HEALTH TIPS

ಅಸಮಾನತೆ ನಿವಾರಣೆ ಕ್ರಮಗಳು- ಜಾಗತಿಕ ನೆಮ್ಮದಿಗೆ ಅನಿವಾರ್ಯ

               ನಮ್ಮ ಸಮಾಜದಲ್ಲಿ ಮತ್ತು ಅರ್ಥ ವ್ಯವಸ್ಥೆಯಲ್ಲಿ ಅಸಮಾನತೆ ಸದಾ ಇದ್ದೇ ಇತ್ತು. ಜನಸಮುದಾಯಗಳು ಮತ್ತು ಜನರು ಅದರ ಜತೆಗೇ ಬದುಕುತ್ತಿದ್ದಾರೆ ಮತ್ತು ಅಸಮಾನತೆಯನ್ನು ಕಡಿಮೆ ಮಾಡಲು ತಮ್ಮ ಕೈಲಾದ ಪ್ರಯತ್ನ ಮಾಡುತ್ತಲೇ ಇದ್ದಾರೆ. ಸಮಸ್ಯೆಗಳನ್ನು ವಿವರಿಸುವ ಮತ್ತು ವಿವಿಧ ರೀತಿಯಲ್ಲಿ ಅವುಗಳನ್ನು ಪರಿಹರಿಸುವ ಪ್ರಯತ್ನಗಳು ನಡೆದಿವೆ.

          ನೈಸರ್ಗಿಕ ಮತ್ತು ಇತರ ರೀತಿಯ ವಿದ್ಯಮಾನಗಳು ಅಂತರವನ್ನು ಇನ್ನಷ್ಟು ಹೆಚ್ಚಿಸಿ ಸಮಸ್ಯೆಯು ಬಿಗಡಾಯಿಸುವಂತೆ ಮಾಡಿವೆ; ಸಂಪರ್ಕಗಳು, ಬಂಧಗಳು ಕುಸಿಯುವಂತೆ ಮಾಡಿ ಪರಿಸ್ಥಿತಿಯನ್ನು ಇನ್ನಷ್ಟು ಘೋರವಾಗಿಸಿದ್ದೂ ಇದೆ. ಕೋವಿಡ್‌-19 ಸಾಂಕ್ರಾಮಿಕ ಕೂಡ ಅದನ್ನೇ ಮಾಡಿದೆ. ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್‌) ಶೃಂಗಸಭೆಗೂ ಮುನ್ನ ಪ್ರಕಟವಾದ ಆಕ್ಸ್‌ಫಾಮ್‌ ವರದಿಯಲ್ಲಿ ಅಸಮಾನತೆ ಹೆಚ್ಚಳದ ಬಗ್ಗೆ ವಿವರಗಳು ಇವೆ. ಭಾರತದ ಶೇ 84ರಷ್ಟು ಕುಟುಂಬಗಳ ಆದಾಯವು 2021ರಲ್ಲಿ ಗಣನೀಯವಾಗಿ ಕುಸಿದಿದೆ; ಅದೇ ಹೊತ್ತಿಗೆ ಸಹಸ್ರ ಕೋಟ್ಯಧಿಪತಿಗಳ ಸಂಖ್ಯೆ 102ರಿಂದ 142ಕ್ಕೆ ಏರಿದೆ. ತಳಮಟ್ಟದಲ್ಲಿ ಇರುವ 55.2 ಕೋಟಿ ಜನರಲ್ಲಿ ಒಟ್ಟಾಗಿ ಇರುವಷ್ಟು ಸಂಪತ್ತು ಭಾರತದ ಅತ್ಯಂತ ಶ್ರೀಮಂತ 98 ವ್ಯಕ್ತಿಗಳಲ್ಲಿ ಇದೆ. ದೇಶದ ಶೇ 10ರಷ್ಟು ಅತಿ ಹೆಚ್ಚು ಶ್ರೀಮಂತರಲ್ಲಿ ಶೇ 57ರಷ್ಟು ಸಂಪತ್ತು ಇದೆ. ತಳಮಟ್ಟದಲ್ಲಿ ಇರುವ ಅರ್ಧದಷ್ಟು ಜನರಲ್ಲಿ ಶೇ 13ರಷ್ಟು ಸಂಪತ್ತು ಮಾತ್ರ ಇದೆ.

