ಮೊರೇನಾ : ಮಧ್ಯಪ್ರದೇಶದ ಮೊರೇನಾ ಜಿಲ್ಲೆಯ ದೊರೇರಾದಲ್ಲಿ 1972ರ ಎಪ್ರಿಲ್ 14ರಂದು 200 ಮಂದಿ ಕುಖ್ಯಾತ ದರೋಡೆಕೋರರು ಶರಣಾಗತರಾದ ಘಟನೆಗೆ ಇಂದು ಐವತ್ತು ವರ್ಷ ತುಂಬಿದೆ.
ಮೋಹರ್ ಸಿಂಗ್ ಮತ್ತು ಮಾಧೋ ಸಿಂಗ್ ನೇತೃತ್ವದಲ್ಲಿ 200 ಡಕಾಯಿತರು ಶರಣಾದದ್ದು ಭಾರತದ ಇತಿಹಾಸದಲ್ಲೇ ಅತಿದೊಡ್ಡ ಶರಣಾಗತಿ ಎನಿಸಿಕೊಂಡಿತ್ತು.
85 ಹತ್ಯೆ ಆರೋಪ ಎದುರಿಸುತ್ತಿದ್ದ ಈ ಇಬ್ಬರು ಇತರ 80 ಮಂದಿಯ ಜತೆ ಬಂದೂಕು ತ್ಯಜಿಸಿದರು. 1972ರಲ್ಲೇ ಮೋಹರ್ ಸಿಂಗ್ ಬಗ್ಗೆ ಸುಳಿವು ನೀಡಿದವರಿಗೆ ಮೂರು ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಅಂತೆಯೇ ಮಾಧೋ ಸಿಂಗ್ ತಲೆಗೆ ಒಂದು ಲಕ್ಷ ಬಹುಮಾನ ಘೋಷಿಸಲಾಗಿತ್ತು. ಮಾಧೋ ಸಿಂಗ್ ತಮ್ಮ 12 ಸಹಚರರ ಜತೆ ಬಂದೂಕು ತ್ಯಜಿಸಿದರು. ಇತರ 10 ಡಕಾಯಿತರ ಗ್ಯಾಂಗ್ ಕೂಡಾ ಶರಣಾಗಿತ್ತು. ಮಹಾತ್ಮಗಾಂಧಿ, ವಿನೋಭಾ ಭಾವೆ ಮತ್ತು ಜಯಪ್ರಕಾಶ್ ನಾರಾಯಣ್ ಅವರ ಪರ ಘೋಷಣೆಗಳನ್ನು ಕೂಗಿ ಇವರು ಶರಣಾಗತರಾಗಿದ್ದರು.
ಐವತ್ತು ವರ್ಷ ಬಳಿಕ ಅಂದರೆ ಏಪ್ರಿಲ್ 14ರಂದು ಹಲವು ಮಂದಿ ನಾಗರಿಕ ಹೋರಾಟಗಾರರು ಹಾಗೂ ಕೆಲ ಮಾಜಿ ಡಕಾಯಿತರು ಧೊರೇರಾಗೆ ತೆರಳಿ ಈ ಭಾಗದಲ್ಲಿ ಶಾಂತಿ ಮರುಕಳಿಸಲು ಕಾರಾಣವಾದ ಐದು ದಶಕದ ಹಿಂದಿನ ಈ ಘಟನೆಯ ಸ್ಮರಣಾರ್ಥ ಕಾರ್ಯಕ್ರಮ ನಡೆಸಲಿದ್ದಾರೆ.
ಅಂತಿಮವಾಗಿ 1972ರಲ್ಲಿ ಈ ಶರಣಾಗತಿ ನಡೆದಿದ್ದರೂ, ಇದಕ್ಕೆ ಮಾತುಕತೆ ಹಲವು ವರ್ಷಗಳಿಂದಲೇ ನಡೆಯುತ್ತಿತ್ತು ಎಂದು ಚಂಬಲ್ನ ಕರಾಳ ದಿನಗಳನ್ನು ಅಧ್ಯಯನ ಮಾಡಿರುವವರು ಹೇಳುತ್ತಾರೆ.
ವಿನೋಭಾ ಬಾವೆ 1960ರಲ್ಲಿ ಮೊದಲ ಬಾರಿಗೆ ಇಂಥ ಪ್ರಯತ್ನ ಮಾಡಿದ್ದರು. ಡಕಾಯಿತ ಮಾನ್ ಸಿಂಗ್ ಪುತ್ರ ತಹಸೀಲ್ದಾರ್ ಸಿಂಗ್ ಅವರ ಶರಣಾಗತಿಗೆ ಮನವಿ ಮಾಡಿಕೊಂಡಿದ್ದರು. ನೈನಿ ಜೈಲಿನಲ್ಲಿದ್ದ ತಹಸೀಲ್ದಾರ್, ಭಾವೆಯವರಿಗೆ ಪತ್ರ ಬರೆದು ಕಾಯಂ ಪರಿಹಾರ ಕೋರಿದ್ದ. ಚಂಬಲ್ ನದಿ ಕಣಿವೆಯಲ್ಲಿ 1960ರ ಮೇ ತಿಂಗಳಲ್ಲಿ ಭಾವೆ ಮಾಡಿದ ಭಾಷಣದಲ್ಲಿ "ದೆಹಲಿಯಲ್ಲಿ ಕುಳಿತ ಭ್ರಷ್ಟರಿಗಿಂತ ಡಕಾಯಿತರು ಮೇಲು" ಎಂದು ಪ್ರತಿಪಾದಿಸಿದ್ದರು ಎಂದು ಗ್ವಾಲಿಯರ್ ಐಟಿಎಂನ ಪತ್ರಿಕೋದ್ಯಮ ವಿಭಾಗದ ಪ್ರೊ. ಜಯಂತ್ ಸಿಂಗ್ ಹೇಳುತ್ತಾರೆ.
1950ರ ದಶಕದಿಂದ 1970ರ ದಶಕದ ಮಧ್ಯದವರೆಗೆ ಮಧ್ಯಪ್ರದೇಶದ ಆರು, ರಾಜಸ್ತಾನದ ನಾಲ್ಕು, ಉತ್ತರ ಪ್ರದೇಶದ ಆರು ಜಿಲ್ಲೆಗಳಲ್ಲಿ 700ಕ್ಕೂ ಹೆಚ್ಚು ಡಕಾಯಿತರ ಗ್ಯಾಂಗ್ಗಳು ಕಾರ್ಯನಿರ್ವಹಿಸುತ್ತಿದ್ದವು ಎಂದು ಅವರು ವಿವರಿಸುತ್ತಾರೆ.