ನವದೆಹಲಿ: ರಷ್ಯಾ-ಉಕ್ರೇನ್ ಸಂಘರ್ಷ ಮುಂದುವರೆದಿರುವಂತೆಯೇ ಈ ಸಂಬಂಧ ಶಾಂತಿಮಾತುಕತೆಗೆ ಪ್ರಧಾನಿ ಮೋದಿ ಕ್ವಾಡ್ ಸಭೆಯಲ್ಲಿ ಆಗ್ರಹಿಸಿದ್ದಾರೆ.
ಕ್ವಾಡ್ ನಾಯಕರ ವರ್ಚುವಲ್ ಸಭೆಯಲ್ಲಿ ಉಕ್ರೇನ್ ಬಿಕ್ಕಟ್ಟನ್ನು ಎದುರಿಸುವಲ್ಲಿ ಸಂವಾದ ಮತ್ತು ರಾಜತಾಂತ್ರಿಕತೆಯ ಹಾದಿಗೆ ಮರಳುವ ಅಗತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಒತ್ತಿ ಹೇಳಿದರು. ಈ ಸಭೆಯಲ್ಲಿ ಭಾರತದ ಪ್ರಧಾನಿ ಮೋದಿ ಅವರಲ್ಲದೇ.. ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಸಭೆಯಲ್ಲಿ ಭಾಗವಹಿಸಿದ್ದರು.
"ಉಕ್ರೇನ್ನಲ್ಲಿನ ಬೆಳವಣಿಗೆಗಳು ಅದರ ಮಾನವೀಯ ಪರಿಣಾಮಗಳನ್ನು ಒಳಗೊಂಡಂತೆ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು. ಪ್ರಧಾನಿ ಮೋದಿ ಅವರು ಸಂವಾದ ಮತ್ತು ರಾಜತಾಂತ್ರಿಕತೆಯ ಹಾದಿಗೆ ಮರಳುವ ಅಗತ್ಯವನ್ನು ಈ ಸಂದರ್ಭದಲ್ಲಿ ಮೋದಿ ಒತ್ತಿ ಹೇಳಿದರು. ಅಲ್ಲದೆ ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಕಾನೂನು ಮತ್ತು ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ಮಹತ್ವವನ್ನು ಮೋದಿ ಅವರು ತಮ್ಮ ಹೇಳಿಕೆಯಲ್ಲಿ ಪುನರುಚ್ಚರಿಸಿದ್ದಾರೆ.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸುವ ತನ್ನ ಪ್ರಮುಖ ಉದ್ದೇಶದ ಮೇಲೆ ಕ್ವಾಡ್ ಗಮನಹರಿಸಬೇಕು. ಮಾನವೀಯ ಮತ್ತು ವಿಪತ್ತು ಪರಿಹಾರ, ಸಾಲ ಸುಸ್ಥಿರತೆ, ಪೂರೈಕೆ ಸರಪಳಿಗಳು, ಶುದ್ಧ ಇಂಧನ, ಸಂಪರ್ಕ ಮತ್ತು ಸಾಮರ್ಥ್ಯ-ವರ್ಧನೆಯಂತಹ ಕ್ಷೇತ್ರಗಳಲ್ಲಿ ಕ್ವಾಡ್ನೊಳಗೆ ಕಾಂಕ್ರೀಟ್ ಮತ್ತು ಪ್ರಾಯೋಗಿಕ ರೂಪಗಳ ಸಹಕಾರಕ್ಕಾಗಿ ಮೋದಿ ಕರೆ ನೀಡಿದರು.
ರಷ್ಯಾವನ್ನು ದುರ್ಬಲಗೊಳಿಸಲು ಅಮೆರಿಕ ಹಲವು ನಿರ್ಬಂಧಗಳನ್ನು ವಿಧಿಸಿದೆ. ಜಪಾನ್ ಕೂಡ ಇದೇ ನೀತಿ ಮುಂದುವರಿಸಿದ್ದು, ಆಸ್ಟ್ರೇಲಿಯಾವೂ ಸಹ ರಷ್ಯಾದ ಕ್ರಮವನ್ನು ತೀವ್ರವಾಗಿ ಖಂಡಿಸಿದೆ. ಆದರೆ ಭಾರತ ರಷ್ಯಾದೊಂದಿಗೆ ಉತ್ತಮ ಸ್ನೇಹವನ್ನು ಹೊಂದಿದೆ. ಹಾಗೇಯೇ, ಇನ್ನೊಂದೆಡೆ ರಷ್ಯಾ ವಿರುದ್ಧ ಪ್ರಬಲವಾಗಿ ನಿಂತಿರುವ ಅಮೆರಿಕ ಜತೆಗೂ ಒಳ್ಳೆಯ ಬಾಂಧವ್ಯ ಹೊಂದಿದೆ. ಈ ಎಲ್ಲ ಕಾರಣಗಳಿಂದ ರಷ್ಯಾ-ಉಕ್ರೇನ್ ಯುದ್ಧದ ವಿಚಾರದಲ್ಲಿ ತುಂಬ ಜಾಣತನದಿಂದ ವರ್ತಿಸುತ್ತಿದೆ.
ಸದ್ಯ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದ ವಿಚಾರದಲ್ಲಿ ಭಾರತ ತಟಸ್ಥ ನೀತಿ ಅನುಸರಿಸಿದ್ದು, ರಷ್ಯಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ತೆಗೆದುಕೊಳ್ಳಲಾದ ನಿರ್ಣಯಕ್ಕೆ ಮತದಾನದಿಂದ ದೂರವೇ ಉಳಿದಿದೆ. ಅಂದರೆ ಪರವಾಗಿಯೂ ಮತ ಹಾಕಲಿಲ್ಲ. ವಿರುದ್ಧವಾಗಿಯೂ ಮತ ಹಾಕಲಿಲ್ಲ. ಆದರೆ ಕ್ವಾಡ್ನ ಉಳಿದ ಮೂರು ರಾಷ್ಟ್ರಗಳಾದ ಆಸ್ಟ್ರೇಲಿಯಾ, ಜಪಾನ್ ಮತ್ತು ಯುಎಸ್ಗಳು ಉಕ್ರೇನ್ಗೆ ಬೆಂಬಲ ವ್ಯಕ್ತಪಡಿಸಿವೆ.
ಈ ನಾಲ್ಕು ದೇಶಗಳ ನಾಯಕರು 2021ರ ಸೆಪ್ಟೆಂಬರ್ನಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ಕೊನೆಯ ಬಾರಿ ಸಭೆ ಸೇರಿದ್ದರು.




