ನವದೆಹಲಿ: ಭಾರತದ ಕ್ಷಿಪಣಿ ವ್ಯವಸ್ಥೆಯು ಅತ್ಯಂತ ಸುರಕ್ಷಿತ ಮತ್ತು ಭದ್ರತೆಯಿಂದ ಕೂಡಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ.
0
samarasasudhi
ಮಾರ್ಚ್ 15, 2022
ನವದೆಹಲಿ: ಭಾರತದ ಕ್ಷಿಪಣಿ ವ್ಯವಸ್ಥೆಯು ಅತ್ಯಂತ ಸುರಕ್ಷಿತ ಮತ್ತು ಭದ್ರತೆಯಿಂದ ಕೂಡಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ.
ಆಕಸ್ಮಿಕವಾಗಿ ಭಾರತದ ಕ್ಷಿಪಣಿಯೊಂದು ಪಾಕಿಸ್ತಾನದಲ್ಲಿ ಹೋಗಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಸಭೆಯಲ್ಲಿ ಮಂಗಳವಾರ ಮಾತನಾಡಿದ ರಾಜನಾಥ ಸಿಂಗ್, ರಾಷ್ಟ್ರದ ಭದ್ರತಾ ವ್ಯವಸ್ಥೆಯಲ್ಲಿ ಸುರಕ್ಷತೆಗೆ ಉನ್ನತ ಆದ್ಯತೆಯನ್ನು ನೀಡಲಾಗಿದೆ ಎಂದರು.
ಶಸ್ತ್ರಾಸ್ತ್ರಗಳ ವಿಚಾರದಲ್ಲಿ ಭಾರತವು ಭದ್ರತೆ ಮತ್ತು ಸುರಕ್ಷತೆಗೆ ಹೆಚ್ಚಿನ ನಿಗಾ ವಹಿಸುತ್ತದೆ. ಸಶಸ್ತ್ರ ಪಡೆಗಳು ಅತ್ಯುತ್ತಮ ತರಬೇತಿ ಹೊಂದಿದ್ದು, ಶಿಸ್ತಿನಿಂದ ಕೂಡಿವೆ. ಘಟನೆಗೆ ಸಂಬಂಧಿಸಿದ ತನಿಖೆಯ ಬಳಿಕ ಯಾವುದೇ ಲೋಪ ಕಂಡುಬಂದರೂ ಸರಿಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ರಾಜನಾಥ ಸಿಂಗ್ ಹೇಳಿದರು.
ಮಾರ್ಚ್ 9ರಂದು ಸಂಜೆ 6.43ಕ್ಕೆ (ಸ್ಥಳೀಯ ಕಾಲಮಾನ) ಭಾರತದ ಸೂರತ್ಗಡದಿಂದ ಹಾರಿದ 'ಸೂಪರ್ ಸಾನಿಕ್ ಫ್ಲೈಯಿಂಗ್ ಆಬ್ಜೆಕ್ಟ್' ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಿಯಾನ್ ಚುನ್ನು ನಗರದ ಸಮೀಪ ನೆಲಕ್ಕೆ ಅಪ್ಪಳಿಸಿತ್ತು. ದಿನನಿತ್ಯದ ನಿರ್ವಹಣೆಯ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದ ಆಕಸ್ಮಿಕವಾಗಿ ಕ್ಷಿಪಣಿ ಹಾರಿದೆ ಎಂದು ಭಾರತದ ರಕ್ಷಣಾ ಸಚಿವಾಲಯ ಶುಕ್ರವಾರ ಸ್ಪಷ್ಟನೆ ನೀಡಿತ್ತು.