ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸೋದರಳಿಯ ಸೊಹೈಲ್ ಕಸ್ಕರ್ ಭಾರತೀಯ ಗುಪ್ತಚರ ಸಂಸ್ಥೆಗಳು ಮತ್ತು ಮುಂಬೈ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪಾಕಿಸ್ತಾನಕ್ಕೆ ಪರಾರಿಯಾಗಿದ್ದು, ಆತನನ್ನು ಭಾರತಕ್ಕೆ ಕರೆತರುವ ಕೆಲಸ ತುಂಬಾ ತ್ರಾಸದಾಯಕವಾಗಿದೆ.
ಭಾರತೀಯ ಗುಪ್ತಚರ ಏಜೆನ್ಸಿಗೆ ಚಳ್ಳೆ ಹಣ್ಣು ತಿನ್ನಿಸಿ, ದುಬೈನಿಂದ ಪಾಕಿಸ್ತಾನಕ್ಕೆ ಸೊಹೈಲ್ ಕಸ್ಕರ್ ತಲುಪಿರುವುದಾಗಿ ಮುಂಬೈ ಪೊಲೀಸ್ ಮೂಲಗಳು ಹೇಳಿವೆ. ಕಸ್ಕರ್ ನನ್ನು ಇತ್ತೀಚಿಗೆ ಡ್ಯಾನಿಶ್ ಆಲಿಯೊಂದಿಗೆ ಅಮೆರಿಕಾದ ಏಜೆನ್ಸಿಗಳು ಬಂಧಿಸಿದ್ದವು. ಅಂತಾರಾಷ್ಟ್ರೀಯ ಬೆಂಬಲದಿಂದ ಆಲಿಯನ್ನು ಇತ್ತೀಚಿಗೆ ಭಾರತಕ್ಕೆ ಕರೆ ತರಲಾಗಿದೆ. ಸೊಹೈಲ್ ನನ್ನು ಶೀಘ್ರದಲ್ಲಿಯೇ ಭಾರತಕ್ಕೆ ಕರೆತರುವುದಾಗಿ ಮುಂಬೈ ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಸ್ಕರ್ ಮಾಡಿದ್ದ ಕರೆಯೊಂದನ್ನು ಇತ್ತೀಚಿಗೆ ಭಾರತೀಯ ಗುಪ್ತಚರ ಏಜೆನ್ಸಿಗಳು ಪತ್ತೆ ಮಾಡಿವೆ. ಆ ಕರೆ ಆಧಾರದ ಮೇಲೆ ಏಜೆನ್ಸಿಗಳು ಕಾರ್ಯಪ್ರವೃತ್ತರಾದಾಗ ಕಸ್ಕರ್ ಅಮೆರಿಕ ತೊರೆದಿದ್ದು, ದುಬೈ ಮೂಲಕ ಪಾಕಿಸ್ತಾನ ತಲುಪಿರುವುದಾಗಿ ತಿಳಿದುಬಂದಿದೆ. ಅಮೆರಿಕ ಆತನನ್ನು ಹೇಗೆ ಬಿಟ್ಟುಕೊಟ್ಟಿತು ಮತ್ತು ಭಾರತಕ್ಕೆ ಏಕೆ ಹಸ್ತಾಂತರಿಸಲಿಲ್ಲ ಎಂಬ ಬಗ್ಗೆ ಗುಪ್ತಚರ ಸಂಸ್ಥೆಗಳಿಗೆ ತಿಳಿದಿಲ್ಲ.
2001ರಲ್ಲಿ ದುಬೈಗೆ ತೆರಳಿದ್ದ ಡ್ಯಾನಿಶ್ ಕಸ್ಕರ್ ನನ್ನು ಭೇಟಿ ಮಾಡಿದ್ದ. ನಂತರ ಇಬ್ಬರೂ ಒಟ್ಟಾಗಿಯೇ ಮೂರು ವರ್ಷ ಇದ್ದಾರೆ. ವಜ್ರದ ಕಳ್ಳ ಸಾಗಣೆಗೆ ಡ್ಯಾನಿಶ್ ನನ್ನು ಕಸ್ಕರ್ ತಳ್ಳಿದ್ದು, ರಷ್ಯಾಕ್ಕೆ ಕಳುಹಿಸಿದ್ದಾನೆ. ಡ್ಯಾನಿಶ್ 2003ರಲ್ಲಿ ವಿದ್ಯಾರ್ಥಿ ವೀಸಾದೊಂದಿಗೆ ರಷ್ಯಾಗೆ ತೆರಳುತ್ತಾನೆ. ಇದೇ ವೇಳೆ ಸೂಹೈಲ್ ಡೈಮಂಡ್ ಕಳ್ಳ ಸಾಗಣೆ ಕೇಸ್ ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಬಂಧನಕ್ಕೊಳಗಾಗಿ ಒಂದು ವರ್ಷ ಜೈಲಿನಲ್ಲಿರುತ್ತಾನೆ. ಜೈಲಿನಿಂದ ಹೊರಗೆ ಬಂದ ನಂತರ ಸೂಹೈಲ್ ಮತ್ತು ಡ್ಯಾನಿಶ್ ಶಸಾಸ್ತ್ರಗಳ ಕಳ್ಳತನ ಆರಂಭಿಸಿದ್ದರು.
