ಕೋಝಿಕ್ಕೋಡ್: ಕಾಸರಗೋಡು ಸಹಿತ ಮಲಬಾರ್ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಚಿನ್ನದ ಅಂಗಡಿಗಳು, ಬಟ್ಟೆ ಅಂಗಡಿಗಳು ಬಿಜಿಯಾಗಿವೆ. ಬಹುಪಾಲು ಮಂದಿ ವಿವಾಹ ಸಿದ್ದತೆಗಳಿಗಾಗಿ ಖರೀದಿಗೆ ಮಳಿಗೆಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಹಠಾತ್ ಬೆಳವಣಿಗೆಯಿಂದ ವ್ಯಾಪಾರಿಗಳೇ ಬೆರಗಾಗಿದ್ದಾರೆ. ಮೊದಲಿಗೆ ಅವರಿಗೆ ವಿಷಯ ಏನೆಂದು ಅರ್ಥವಾಗಲಿಲ್ಲ. ಕೊರೋನಾ ನಿರ್ಬಂಧಗಳಿಂದಾಗಿ ಮುಂದೂಡಲ್ಪಟ್ಟ ವಿವಾಹಗಳು ನಡೆಯಲಿವೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಇದು ವಿಷಯವೇ ಬೇರೆಯಿದೆ.
ಹೆಣ್ಣು ಮಕ್ಕಳ ವಿವಾಹ ವಯೋಮಿತಿಯನ್ನು 21 ವರ್ಷಕ್ಕೆ ಏರಿಸುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ವೇಗ ನೀಡಿದ್ದು, ಮಲಬಾರ್ ಭಾಗದಲ್ಲಿ ವಿವಾಹಕ್ಕೆ ನೂಕು ನುಗ್ಗಲು ಉಂಟಾಗಿದೆ. ಕಾನೂನು ಜಾರಿಗೆ ಬರುವ ಮುನ್ನವೇ ಹೆಣ್ಣುಮಕ್ಕಳ ವಿವಾಹ ನೆರವೇರಿಸಿ ಕ್ಯೆ ತೊಳೆದುಕೊಳ್ಳುವ ಸ್ಪರ್ಧೆಯಲ್ಲಿ ಹಲವರು ಇದ್ದಾರೆ. ಈ ಕಾರಣದಿಂದ ಆಭರಣ ಮತ್ತು ಜವಳಿ ಅಂಗಡಿಗಳಲ್ಲಿ ಜನಜಂಗುಳಿ ಕಂಡುಬಂದಿದೆ.
ವಿವಾಹ ವಯೋಮಿತಿ ಹೆಚ್ಚಿಸುವ ಕೇಂದ್ರದ ನಿರ್ಧಾರವನ್ನು ಸಾಮಾನ್ಯವಾಗಿ ಮಹಿಳಾ ಸಮುದಾಯದವರು ಸ್ವಾಗತಿಸಿದ್ದರೂ ಧಾರ್ಮಿಕ ಮತ ಪಂಡಿತರು ಇದನ್ನು ಅರಗಿಸಿಕೊಂಡಿಲ್ಲ. ತೀವ್ರವಾದಿ ಮುಸ್ಲಿಂ ಗುಂಪುಗಳು 18 ವರ್ಷ ವಯಸ್ಸಿನ ಹುಡುಗಿಯರನ್ನು ತಕ್ಷಣವೇ ವಿವಾಹ ಮಾಡಿಕೊಡಲು ಕರೆ ನೀಡಿವೆ. ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು, ಕಾಸರಗೋಡು ಜಿಲ್ಲೆಗಳ ಹಲವು ಪಳ್ಳಿ- ಮಹಲ್ ಸಮಿತಿಗಳು ಭಕ್ತರಿಗೆ ರಹಸ್ಯವಾಗಿ ಮನವಿ ಸಲ್ಲಿಸಿವೆ ಎಂದು ತಿಳಿದು ಬಂದಿದೆ. ಅನೇಕ ಹುಡುಗಿಯರ ತೀವ್ರ ವಿರೋಧದ ನಡುವೆಯೂ ಸಂಬಂಧಿಕರು ಮತ್ತು ಧರ್ಮಗುರುಗಳು ಮದುವೆ ನಿರ್ಧಾರಕ್ಕೆ ಮುಂದಾಗಿದ್ದಾರೆ.
