ನವದೆಹಲಿ: ದೇಶದ ಗಡಿ ಭಾಗದಲ್ಲಿರುವ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡುವ ಮೂಲಕ, ಕಡಿಮೆ ಸಂಖ್ಯೆಯಲ್ಲಿರುವ ಅಲ್ಲಿನ ಜನರಿಗೆ 'ಚೈತನ್ಯ' ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ನಾಗರಿಕರಿಗೆ ಸಲಹೆ ನೀಡಿದ್ದಾರೆ.
'ಗ್ರಾಮೀಣಾಭಿವೃದ್ಧಿಯ ಮೇಲೆ ಬಜೆಟ್ನ ಪ್ರಭಾವ' ವಿಷಯದ ಕುರಿತ ವೆಬಿನಾರ್ ಉದ್ದೇಶಿಸಿ ಬುಧವಾರ ಮಾತನಾಡಿದ ಅವರು, ಸಾರ್ವಜನಿಕರು, ಸಂಘ- ಸಂಸ್ಥೆಗಳ ಸಕ್ರಿಯ ಸದಸ್ಯರು ಗಡಿಯಲ್ಲಿನ ಕುಗ್ರಾಮಗಳತ್ತ ನಿಯಮಿತವಾಗಿ ತೆರಳಿ ತಾಲ್ಲೂಕು ಮಟ್ಟದ ಸ್ಪರ್ಧಾಕೂಟದಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ಅಲ್ಲಿನ ನಿವಾಸಿಗಳಲ್ಲಿ ಹುರುಪು ತುಂಬಬೇಕು ಎಂದು ಅವರು ಕಿವಿಮಾತು ಹೇಳಿದರು.
ಅಭಿವೃದ್ಧಿ ಯೋಜನೆಗಳ ಪ್ರಯೋಜನ ಎಲ್ಲರಿಗೂ ತಲುಪುವಂತಾಗಬೇಕು. ದೇಶದ ಯಾವೊಬ್ಬ ಪ್ರಜೆಯೂ ಈ ಯೋಜನೆಗಳಿಂದ ವಂಚಿತವಾಗಲು ಬಿಡದಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಮೂಲ ಸೌಲಭ್ಯಗಳು ದೊರೆಯುವಂತಾಗಬೇಕು ಎಂದೇ ಬಜೆಟ್ ಮೂಲಕ ಸ್ಪಷ್ಟ ಮಾರ್ಗಸೂಚಿಯನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.
'ಗಡಿ ಗ್ರಾಮಗಳತ್ತ ಪ್ರವಾಸಕ್ಕೆ ತೆರಳಿ, ಒಂದೆರಡು ದಿನ ಕಳೆದು ಅಲ್ಲಿನ ಜನಜೀವನ ಅಧ್ಯಯನ ಮಾಡಬಹುದು. ಇಂಥ ಬೆಳವಣಿಗೆಯು ಆ ಪ್ರದೇಶಗಳ ಜನರಲ್ಲಿ ಚೈತನ್ಯವನ್ನು ನೀಡಬಲ್ಲದು ಎಂದು ಮೋದಿ ಅಭಿಪ್ರಾಯಪಟ್ಟರು.
ಈಶಾನ್ಯ ರಾಜ್ಯಗಳ ಅಭಿವೃದ್ಧಿಗಾಗಿ ರೂಪಿಸಲಾದ (ಪಿಎಂಡಿಐವಿಐಎನ್ಇ) ಯೋಜನೆಯಿಂದ ಮೂಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅಲ್ಲದೆ, ಪ್ರಧಾನಮಂತ್ರಿ ಆವಾಸ್ ಯೋಜನೆ, ಜಲಜೀವನ್ ಮಿಷನ್ ಹಾಗೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕಾಗಿ ಸಂಘಟಿತ ಯತ್ನ ನಡೆಸಿದಲ್ಲಿ ಈಶಾನ್ಯ ರಾಜ್ಯಗಳ ಸಂಪರ್ಕ ಸುಲಭವಾಗಲಿದೆ ಎಂದು ಅವರು ತಿಳಿಸಿದರು.
ಜಲ ಜೀವನ್ ಮಿಷನ್ ಅಡಿ ದೇಶದ ನಾಲ್ಕು ಕೋಟಿ ಗ್ರಾಮೀಣ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಒದಗಿಸಲು ಬಜೆಟ್ನಲ್ಲಿ ಘೋಷಿಸಲಾಗಿದೆ. 2024ರೊಳಗೆ ದೇಶದ ಪ್ರತಿ ಮನೆಗೂ ಶುದ್ಧ ನೀರು ದೊರೆಯುವಂತಾಗಲು ಅಧಿಕಾರಿಗಳು ಶ್ರಮಿಸಬೇಕು ಎಂದ ಅವರು, 80 ಲಕ್ಷ ಮನೆಗಳ ನಿರ್ಮಾಣಕ್ಕೆ ₹ 48,000 ಕೋಟಿ ಮೀಸಲಿರಿಸಲಾಗಿದೆ ಎಂದು ಅವರು ವಿವರಿಸಿದರು.
ಮಹಿಳಾ ಶಕ್ತಿಯು ಗ್ರಾಮೀಣ ಪ್ರದೇಶದ ಆರ್ಥಿಕತೆಯ ಭದ್ರಬುನಾದಿಯಾಗಿದೆ. ಸ್ವ-ಸಹಾಯ ಸಂಘಗಳ ಮೂಲಕ ಮಹಿಳೆಯರು ಗ್ರಾಮೀಣ ಆರ್ಥಿಕತೆಯನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕೇಂದ್ರದ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೆಖಾವತ್, ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ ಸಿಂಗ್ ವೆಬಿನಾರ್ನಲ್ಲಿ ಭಾಗವಹಿಸಿದ್ದರು.