ಭೋಪಾಲ: ಭೋಪಾಲ್ನ ಆಜಾದ್ ನಗರದ ಮದ್ಯದಂಗಡಿಯೊಂದಕ್ಕೆ ನುಗ್ಗಿ, ಬಾಟಲಿಗಳತ್ತ ಕಲ್ಲೆಸೆದಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ, ರಾಜ್ಯದಲ್ಲಿ ಸಂಪೂರ್ಣ ಪಾನ ನಿಷೇಧವಾಗಬೇಕು ಎಂದು ಭಾನುವಾರ ಆಗ್ರಹಿಸಿದ್ದಾರೆ.
ಮದ್ಯದಂಗಡಿಗೆ ಕಲ್ಲೆಸೆದ ವಿಡಿಯೊವನ್ನು ಉಮಾ ಭಾರತಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೊ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಒಂದು ವಾರದೊಳಗೆ ಅಂಗಡಿ ಮುಚ್ಚಬೇಕು ಎಂದು ಅವರು ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.
ಮಧ್ಯಪ್ರದೇಶದ ಬಿಜೆಪಿ ಸರ್ಕಾರವು ಇತ್ತೀಚೆಗೆ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತಂದಿದ್ದು, 'ಹೋಮ್ ಬಾರ್'ಗಳನ್ನು ಸ್ಥಾಪಿಸಲು ಅನುಮತಿ ನೀಡಿದೆ. ಮದ್ಯದ ಚಿಲ್ಲರೆ ಮಾರಾಟದ ಬೆಲೆಯನ್ನು ಶೇಕಡಾ 20 ರಷ್ಟು ಕಡಿತಗೊಳಿಸಿದೆ. ಆದರೆ, ರಾಜ್ಯದಲ್ಲಿ 'ಮದ್ಯ ವಿರೋಧಿ' ಅಭಿಯಾನ ನಡೆಸುವುದಾಗಿ ಉಮಾ ಭಾರತಿ ಈ ಹಿಂದೆ ಘೋಷಿಸಿದ್ದರು.
ಪಾನ ನಿಷೇಧದ ಅಭಿಯಾನ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಅಲ್ಲ ಎಂದು ಉಮಾ ಭಾರತಿ ಅವರು ಸ್ಪಷ್ಟಪಡಿಸಿದ್ದಾರೆ.