ಮುಳ್ಳೇರಿಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಸ್ಮಾರಕ ಸಾಂಸ್ಕøತಿಕ ಯಕ್ಷಗಾನ ಅಧ್ಯಯನ ಕೇಂದ್ರದ ಸಭಾಭವನದಲ್ಲಿ ಶನಿವಾರ ‘ಸುಧನ್ವಮೋಕ್ಷ’ ಯಕ್ಷಗಾನ ತಾಳಮದ್ದಳೆ ಜರಗಿತು.
ಮೊದಲಿಗೆ ಶ್ರೀ ಗೋಪಾಲಕೃಷ್ಣ ದೇವರಿಗೆ ಪೂಜಾರ್ಚನೆ ಸಲ್ಲಿಸಲಾಯಿತು. ಬಳಿಕ ಸಂಘದ ಹಿರಿಯ ಕಲಾಚೇತನ ದಿವಂಗತ ದೇಲಂಪಾಡಿ ಮಹಾಲಿಂಗ ಪಾಟಾಳಿ ಅವರ 15ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮವು ಭಾಗವತ ವಿಶ್ವವಿನೋದ ಬನಾರಿಯವರ ಅಧ್ಯಕ್ಷತೆಯಲ್ಲಿ ನೆರವೇರಿತು. ನಾರಾಯಣ ದೇಲಂಪಾಡಿ ಅವರು ತಮ್ಮ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಯಂ.ರಮಾನಂದ ರೈ ದೇಲಂಪಾಡಿ ಅವರು ಮಹಾಲಿಂಗ ಪಾಟಾಳಿ ಅವರ ಸಂಸ್ಮರಣೆ ಗೈದು ಮಾತನಾಡಿ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಶಿಷ್ಯರಾಗಿದ್ದ ದಿವಂಗತ ಮಹಾಲಿಂಗ ಪಾಟಾಳಿ ಅವರ ವಿಶೇಷವಾದ ಯಕ್ಷಗಾನ ಕಲಾಸಕ್ತಿ ಹಾಗೂ ಅನುಪಮವಾದ ಕಲಾ ತಪಸ್ಸು ಗುರುತರವಾದದ್ದು ಎಂದು ಹೇಳಿದರು. ಹಿರಿಯ ಹಿಮ್ಮೇಳವಾದಕ ಮಂಡೆಕೋಲು ಅಪ್ಪಯ್ಯ ಮಣಿಯಾಣಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಉದಯೋನ್ಮುಖ ಸಾಹಿತ್ಯ ಸಾಧಕಿ ಕುಮಾರಿ ಲತಾ ಆಚಾರ್ಯ ಬನಾರಿ ಅವರು ವಂದಿಸಿದರು.
ಬಳಿಕ ಜರಗಿದ ಸುಧನ್ವಮೋಕ್ಷ ಯಕ್ಷಗಾನ ತಾಳಮದ್ದಳೆಯ ಹಿಮ್ಮೇಳ ಮುಮ್ಮೇಳಗಳಲ್ಲಿ ದಯಾನಂದ ಬಂದ್ಯಡ್ಕ, ನಿತೀಶ್ ಕುಮಾರ್ ಎಂಕಣ್ಣಮೂಲೆ, ಕೆ.ಶಿವರಾಮ ಕಲ್ಲೂರಾಯ, ನಾರಾಯಣ ಪಾಟಾಳಿ ಮಯ್ಯಾಳ, ವಿಷ್ಣುಶರಣ ಬನಾರಿ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ, ಐತ್ತಪ್ಪ ಗೌಡ ಮುದಿಯಾರು, ಕಲ್ಲಡ್ಕ ಗುತ್ತು ರಾಮಯ್ಯ ರೈ, ರಾಮನಾಯ್ಕ್ ದೇಲಂಪಾಡಿ, ಶೇಖರ ಪಾಟಾಳಿ ಕಲ್ಲರ್ಪೆ ಭಾಗವಹಿಸಿದರು. ಕೋವಿಡ್ ನಿಯಮ ನಿಬಂಧನೆಗಳ ಪಾಲನೆಯೊಂದಿಗೆ ಪ್ರಸ್ತುತಗೊಂಡ ಈ ಮನೋಜ್ಞವಾದ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳ ಕೊನೆಯಲ್ಲಿ ನಂದಕಿಶೋರ ಬನಾರಿ ಅವರು ವಂದನಾರ್ಪಣೆ ಗೈದರು.