ಲಖನೌ: ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಮತ್ತು ಅಲ್ಲಿನ ಗಡಿ ಭದ್ರತಾ ಪಡೆಯ ಜನಾಂಗೀಯ ನಿಂದನೆ ಆರೋಪಗಳ ನಡುವೆ ಪ್ರಧಾನಿ ನರೇಂದ್ರ ಮೋದಿ, ಯುದ್ಧ ಪೀಡಿತ ಉಕ್ರೇನ್ನಿಂದ ಭಾರತೀಯರನ್ನು ಸ್ಥಳಾಂತರಿಸಲು ಕೈಗೊಂಡಿರುವ ಕಾರ್ಯಾಚರಣೆಯು ವಿಶ್ವಮಟ್ಟದಲ್ಲಿ ಭಾರತದ ಶಕ್ತಿ ಹೆಚ್ಚಾಗಿರುವುದರ ಸೂಚಕವಾಗಿದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಸೋನೆಭದ್ರದಲ್ಲಿ ಸಾರ್ವಜನಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತರುವ ಯಾವುದೇ ಅವಕಾಶವನ್ನು ನಮ್ಮ ಸರ್ಕಾರ ಕೈಚೆಲ್ಲುವುದಿಲ್ಲ ಎಂದು ಹೇಳಿದರು.
'ಯುದ್ಧ ಪೀಡಿತ ಉಕ್ರೇನ್ನಿಂದ ಭಾರತೀಯರ ಸ್ಥಳಾಂತರ ಪ್ರಕ್ರಿಯೆಯು ವಿಶ್ವ ಮಟ್ಟದಲ್ಲಿ ಭಾರತದ ಶಕ್ತಿ ಹೆಚ್ಚಿರುವುದರ ಸೂಚಕವಾಗಿದೆ'ಎಂದ ಅವರು, ಅಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತರಲು ಸಂಪುಟದ ನಾಲ್ವರು ಸಹೋದ್ಯೋಗಿಗಳನ್ನು ಕಳುಹಿಸಿರುವುದಾಗಿ ಹೇಳಿದರು.
ಉಕ್ರೇನ್ನಿಂದ ಭಾರತೀಯರ ಸ್ಥಳಾಂತರ ಕಾರ್ಯಾಚರಣೆಯನ್ನು ಸಮಗ್ರವಾಗಿ ಕೈಗೊಂಡಿಲ್ಲ ಎಂಬ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿ ವಿಪಕ್ಷಗಳ ನಾಯಕರ ಟೀಕೆ ಬೆನ್ನಲ್ಲೇ ಮೋದಿ ಅವರು ಈ ಹೇಳಿಕೆ ನೀಡಿದ್ದಾರೆ.
ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಉತ್ತರ ಪ್ರದೇಶವು ಅಭಿವೃದ್ಧಿ ಕಂಡಿದೆ ಎಂದ ಮೋದಿ, ವಂಶಪಾರಂಪರ್ಯವಾಗಿ ಅಧಿಕಾರ ಹಿಡಿಯುವವರಿಗೆ ಯಾವುದೇ ಅವಕಾಶ ಕೊಡಬೇಡಿ. ಈ ಹಿಂದೆ ಅವರು ಅಧಿಕಾರದಲ್ಲಿದ್ದಾಗ ನಿಮಗಾಗಿ ಏನನ್ನೂ ಮಾಡಿಲ್ಲ ಎಂದು ಅಖಿಲೇಶ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.