ಪ್ರತಿ ಜಿಲ್ಲೆಯಲ್ಲಿ ನೂರಾರು ಹೆಣ್ಣು ಮಕ್ಕಳ ಮದುವೆ ನಿಶ್ಚಿತಾರ್ಥ ನಡೆದಿದೆ ಎಂದು ತಿಳಿದು ಬಂದಿದೆ. ವಿವಾಹವಾಗುವವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು. ಕಾಲೇಜುಗಳು ಪೂರ್ಣಪ್ರಮಾಣದಲ್ಲಿ ನಡೆಯದ ಕಾರಣ ವಿವಾಹ ವಿಚಾರ ಹೊರಗೆ ಗೊತ್ತಾಗಿಲ್ಲ. ಒಂದು ವರ್ಷದ ನಂತರ ಮದುವೆ ಆಗುತ್ತೆ ಎಂಬ ಖಾತ್ರಿಯ ಮೇಲೆ ನಿಕಾಹ್ ಸಮಾರಂಭ ಏರ್ಪಡಿಸುವವರೂ ಇದ್ದಾರೆ. ಹೆಣ್ಣುಮಕ್ಕಳ ವಿವಾಹ ವಯಸ್ಸನ್ನು 18 ರಿಂದ 21 ಕ್ಕೆ ಏರಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಾಮಾನ್ಯವಾಗಿ ಮಹಿಳೆಯರು ಮತ್ತು ಪುರುಷರು ಒಪ್ಪಿಕೊಂಡಿರುವರು. ಸೋಷಿಯಲ್ ಮೀಡಿಯಾ ಸೇರಿದಂತೆ ಅನೇಕ ಜಾಲತಾಣಗಳಲ್ಲಿ ಹುಡುಗಿಯರು ಸಾಕಷ್ಟು ಬೆಂಬಲವನ್ನು ನೀಡುತ್ತಿದ್ದಾರೆ.
ಮಹಿಳಾ ಸಬಲೀಕರಣ, ಲಿಂಗ ಸಮಾನತೆ, ಮಹಿಳಾ ಉದ್ಯೋಗ ಪ್ರಾತಿನಿಧ್ಯ ಹೆಚ್ಚಿಸುವುದು ಮಸೂದೆಯ ಉದ್ದೇಶಗಳು ಎಂದು ಕೇಂದ್ರ ಸರ್ಕಾರ ಹೇಳಿದ್ದರೂ ಪ್ರತಿಪಕ್ಷಗಳು ಇದ್ಯಾವುದನ್ನೂ ಕೇಳಲು ಸಿದ್ಧವಿಲ್ಲ. ಜಾತಿ, ಮತ, ಪಂಥಗಳ ಭೇದವಿಲ್ಲದೆ ಮಹಿಳೆಯರ ವಿವಾಹ ವಯಸ್ಸನ್ನು 21ಕ್ಕೆ ಏರಿಸುವುದು ಮಸೂದೆಯಲ್ಲಿದೆ. ಧಾರ್ಮಿಕ ಮುಸ್ಲಿಂ ಲೀಗ್ ಮತ್ತು ಓವೈಸಿ ಅವರ ಪಕ್ಷವು ಮದುವೆಯ ವಯಸ್ಸನ್ನು ಹೆಚ್ಚಿಸುವುದನ್ನು ವಿರೋಧಿಸುವುದು ಸಹಜ. ಆದರೆ ಪ್ರಗತಿಪರ ಮತ್ತು ಸ್ತ್ರೀವಾದಿ ಎಂದು ಬಿಂಬಿಸಿಕೊಳ್ಳುವ ಸಿಪಿಎಂ ಸೇರಿದಂತೆ ಎಡಪಕ್ಷಗಳು ಮಸೂದೆಯನ್ನು ಏಕೆ ವಿರೋಧಿಸುತ್ತವೆ ಎಂದು ಎಷ್ಟೇ ಯೋಚಿಸಿದರೂ ಸಾಲದು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.
ಕಳೆದ ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮಹಿಳೆಯರಿಗೆ ನೀಡಿದ ಭರವಸೆಯನ್ನು ಲೋಕಸಭೆಯಲ್ಲಿ ಮಸೂದೆ ಮಂಡನೆಯಲ್ಲಿ ಈಡೇರಿಸಲಾಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ದೈಹಿಕ, ಮಾನಸಿಕ, ಸಂತಾನೋತ್ಪತ್ತಿ ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಪ್ರಗತಿ ಸಾಧಿಸದೆ ದೇಶ ಸಂಪೂರ್ಣ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಬಿಂಬಿಸುತ್ತಿದೆ.