ನವದೆಹಲಿ: ಇನ್ಮುಂದೆ ಪ್ರತಿವರ್ಷ ಜನವರಿ 23ಕ್ಕೆ ಗಣರಾಜ್ಯೋತ್ಸವ ಆಚರಣೆಗಳು ಪ್ರಾರಂಭವಾಗಲಿವೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ಜಯಂತಿ ಸೇರಿಸಲು ಜನವರಿ 24ರ ಬದಲು ಜನವರಿ 23 ರಿಂದ ಗಣರಾಜ್ಯೋತ್ಸವ ಆಚರಣೆಗಳು ಆರಂಭವಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ನರೇಂದ್ರ ಮೋದಿ ಸರ್ಕಾರ ಈ ಹಿಂದೆ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಪರಾಕ್ರಮ್ ದಿವಸ್ ಎಂದು ಆಚರಿಸಲು ಪ್ರಾರಂಭಿಸಿತು. ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಪ್ರಮುಖ ಅಂಶಗಳನ್ನು ಆಚರಿಸಲು, ಸ್ಮರಿಸಲು ಮೋದಿ ಸರ್ಕಾರ ಗಮನ ಹರಿಸಿದೆ. ಇದರ ಭಾಗವಾಗಿ ಜನವರಿ 23 ರಿಂದ ಗಣರಾಜ್ಯೋತ್ಸವ ಆಚರಣೆಗಳು ಪ್ರಾರಂಭವಾಗಲಿವೆ.
ಆಗಸ್ಟ್ 14: ವಿಭಜನೆಯ ಭಯಾನಕ ನೆನಪಿನ ದಿನ: ದೇಶದ ವಿಭಜನೆಯ ಅವಧಿಯಲ್ಲಿ ಪ್ರಾಣತೆತ್ತ ಲಕ್ಷಾಂತರ ಜನರ ನೆನಪಿಗಾಗಿ ಆಗಸ್ಟ್ 14ನ್ನು ವಿಭಜನೆಯ ಭಯಾನಕ ನೆನಪಿನ ದಿನವನ್ನಾವಾಗಿ ಆಚರಿಸಲಾಗುತ್ತದೆ.
ಅಕ್ಟೋಬರ್ 31: ಏಕತಾ ದಿವಸ್ ಅಥವಾ ರಾಷ್ಟ್ರೀಯ ಏಕತೆ ದಿನ- ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮ ದಿನದ ಅಂಗವಾಗಿ ಅಕ್ಟೋಬರ್ 31 ರಂದು ಏಕತಾ ದಿನವನ್ನಾಗಿ ಆಚರಿಸಲಾಗುತ್ತದೆ. 2014ರಲ್ಲಿ ಮೊದಲ ಬಾರಿಗೆ ಏಕತಾ ದಿವಸ್ ಆಗಿ ಆಚರಿಸಲಾಗಿತ್ತು. ಅಂದು ದೇಶಾದ್ಯಂತ ಏಕತಾ ಓಟವನ್ನು ಏರ್ಪಡಿಸಲಾಗುತ್ತದೆ.
ನವೆಂಬರ್ 15: ಜಂಜಾಟಿಯ ಗೌರವ್ ದಿವಸ್: ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮ ದಿನದ ಅಂಗವಾಗಿ ಅವರ ಸ್ಮರಣೆಯಲ್ಲಿ ಜಂಜಾಟಿಯ ಗೌರವ್ ದಿವಸ್ ಆಚರಿಸಲಾಗುತ್ತದೆ.
ನವೆಂಬರ್ 26: ಸಂವಿಧಾನ ದಿನ: ಈ ದಿನದಂದು ಭಾರತದ ಸಂವಿಧಾನವನ್ನು ಅಂಗೀಕರಿಸಲಾಗಿತ್ತು. ನವೆಂಬರ್ 26, 1949 ರಂದು ಭಾರತೀಯ ಸಂವಿಧಾನ ರಚನಾ ಸಭೆಯಿಂದ ಸಂವಿಧಾನವನ್ನು ಅಂಗೀಕರಿಸಲಾಗಿತ್ತು.
ಡಿಸೆಂಬರ್ 26: ವೀರ ಬಾಲ ದಿವಸ್: ಡಿಸೆಂಬರ್ 26, 1705ರಂದು ದೇಶಕ್ಕಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ್ದ 10ನೇ ಸಿಖ್ ಗುರು ಗೋಬಿಂದ್ ಸಿಂಗ್ ಅವರ ಮಕ್ಕಳಾದ ಸಾಹಿಬ್ಜಾದಾ ಫತೇಸಿಂಗ್ (6) ಮತ್ತು ಸಾಹಿಬ್ಜಾದಾ ಝೋರಾವಾರ್ ಸಿಂಗ್ (19) ಅವರ ಗೌರವಾರ್ಥವಾಗಿ ವೀರ ಬಾಲ ದಿವಸ್ ಆಗಿ ಆಚರಿಸಲಾಗುತ್ತದೆ.