           ಅಂತರರಾಷ್ಟ್ರೀಯವಾಗಿ ನೋಡಿದಾಗಲೂ ಅಸಮಾನತೆಯ ಪ್ರಮಾಣ ಹೆಚ್ಚಾಗಿದೆ. ಜಾಗತಿಕ ನೆಲೆಯಲ್ಲಿ ಗಮನಿಸಿದಾಗ, ಶೇ 99ರಷ್ಟು ಜನರು ತಮ್ಮ ಆದಾಯದಲ್ಲಿ ಕುಸಿತ ಕಂಡಿದ್ದಾರೆ. 16 ಕೋಟಿ ಜನರು ಬಡತನದ ಬೇಗೆಗೆ ಒಳಗಾಗಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಬಡ ಮತ್ತು ಶ್ರೀಮಂತ ದೇಶಗಳ ನಡುವಣ ಅಂತರ ಕೂಡ ಹೆಚ್ಚುತ್ತಲೇ ಇದೆ. ಅಭಿವೃದ್ಧಿಶೀಲ ದೇಶಗಳಲ್ಲಿ ಇದರ ಹೊಡೆತ ಹೆಚ್ಚು ತೀವ್ರವಾಗಿದೆ. ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾತರಂತಹ ದುರ್ಬಲ ವರ್ಗಗಳ ಮೇಲೆ ಪ್ರತಿಕೂಲ ಪರಿಣಾಮ ಹೆಚ್ಚು ಗಾಢವಾಗಿದೆ. ಅಸಮಾನತೆಯಿಂದಾದ ಹಸಿವು ಅಥವಾ ಅನಾರೋಗ್ಯದ ಕಾರಣದಿಂದ ಪ್ರತೀ ದಿನ 21 ಸಾವಿರ ಜನರು ಸಾಯುತ್ತಿದ್ದಾರೆ. ಕೋವಿಡ್‌-19 ಸಾಂಕ್ರಾಮಿಕಕ್ಕೆ ಜಗತ್ತು ನೀಡಿದ ಪ್ರತಿಕ್ರಿಯೆಯ ರೀತಿಯು ಪ್ರತಿಯೊಂದು ರೀತಿಯ ಅಸಮಾನತೆಯನ್ನೂ ಹೆಚ್ಚಿಸಿದೆ ಎಂಬುದರತ್ತ ವರದಿಯು ಬೆಳಕು ಚೆಲ್ಲಿದೆ. 'ಅಸಮಾನತೆಯು ಅನಾರೋಗ್ಯಕರ, ಅಸಂತೃಪ್ತಿಕರ ಸಮಾಜ ನಿರ್ಮಿಸಿದ್ದಷ್ಟೇ ಅಲ್ಲದೆ, ಹಿಂಸೆಗೂ ಕಾರಣವಾಗಿದೆ. ಅಸಮಾನತೆಯು ಹಂತಕನೂ ಆಗಿದೆ' ಎಂದು ವರದಿಯ ಉಪಸಂಹಾರದಲ್ಲಿ ಹೇಳಲಾಗಿದೆ.

