ನವದೆಹಲಿ: ಗಗನಕ್ಕೇರಿದ್ದ ಅಡುಗೆ ತೈಲದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದ್ದು, ಕೇಂದ್ರ ಸರ್ಕಾರ ಕಚ್ಚಾ ತಾಳೆ ಎಣ್ಣೆ ಆಮದು ಸುಂಕ ಕಡಿತಗೊಳಿಸಿದೆ.
ದೇಶಿ ಗ್ರಾಹಕರಿಗೆ ಮತ್ತು ಸಂಸ್ಕರಣಾಗಾರರಿಗೆ ನೆರವಾಗುವ ಉದ್ದೇಶದೊಂದಿಗೆ ಕಚ್ಚಾ ತಾಳೆ ಎಣ್ಣೆಯ ಆಮದು ಸುಂಕವನ್ನು ಶೇ 7.5ರಿಂದ ಶೇ 5ಕ್ಕೆ ಇಳಿಕೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ತಾಳೆ ಎಣ್ಣೆ ಆಮದಿನ ಮೇಲೆ ವಿಧಿಸಲಾಗುತ್ತಿರುವ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ತೆರಿಗೆಯಲ್ಲಿ (ಎಐಡಿಸಿ) ಕಡಿತ ಮಾಡಲಾಗಿದ್ದು, ಇದರಿಂದ ಕಚ್ಚಾ ತಾಳೆ ಎಣ್ಣೆ ಮತ್ತು ಸಂಸ್ಕರಿತ ತಾಳೆ ಎಣ್ಣೆ ನಡುವಣ ತೆರಿಗೆ ಅಂತರ ಹೆಚ್ಚಾಗಲಿದೆ. ದೇಶದ ಸಂಸ್ಕರಣಾಗಾರರಿಗೆ ಕಡಿಮೆ ಬೆಲೆಗೆ ಕಚ್ಚಾ ತಾಳೆ ಎಣ್ಣೆ ಆಮದು ಮಾಡಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರದಿಂದಲೇ ದರ ಜಾರಿ
ಸುಂಕ ಕಡಿತ ನಿರ್ಧಾರವು ಭಾನುವಾರದಿಂದಲೇ ಜಾರಿಗೆ ಬಂದಿದೆ. ಎಐಡಿಸಿ ಕಡಿತದ ಬಳಿಕ ಕಚ್ಚಾ ತಾಳೆ ಎಣ್ಣೆ ಮತ್ತು ಸಂಸ್ಕರಿತ ತಾಳೆ ಎಣ್ಣೆ ಆಮದು ಸುಂಕದ ನಡುವಣ ಅಂತರ ಶೇ 8.25 ತಲುಪಿದೆ. ಇದರಿಂದ ಸಂಸ್ಕರಣಾಗಾರರಿಗೆ ಪ್ರಯೋಜನವಾಗಲಿದೆ. ಈ ಅಂತರವನ್ನು ಶೇ 11ರ ವರೆಗೆ ಹೆಚ್ಚಿಸಬೇಕಿದೆ ಎಂದು ‘ಸಾಲ್ವೆಂಟ್ ಎಕ್ಸ್ಟ್ರಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಸ್ಇಎ)’ದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ವಿ. ಮೆಹ್ತಾ ಹೇಳಿದ್ದಾರೆ.
ಭಾರತವು ತನ್ನ ಖಾದ್ಯ ತೈಲದ ಮೂರನೇ ಎರಡರಷ್ಟು ಹೆಚ್ಚು ಆಮದು ಮಾಡಿಕೊಳ್ಳುತ್ತಿದೆ ಮತ್ತು ಕಳೆದ ಕೆಲವು ತಿಂಗಳುಗಳಿಂದ ಸ್ಥಳೀಯ ತೈಲ ಬೆಲೆಗಳಲ್ಲಿ ಏರಿಕೆ ನಿಯಂತ್ರಿಸಲು ಸರ್ಕಾರ ಹೆಣಗಾಡುತ್ತಿದೆ. ದೇಶವು ಮುಖ್ಯವಾಗಿ ಉನ್ನತ ಉತ್ಪಾದಕರಾದ ಇಂಡೋನೇಷ್ಯಾ ಮತ್ತು ಮಲೇಷ್ಯಾದಿಂದ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದ್ದು, ಸೋಯಾ ಮತ್ತು ಸೂರ್ಯಕಾಂತಿಗಳಂತಹ ಇತರ ತೈಲಗಳು ಅರ್ಜೆಂಟೀನಾ, ಬ್ರೆಜಿಲ್, ಉಕ್ರೇನ್ ಮತ್ತು ರಷ್ಯಾದಿಂದ ಬರುತ್ತಿವೆ.

