ಕಾಸರಗೋಡು: ತರಕಾರಿ ಬೆಲೆ ಏರಿಕೆ ನಿಯಂತ್ರಣದ ಅಂಗವಾಗಿ ಜಿಲ್ಲೆಯಲ್ಲಿ ಕೃಷಿ ಅಭಿವೃದ್ಧಿ ಮತ್ತು ರೈತ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಹಾರ್ಟಿಕಾರ್ಪ್ ಹಾಗೂ ವಿಎಫ್ ಪಿಸಿಕೆ ಸಹಯೋಗದಲ್ಲಿ ಸಂಚಾರಿ ಹಣ್ಣು, ತರಕಾರಿ ಬಂಡಿ ಆರಂಭಿಸಲಾಗಿದೆ.
ಕಾಞಂಗಾಡ್ ಅಲಾಮಿಪಳ್ಳಿ ಪ್ರದೇಶದಲ್ಲಿ ಸಂಚರಿಸುವ ಹಣ್ಣು ಮತ್ತು ತರಕಾರಿ ಬಂಡಿಯನ್ನು ಶಾಸಕ ಇ. ಚಂದ್ರಶೇಖರನ್ ಉದ್ಘಾಟಿಸಿ ಚಾಲನೆ ನೀಡಿದರು. ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕೃಷಿ ಅಧಿಕಾರಿ ಆರ್.ವೀಣಾರಾಣಿ ಯೋಜನೆಯ ಬಗ್ಗೆ ವಿವರಿಸಿದರು. ಉಪ ಕೃಷಿ ನಿರ್ದೇಶಕಿ ಮಂಜುಳಾ ಮುರಳೀಧರನ್ ಸ್ವಾಗತಿಸಿ, ವಿಎಫ್ಪಿಸಿಕೆ ಜಿಲ್ಲಾ ವ್ಯವಸ್ಥಾಪಕಿ ಸಿಂಧು ಎಸ್ ನಾರಾಯಣ್ ವಂದಿಸಿದರು.
ಏನಿದು ಬಂಡಿ?:
ಟೊಮೇಟೊ ಸೇರಿದಂತೆ ತರಕಾರಿಗಳ ಬೆಲೆ ಗಗನಕ್ಕೇರುತ್ತಿರುವ ಈ ಹೊತ್ತಿನಲ್ಲಿ ಹಣ್ಣು, ತರಕಾರಿ ಬಂಡಿಗಳನ್ನು ಆರಂಭಿಸಲಾಗಿದೆ. ಹಣ್ಣು ಮತ್ತು ತರಕಾರಿ ಮಾರುಕಟ್ಟೆಗಳು ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ತೆರೆದಿರುತ್ತವೆ. ಸೋಮವಾರ, ಶುಕ್ರವಾರ ಮತ್ತು ಭಾನುವಾರದಂದು ಕಾಞಂಗಾಡ್ನಲ್ಲಿ, ಮಂಗಳವಾರ ಮತ್ತು ಬುಧವಾರದಂದು ಕಾಸರಗೋಡಿನಲ್ಲಿ, ಗುರುವಾರ ಉಪ್ಪಳ, ಮಂಜೇಶ್ವರದ ವಿವಿಧೆಡೆ ಮತ್ತು ಶನಿವಾರ ಪರಪ್ಪದಲ್ಲಿ ಮಾರುಕಟ್ಟೆ ತೆರೆದಿರುತ್ತದೆ.
ರಾಜ್ಯ, ನೆರೆಯ ರಾಜ್ಯಗಳು ಮತ್ತು ಉತ್ತರದ ರಾಜ್ಯಗಳ ರೈತರಿಂದ ಟೊಮೆಟೊ ಮತ್ತು ಇತರ ತರಕಾರಿಗಳನ್ನು ಖರೀದಿಸಿ ವಿತರಿಸುವ ಯೋಜನೆ ಇದಾಗಿದೆ. ಶಾಶ್ವತ ಮಾರುಕಟ್ಟೆ ಇಲ್ಲದ ಪ್ರದೇಶಗಳಲ್ಲಿ ಹಾರ್ಟಿಕಾರ್ಪ್ ನೇತೃತ್ವದಲ್ಲಿ ಮೊಬೈಲ್ ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗುವುದು.
ಹಣ್ಣು-ತರಕಾರಿ ಬಂಡಿಯಲ್ಲಿ ಭಾರಿ ರಿಯಾಯಿತಿಯಲ್ಲಿ ತರಕಾರಿಗಳನ್ನು ನೀಡಲಾಗುತ್ತದೆ. ಸಾಮಾನ್ಯ ಮಾರುಕಟ್ಟೆಯಲ್ಲಿ ಟೊಮೇಟೊ ಬೆಲೆ 60 ರೂ.ಗಳಿದ್ದು ಬಂಡಿಯ ಮೂಲಕ 50 ರೂ., 100 ರೂ. ಬೆಲೆ ಬೆಂಡೆಕಾಯಿಗೆ 90 ರೂ., 80 ರೂ. ಬೆಲೆಯ ಪಚ್ಚೆಹೆಸರನ್ನು 65 ರೂ. ಗೆ, 50 ರೂ. ಬೆಲೆಯ ಕೇನೆಗೆ 34 ರೂ.ಬೆಲೆಗೆ, 100 ರೂ. ಬೆಲೆ ಇರುವ ಮೆಣಸಿಗೆ 85 ರೂ.ಗಳಿಗೆ, 46 ರೂ. ಬೆಲೆಯ ಈರುಳ್ಳಿಯನ್ನು 43 ರೂ ವಿಗೆ ಸಂಚಾರಿ ಬಂಡಿಯ ಮೂಲಕ ಮಾರಾಟ ಮಾಡಲಾಗುತ್ತದೆ.