ಅವರಿಬ್ಬರೂ ಸ್ಪೇನ್ ಗೆ ತೆರಳಿದಾಗ ಅಮೆರಿಕ ಏಜೆನ್ಸಿಗಳ ರೆಡಾರ್ ನಲ್ಲಿ ಸಿಕ್ಕಿದ್ದಾರೆ. ಸ್ಪೇನ್ ಮತ್ತು ಅಮೆರಿಕಾ ಒಟ್ಟಾಗಿ ಕಾರ್ಯನಿರ್ವಹಿಸಿ, ಅವರನ್ನು ಪತ್ತೆ ಹಚ್ಚಿದ್ದಾರೆ. ಅಂತಿಮವಾಗಿ 2014ರಲ್ಲಿ ಡ್ರಗ್ ಮತ್ತು ಶಸಾಸ್ತ್ರ ಡೀಲ್ ನಲ್ಲಿ ಡ್ಯಾನಿಶ್ ಮತ್ತು ಸೂಹೈಲ್ ನನ್ನು ಅಮೆರಿಕ ಏಜೆನ್ಸಿಗಳು ಬಂಧಿಸಿದ್ದು, ಫೆಡರಲ್ ಬ್ಯೂರೊ ಆಫ್ ಇನ್ವೇಷ್ಟಿಗೇಷನ್ ನಿಂದ ತನಿಖೆ ನಡೆಸಲಾಗಿದೆ.
2018 ಸೆಪ್ಟೆಂಬರ್ 12 ರಂದು ಸೊಹೈಲ್ ಆರೋಪಿ ಎಂದು ಅಮೆರಿಕ ಕೋರ್ಟ್ ಘೋಷಿಸಿದ ನಂತರ ಆತನನ್ನು ಭಾರತಕ್ಕೆ ಕರೆತರಲು ಭಾರತದ ಏಜೆನ್ಸಿಗಳು ಪ್ರಯತ್ನಿಸಿವೆ. ಆತನ ಬಳಿ ಭಾರತದ ಪಾಸ್ ಪೋರ್ಟ್ ಇದಿದ್ದನ್ನು ಅಮೆರಿಕ ಏಜೆನ್ಸಿಗಳು ಪತ್ತೆ ಹಚ್ಚಿದ್ದ ನಂತರ ಪರಸ್ಪರ ಕಾನೂನು ನೆರವು ಒಪ್ಪಂದ 2005ರ ಅಡಿ ಆತನನ್ನು ಭಾರತಕ್ಕೆ ಹಸ್ತಾಂತರಿಸಲಾಗುವುದು ಎಂದು ಅಮೆರಿಕ ಹೇಳಿತ್ತು.
ಸೊಹೈನ್ ಖಾನ್ 2010ರಲ್ಲಿ ಕಿಡ್ನಿ ವೈಫಲ್ಯದಿಂದ ಮೃತರಾದ ನೂರಾ ಕಸ್ಕರ್ ಪುತ್ರ. ಒಂದು ವೇಳೆ ಆತನನ್ನು ಭಾರತೀಯ ಏಜೆನ್ಸಿಗಳಿಗೆ ಒಪ್ಪಿಸಿದರೆ, ದಾವೂದ್ ಇಬ್ರಾಹಿಂ ಸಂಬಂಧಿತ ಭಯೋತ್ಪಾದನಾ ಕೇಸ್ ಗಳ ತನಿಖೆಗೆ ಬಹಳಷ್ಟು ನೆರವಾಗಲಿದೆ.