             ಹೆಚ್ಚುತ್ತಿರುವ ಅಸಮಾನತೆಯನ್ನು ಕಡಿಮೆ ಮಾಡಲು ಮತ್ತು ಅದರ ಪರಿಣಾಮವನ್ನು ಕನಿಷ್ಠಗೊಳಿಸಲು ಕೈಗೊಳ್ಳಬಹುದಾದ ಹಲವು ಕ್ರಮಗಳು ಮತ್ತು ನೀತಿಗಳ ಬಗ್ಗೆ ವರದಿಯು ಸಲಹೆಗಳನ್ನು ಮುಂದಿಟ್ಟಿದೆ. ದುರ್ಬಲ ವರ್ಗಗಳು ಮತ್ತು ಕಾರ್ಮಿಕರಿಗೆ ಉತ್ತಮ ರಕ್ಷಣೆ ಒದಗಿಸುವುದಕ್ಕಾಗಿ ಕಾನೂನು ಚೌಕಟ್ಟಿನ ಅಗತ್ಯ ಇದೆ ಎಂದು ವರದಿಯು ಹೇಳಿದೆ. ನಿರ್ಧಾರ ಕೈಗೊಳ್ಳುವಿಕೆಯಲ್ಲಿ ಈ ವರ್ಗಗಳಿಗೆ ಪ್ರಾತಿನಿಧ್ಯ ಕಲ್ಪಿಸುವುದರ ಪರವಾಗಿಯೂ ವರದಿಯು ವಾದಿಸಿದೆ. ಬಡ ದೇಶಗಳ ಜನರಿಗೆ ಲಸಿಕೆಯು ತ್ವರಿತವಾಗಿ ಸಿಗುವಂತಾಗಲು ಲಸಿಕೆಗಳ ಮೇಲಿನ ಬೌದ್ಧಿಕ ಆಸ್ತಿ ಹಕ್ಕನ್ನು ಮನ್ನಾ ಮಾಡಬೇಕಾದ ಅಗತ್ಯ ಇದೆ ಎಂದು ವರದಿಯು ಪ್ರತಿಪಾದಿಸಿದೆ. ಸಾಂಕ್ರಾಮಿಕದ ಅವಧಿಯಲ್ಲಿ ಸೃಷ್ಟಿಯಾದ ಸಂಪತ್ತಿನ ಮೇಲೆ ತೆರಿಗೆ ಹೇರಬೇಕು ಎಂದು ವರದಿಯು ಸರ್ಕಾರಗಳನ್ನು ಬಲವಾಗಿ ಒತ್ತಾಯಿಸಿದೆ. ಹೀಗೆ ಸಂಗ್ರಹವಾದ ಕೋಟ್ಯಂತರ ಹಣವನ್ನು ಸಾರ್ವತ್ರಿಕ ಆರೋಗ್ಯ ರಕ್ಷಣೆ ಸೇವೆಗಳು, ಸಾಮಾಜಿಕ ಭದ್ರತಾ ಯೋಜನೆಗಳು, ಹವಾಮಾನ ಬದಲಾವಣೆ ತಡೆ ಕ್ರಮಗಳು, ಲಿಂಗತ್ವ ಆಧಾರಿತ ಹಿಂಸೆ ತಡೆ ಮತ್ತು ಇಂತಹ ಇತರ ಕಾರ್ಯಕ್ರಮಗಳಿಗೆ ವಿನಿಯೋಗಿಸಬೇಕು ಎಂದು ವರದಿಯು ಆಗ್ರಹಿಸಿದೆ. ಅಮೆರಿಕ ಮತ್ತು ಚೀನಾ ಇಂತಹ ನೀತಿ ಜಾರಿಯ ಬಗ್ಗೆ ಪರಿಶೀಲನೆ ನಡೆಸುತ್ತಿವೆ ಎಂಬುದನ್ನು ವರದಿಯು ಗುರುತಿಸಿದೆ. ಭಾರತದಲ್ಲಿ ಅಸಮಾನತೆಯ ಸಮಸ್ಯೆಯು ತೀವ್ರವಾಗಿದೆ ಮತ್ತು ದಿನ ಕಳೆದಂತೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ಹಾಗಾಗಿ, ಅಸಮಾನತೆಯ ಸಮಸ್ಯೆಯನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಬಗೆಹರಿಸಲು ಸರ್ಕಾರವು ಕ್ರಮಗಳನ್ನು ಕೈಗೊಳ್ಳಬೇಕಿದೆ. ಅಸಮಾನತೆಯ ಪ್ರಮಾಣವನ್ನು ಕಡಿಮೆ ಮಾಡುವುದಕ್ಕಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಿಗೆ ಸಂಪನ್ಮೂಲ ಒದಗಿಸುವ ಹಲವು ಪ್ರಸ್ತಾವಗಳನ್ನು ಕೂಡ ವರದಿಯು ಸರ್ಕಾರಗಳ ಮುಂದಿಟ್ಟಿದೆ. 


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries