ಬಾಸ್ಟನ್: 'ಭಾರತದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ. ದೇಶದಲ್ಲಿ ಅಧಿಕ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯೂ ಆಗುತ್ತಿದೆ' ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಇಲ್ಲಿನ ಹಾರ್ವರ್ಡ್ ಕೆನಡಿ ಸ್ಕೂಲ್ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ದೇಶದಲ್ಲಿ ಕಲ್ಲಿದ್ದಲು ಕೊರತೆ ಕಂಡುಬಂದಿದೆ ಎಂಬು ವರದಿಗಳು ಆಧಾರರಹಿತ' ಎಂದು ಹೇಳಿದರು.
'ಈ ಕುರಿತು ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಎರಡು ದಿನಗಳ ಹಿಂದಷ್ಟೇ ಪ್ರತಿಕ್ರಿಯಿಸಿದ್ದಾರೆ. ಇತರ ಕೆಲವು ಕಾರಣಗಳಿಂದಾಗಿ ವಿದ್ಯುತ್ ಬೇಡಿಕೆ ಹಾಗೂ ಪೂರೈಕೆಯಲ್ಲಿ ವ್ಯತ್ಯಾಸ ಕಂಡು ಬಂದಿದ್ದಾಗಿ ತಿಳಿಸಿದ್ದಾರೆ. ಇಂಧನ ಸಚಿವರು ಪ್ರತಿಕ್ರಿಯಿಸುವ ಸಂದರ್ಭದಲ್ಲಿ ದೇಶದ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ನಾಲ್ಕು ದಿನಗಳಿಗಾಗುವಷ್ಟು ಕಲ್ಲಿದ್ದಲು ದಾಸ್ತಾನಿತ್ತು' ಎಂದರು.
'ದೇಶದ ವಿದ್ಯುತ್ ಬೇಡಿಕೆ ಎಷ್ಟು ಎಂಬುದರ ಅರಿವಿದೆ. ನವೀಕರಿಸಬಹುದಾದ ಹಾಗೂ ಪಳಿಯುಳಿಕೆ ಮೂಲಗಳಿಂದ ಸಿಗುವ ಇಂಧನ ಬಳಸಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆ ಹೆಚ್ಚಿಸಲು ಮುಂದಾಗಿದ್ದೇವೆ. ಹೀಗಾಗಿ ವಿದ್ಯುತ್ ಉತ್ಪಾದನೆಗೆ ಕೈಗೊಂಡ ಹೊಸ ಕ್ರಮಗಳಿಂದಾಗಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಸಾಧ್ಯತೆಗಳಿವೆ ಹೊರತು ಕಲ್ಲಿದ್ದಲು ಕೊರತೆಯಿಂದಲ್ಲ' ಎಂದು ವಿವರಿಸಿದರು.