ನವದೆಹಲಿ: ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ನಿಯೋಗ ಮಟ್ಟದ ಮಾತುಕತೆಗಾಗಿ ಶುಕ್ರವಾರ ರಾಷ್ಟ್ರ ರಾಜಧಾನಿಯ ಹೈದರಾಬಾದ್ ಹೌಸ್ ನಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿಯಾದರು.
ಇದಕ್ಕೂ ಮುನ್ನ ಸೌತ್ ಬ್ಲಾಕ್ ನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಚೀನಾ ವಿದೇಶಾಂಗ ಸಚಿವರು ಭೇಟಿಯಾಗಿ ಮಾತುಕತೆ ನಡೆಸಿದರು.
ಜೂನ್ 2020 ರಲ್ಲಿ ನಡೆದಿದ್ದ ಗಲ್ವಾನ್ ಘರ್ಷಣೆ ನಂತರ ಚೀನಾ ವಿದೇಶಾಂಗ ಸಚಿವರ ಮೊದಲ ಭೇಟಿ ಇದಾಗಿದೆ. ಉಭಯ ರಾಷ್ಟ್ರಗಳ ನಡುವಿನ ಸಂವಾದವನ್ನು ಪುನರ್ ಆರಂಭಿಸುವುದು ಮತ್ತು ವರ್ಷದ ಕೊನೆಯಲ್ಲಿ ಬೀಜಿಂಗ್ ನಲ್ಲಿ ನಡೆಯಲಿರುವ ಬ್ರಿಕ್ಸ್ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವುದು ವಾಂಗ್ ಯೀ ಅವರ ಭೇಟಿಯ ಮುಖ್ಯ ಉದ್ದೇಶವಾಗಿದೆ.
ಭಾರತ ಭೇಟಿಗೂ ಮುನ್ನ ಇಸ್ಲಾಮಬಾದ್ ನಲ್ಲಿ ನಡೆದ ಇಸ್ಲಾಮಿಕ್ ಸಹಕಾರ (ಒಐಸಿ) ಸಭೆಯಲ್ಲಿ ಪಾಲ್ಗೊಂಡಿದ್ದ ಚೀನಾ ವಿದೇಶಾಂಗ ಸಚಿವ ವಾಂಗ್ ಯೀ, ಕಾಶ್ಮೀರದ ಬಗ್ಗೆ ನಮ್ಮ ಇಸ್ಲಾಮಿಕ್ ಸ್ನೇಹಿತರ ಕರೆಗಳನ್ನು ನಾವು ಇಂದು ಮತ್ತೆ ಕೇಳಿದ್ದೇವೆ. ಚೀನಾ ಅದೇ ಭರವಸೆಯನ್ನು ಇಟ್ಟುಕೊಂಡಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದರು.