ನವದೆಹಲಿ: ಕೊರೊನಾ ಮೂರನೇ ಅಲೆ ಆತಂಕದ ನಡುವೆಯೇ ಹಲವು ರಾಜ್ಯಗಳಲ್ಲಿ ಶಾಲೆಗಳನ್ನು ಪುನರಾರಂಭಿಸಲಾಗಿದೆ. ಕೊರೊನಾ ಸೋಂಕಿನ ಕಾರಣವಾಗಿ ಕಳೆದ ಒಂದೂವರೆ ವರ್ಷಗಳಿಂದ ಶಾಲೆಗಳನ್ನು ಮುಚ್ಚಿದ್ದು, ಹಲವೆಡೆ ಮತ್ತೆ ಶಾಲೆಗಳನ್ನು ತೆರೆಯಲಾಗುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆ ಕೂಡ ಶಾಲೆಗಳನ್ನು ತೆರೆಯುವತ್ತ ಆದ್ಯತೆ ನೀಡುವ ಸಲಹೆ ನೀಡಿದೆ. ಕೊರೊನಾ ಸಾಂಕ್ರಾಮಿಕ ಆತಂಕಕಾರಿ ಮಟ್ಟದಲ್ಲಿ ಪಸರಿಸುತ್ತಿದ್ದು, ಸೂಕ್ತ ಆರೋಗ್ಯ ಹಾಗೂ ನೈರ್ಮಲ್ಯ ನಿಯಮಗಳ ಪಾಲನೆಗಳೊಂದಿಗೆ ಶಾಲೆಗಳನ್ನು ಪುನಃ ತೆರೆಯುವುದರತ್ತ ಆದ್ಯತೆ ನೀಡಬೇಕು. ಸೋಂಕಿನ ಕಾರಣವಾಗಿ ಮಕ್ಕಳ ಶೈಕ್ಷಣಿಕ ಜೀವನಕ್ಕೆ ಅಡೆತಡೆಯಾಗಬಾರದು ಎಂದು ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಮಂಗಳವಾರ ಮತ್ತೆ ಶಾಲೆ ತೆರೆಯಬೇಕಾದ ಅಂಶಗಳ ಕುರಿತು ಮಾತನಾಡಿದ್ದಾರೆ. ಮುಂದೆ ಓದಿ...
ನಿಯಮ ಪಾಲನೆಯೊಂದಿಗೆ ಶಾಲೆಗಳ ಪುನರಾರಂಭ ಮಾಡಿ
"ಕೊರೊನಾ ಸಾಂಕ್ರಾಮಿಕದ ಪರಿಣಾಮ ಮಕ್ಕಳ ಮಾನಸಿಕ, ದೈಹಿಕ ಹಾಗೂ ಅರಿವಿನ ಮೇಲೆ ದೀರ್ಘಕಾಲ ಉಳಿಯುತ್ತದೆ ಎಂಬುದನ್ನು ಒತ್ತಿ ಹೇಳಿರುವ ಸೌಮ್ಯ ಸ್ವಾಮಿನಾಥನ್, ಸಾಮಾಜಿಕ ಅಂತರ ಪಾಲನೆ, ಮಾಸ್ಕ್, ಹೆಚ್ಚು ಮಕ್ಕಳು ಒಂದೆಡೆ ಸೇರುವುದನ್ನು ತಪ್ಪಿಸಬೇಕು. ಮಕ್ಕಳಿಗೆ ನೈರ್ಮಲ್ಯವನ್ನು ತಿಳಿಹೇಳಬೇಕು. ಎಲ್ಲಾ ವಯಸ್ಕರಿಗೂ ಲಸಿಕೆ ನೀಡಬೇಕು. ನೈರ್ಮಲ್ಯ ಕಾಪಾಡಿಕೊಳ್ಳುವುದರೊಂದಿಗೆ ಶಾಲೆಗಳನ್ನು ತೆರೆಯಲು ಮುಂದಾಗಬೇಕು" ಎಂದು ಟ್ವೀಟ್ ಮಾಡಿದ್ದಾರೆ.
14 ರಾಜ್ಯಗಳಲ್ಲಿ ಶಾಲೆ ತೆರೆಯಲು ಸಿದ್ಧತೆ
ದೇಶದಲ್ಲಿ ಕೊರೊನಾ ಮೂರನೇ ಅಲೆ ಆತಂಕ ಎದುರಾಗಿದ್ದರೂ ಶಾಲೆಗಳನ್ನು ತೆರೆಯಲು ಹಲವು ರಾಜ್ಯಗಳು ಸಿದ್ಧತೆ ನಡೆಸುತ್ತಿವೆ. ಸುಮಾರು 14 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಇದೇ ತಿಂಗಳು ಶಾಲಾ-ಕಾಲೇಜುಗಳನ್ನು ತೆರೆಯಲು ಸಿದ್ಧತೆ ನಡೆಸಿವೆ. ಮಾರ್ಚ್ 2020ರಲ್ಲಿ ದೇಶಾದ್ಯಂತ 15 ಲಕ್ಷಕ್ಕೂ ಹೆಚ್ಚು ಶಾಲೆಗಳು ಬಾಗಿಲು ಮುಚ್ಚಿದ್ದವು. ಇದೀಗ ಶಾಲೆಗಳನ್ನು ತೆರೆಯುವತ್ತ ರಾಜ್ಯ ಸರ್ಕಾರಗಳು ಮನಸ್ಸು ಮಾಡಿವೆ. ಮೊದಲು ಪ್ರಾಥಮಿಕ ಶಾಲೆಗಳನ್ನು ತೆರೆಯುವತ್ತ ಚಿಂತನೆ ನಡೆಸಿವೆ.
