ಕೋಯಿಕ್ಕೋಡ್: ವಾರಿಯಂಕುನ್ನತ್ ಕುನ್ಹಹಮ್ಮದ್ ಹಾಜಿ ಅವರನ್ನು ತಾಲಿಬಾನ್ ನಾಯಕ ಎಂದು ಹೇಳಿದ ಘಟನೆಯಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎಪಿ ಅಬ್ದುಲ್ಲಕುಟ್ಟಿ ವಿರುದ್ಧ ಡಿಜಿಪಿಗೆ ದೂರು ನೀಡಲಾಗಿದೆ. ಜಮಾಅತೆ ಇಸ್ಲಾಮಿಯ ರಾಜ್ಯ ಕಾರ್ಯದರ್ಶಿ ಶಿಹಾಬ್ ಪೂಕೋತ್ತೂರು ಅವರು ದೂರು ದಾಖಲಿಸಿದ್ದಾರೆ.
ಕೋಮುವಾದಿ ಹೇಳಿಕೆಯನ್ನು ಉತ್ತೇಜಿಸುವ ಮತ್ತು ಸಮುದಾಯಗಳ ನಡುವೆ ದ್ವೇಷವನ್ನು ಪ್ರಚೋದಿಸುವ ರೀತಿಯಲ್ಲಿ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೂರಿನ ಪ್ರಕಾರ, ಅಬ್ದುಲ್ಲಕುಟ್ಟಿಯ ಹೇಳಿಕೆ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ವೈರತ್ವ ಮತ್ತು ವೈಷಮ್ಯವನ್ನು ಸೃಷ್ಟಿಸುವ ಪ್ರಯತ್ನವಾಗಿದೆ.
ಅಬ್ದುಲ್ಲಕುಟ್ಟಿ ಅವರು ವಾರಿಯಂಕುನ್ನತ್ ಕುನ್ಹಹಮ್ಮದ್ ಹಾಜಿ ಕೇರಳದ ಮೊದಲ ತಾಲಿಬಾನ್ ನಾಯಕ ಮತ್ತು 'ಮಾಪಿಳ್ಳ ಗಲಭೆಗಳು' ಹಿಂದೂ ವಿರೋಧಿ ಗಲಭೆಗಳು ಎಂದು ಹೇಳಿದ್ದರು. ಜಮಾತ್-ಇ-ಇಸ್ಲಾಮಿ ಕೇರಳದಲ್ಲಿ ತಾಲಿಬಾನಿಸಂ ಅನ್ನು ಹರಡಲು ಪ್ರಯತ್ನಿಸುತ್ತಿದೆ ಮತ್ತು ಕಣ್ಣೂರಿನಲ್ಲಿ ಬಂಧಿತ ಮಹಿಳೆಯರನ್ನು ಐಸಿಸ್ಗೆ ಸೇರಿಸಲು ಜಮಾತ್-ಇ-ಇಸ್ಲಾಮಿಯೇ ಕಾರಣ ಎಂದು ಅಬ್ದುಲ್ಲಕುಟ್ಟಿ ಆರೋಪಿಸಿದ್ದರು.
ಬ್ರಿಟಿಷರಿಂದ ಕೊಲ್ಲಲ್ಪಟ್ಟ ಕಳ್ಳ ಮತ್ತು ಕೊಲೆಗಾರನನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ಪರಿಗಣಿಸಬಹುದೇ? ವಾರಿಯಂಕುನ್ನತ್ ನನ್ನು ಭಗತ್ ಸಿಂಗ್ನೊಂದಿಗೆ ಹೇಗೆ ಸಮೀಕರಿಸಬಹುದು? ಎಂದು ಕೇಂದ್ರ ಸಚಿವ ವಿ ಮುರಳೀಧರನ್ ಕೂಡಾ ಕೇಳಿದ್ದರು.
ವಾರಿಯಂಕುನ್ನತ್ ನೇತೃತ್ವದ ಮಾಪಿಳ್ಳ ಗಲಭೆಯನ್ನು ಸ್ವಾತಂತ್ರ್ಯ ಹೋರಾಟವಾಗಿ ಆಚರಿಸುವುದು ಇತಿಹಾಸದಲ್ಲಿ ಅತ್ಯಂತ ದೊಡ್ಡ ದೌರ್ಜನ್ಯವಾಗಿದೆ. ಇದು ರೈತರ ಮುಷ್ಕರವಲ್ಲ, ಹಿಂದೂ ಬೇಟೆಯಾಡುವಿಕೆ ಎಂದು ಅಬ್ದುಲ್ಲಕುಟ್ಟಿ ಹೇಳಿದ್ದÀರು. ಗಲಭೆಯಿಂದಾಗಿ ಇಎಂಎಸ್ ಕುಟುಂಬವು ಪಾಲಕ್ಕಾಡ್ ಗೆ ಪಲಾಯನ ಮಾಡಬೇಕಾಯಿತು ಮತ್ತು ವರಿಯಮ್ಕುನ್ನಂ ಸ್ಮಾರಕವನ್ನು ನಿರ್ಮಿಸಲು ಹೊರಟಿರುವ ಪಿಎ ಮೊಹಮ್ಮದ್ ರಿಯಾಜ್ ಇಎಂಎಸ್ ಸ್ವಾತಂತ್ರ್ಯ ಹೋರಾಟದ ಸಂಪೂರ್ಣ ಪುಸ್ತಕ ಓದಬೇಕು ಎಂದು ಅಬ್ದುಲ್ಲಕುಟ್ಟಿ ಹೇಳಿದ್ದರು.