೆಸಿದ ಅವಿರತ ಹೋರಾಟದ ಫಲವಾಗಿ ದೇಶಕ್ಕೆ ಲಭಿಸಿರುವ ಸ್ವಾತಂತ್ರ್ಯಕ್ಕೆ ನೂತನ ತಲೆಮಾರು ಕಾವಲಾಳುಗಳಾಗಬೇಕು ಎಂದು ಬಂದರು, ವಸ್ತುಸಂಗ್ರಹಾಲಯ ಸಚಿವ ಅಹಮ್ಮದ್ ದೇವರ್ ಕೋವಿಲ್ ಆಗ್ರಹಿಸಿದರು.
ವಿದ್ಯಾನಗರದ ಕಾಸರಗೋಡು ನಗರಸಭೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನಡೆಸಿ ಅವರು ಮಾತನಾಡಿದರು.
ಪಾಶ್ಚಾತ್ಯ ಚಿಂತನೆಗಳತ್ತರ ಪ್ರಭಾವಿತವಾಗಿರುವ ನೂತನ ಜನಾಂಗಕ್ಕೆ ದೇಶದ ಪ್ರಜಾಪ್ರಭುತ್ವ ನೀತಿ ಬಗ್ಗೆ ಅರಿವು ಮೂಡಿಸುವ ಕಾಯಕ ನಮ್ಮದಾಗಬೇಕು. ಸ್ವಾತಂತ್ರ್ಯೋತ್ಸವದ ಬಗೆಗಿಬ ಚಿಂತನೆಯಿಂದ ನಕಾರಾತ್ಮಕ ಚಿಂತನೆ ತೊಲಗುತ್ತದೆ. ಮಾನವೀಯ ಮೌಲ್ಯಗಳಿಗೆ ಧಕ್ಕೆ ಬರುವಲ್ಲಿ ಪ್ರಜಾಫ್ರಭುತ್ವ ನೀತಿಯ ತಳಹದಿಗೆ ಆಘಾತವಾಗುತ್ತದೆ ಎಂದವರು ನುಡಿದರು.
ಅನೇಕ ತ್ಯಾಗಗಳ ಫಲವಾಗಿ ಪಡೆದ ಸ್ವಾತಂತ್ರ್ಯವನ್ನು ಯಥಾವತ್ತಾಗಿ ಉಳಿಸಿಕೊಳ್ಳುವುದೂ ಪ್ರಧಾನವಾಗಿದೆ. ವಿವಿಧತೆಯಲ್ಲಿ ಏಕತೆ ಎಂಬುದು ಕೇವಲ ಹೇಳಿಕೆಗೆ ಸೀಮಿತವಾಗಬಾರದು. ಪರಮತ ಸಹಿಷ್ಣುತೆ ನಿಜಾರ್ಥದಲ್ಲಿ ಜಾರಿಗೊಳ್ಳುವ ಮೂಲಕ ದೇಶದ ಶಿಲ್ಪಿಗಳ ಕನಸು ನನಸಾಗಬೇಕು. ಪ್ರಜಾಪ್ರಭುತ್ವ ನೀತಿ ವಿರುದ್ಧ ತಲೆದೋರುವ ಪ್ರತಿ ಪಿಡುಗು ಭಾರತದೇಶಕ್ಕೆ ಭೀತಿಮೂಡಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಮೂಡಿಬರುವ ಜನಾಭಿಪ್ರಾಯ ಏಕತೆಗೆ ತಳಹದಿಯಾಗಬೇಕು. ಮನುಷ್ಯರ ನಡುವೆ ಭಿನ್ನಾಭಿಪ್ರಾಯದ ಬಿರುಕು ಮೂಡಿಸುವ ಯತ್ನವನ್ನು ಒಗ್ಗಟ್ಟಿನಿಂದ ವಿರೋಧಿಸಬೇಕು ಎಂದರು.
ಕೇರಳಕ್ಕೆ ಸ್ವಂತಿಕೆಯಿಂದೊಡಗೂಡಿದ ಸಂಸ್ಕøತಿಯಿದೆ. ಪರಂಪರಾಗತ ಮೌಲ್ಯಯುತ ವಿಚಾರಗಳು ಅದಕ್ಕೆ ತಳಹದಿಯಾಗಿದೆ. ಕ್ರಾಂತಿಯೊಂದಿಗೊಡಗೂಡಿದ ಪ್ರಗತಿ ಸಾಧಿಸಿದ ಮಣ್ಣು ನಮ್ಮದು ಎಂದವರು ತಿಳಿಸಿದರು.
ದೇಶವು 75 ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಸಂದರ್ಭ ಸುದೀರ್ಘ ಪ್ರಯಾಣವೊಂದರ ನಿರ್ಣಾಯಕ ಮೈಲುಗಲ್ಲಿಗೆ ನಾವು ತಲಪಿದ್ದೇವೆ. 135 ಕೋಟಿ ಜನತೆಯ ಆಶಯ-ಅಭಿಲಾಷೆ ನಮ್ಮನ್ನು ಮುನ್ನಡೆಸುತ್ತಿದೆ ಎಂದವರು ತಿಳಿಸಿದರು.