6 ತಿಂಗಳ ಕಾಲ ಎಚ್ಚರಿಕೆಯಿಂದಿರಿ; ಸೌಮ್ಯಾ ಸ್ವಾಮಿನಾಥನ್
ದೇಶದಲ್ಲಿ ಕೊರೊನಾ ಎರಡನೇ ಅಲೆಯಲ್ಲಿ ಪ್ರಕರಣಗಳು ತಗ್ಗುತ್ತಿದ್ದಂತೆ ಎಲ್ಲೆಡೆ ಜನಜಂಗುಳಿ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಎಚ್ಚರಿಕೆ ನೀಡಿದ್ದರು. ಕೊರೊನಾ ಮೂರನೇ ಅಲೆ ಆತಂಕ ಎದುರಾಗಿರುವ ಈ ಸಮಯದಲ್ಲಿ ಜನರು ಯಾವುದೇ ಕಾರಣಕ್ಕೂ ಕೊರೊನಾ ನಿಯಮಗಳನ್ನು ಪಾಲನೆ ಮಾಡುವುದರಲ್ಲಿ ನಿರ್ಲಕ್ಷ್ಯ ತೋರಬೇಡಿ. ಇನ್ನೂ ಆರು ತಿಂಗಳ ಕಾಲ ಕಠಿಣವಾಗಿರುತ್ತದೆ. ಅಲ್ಲಿಯವರೆಗೂ ಜನರು ಎಚ್ಚರ ತಪ್ಪಬಾರದು. ಆರು ತಿಂಗಳ ನಂತರ ಹೆಚ್ಚಿನ ಜನಸಂಖ್ಯೆಗೆ ಲಸಿಕೆ ನೀಡಿ ಪೂರೈಸಲಾಗಿರುತ್ತದೆ. ಹೀಗಾಗಿ ಪರಿಸ್ಥಿತಿ ಸುಧಾರಿಸಬಹುದು. ಅಲ್ಲಿಯವರೆಗೂ ಕೊರೊನಾ ನಿಯಮಗಳ ಪಾಲನೆಯೆಡೆಗೆ ನಿರ್ಲಕ್ಷ್ಯ ತೋರಬೇಡಿ ಎಂದು ಮನವಿ ಮಾಡಿದ್ದರು.
ಎಲ್ಲೆಲ್ಲಿ ಶಾಲೆಗಳನ್ನು ತೆರೆಯಲಾಗುತ್ತಿದೆ?
ಹಲವು ರಾಜ್ಯಗಳು ಶಾಲೆಗಳನ್ನು ತೆರೆಯಲು ಸಿದ್ಧತೆ ನಡೆಸುತ್ತಿವೆ. ಹರಿಯಾಣದಲ್ಲಿ ಆಗಸ್ಟ್ 16 ರಿಂದ 9 ರಿಂದ 12ನೇ ತರಗತಿವರೆಗೆ ಶಾಲೆಗಳನ್ನು ತೆರೆಯಲು ಚಿಂತನೆ ನಡೆಸಲಾಗಿದೆ. ಪಂಜಾಬ್, ಉತ್ತರಾಖಂಡ್, ಹಿಮಾಚಲಪ್ರದೇಶ, ಪುದುಚೇರಿ, ಲಕ್ಷದ್ವೀಪದಲ್ಲಿ ಆಗಸ್ಟ್ ಮೊದಲ ವಾರದಿಂದಲೇ ಶಾಲೆಗಳು ಆರಂಭಗೊಂಡಿವೆ. ಆಂಧ್ರಪ್ರದೇಶದಲ್ಲಿ ಆಗಸ್ಟ್ 16ರಿಂದ ಶಾಲೆಗಳು ಆರಂಭಗೊಳ್ಳಲಿವೆ. ಕರ್ನಾಟಕದಲ್ಲಿ ಆಗಸ್ಟ್ 23ರಿಂದ ಶಾಲೆಗಳನ್ನು ತೆರೆಯಲು ನಿರ್ಧರಿಸಲಾಗಿದೆ. ತಮಿಳುನಾಡಿನಲ್ಲಿ ಸೆಪ್ಟೆಂಬರ್ 1 ರಿಂದ 9-12ನೇ ತರಗತಿವರೆಗೆ ಶಾಲೆಗಳನ್ನು ತೆರೆಯಲು ನಿರ್ಧರಿಸಲಾಗಿದೆ.





