ಮಂಜೇಶ್ವರ: ಅಂಬೇಡ್ಕರ್ ಗ್ರಾಮಾಭಿವೃದ್ಧಿ ಯೋಜನೆಯಡಿ ಮಂಜೇಶ್ವರ ಕ್ಷೇತ್ರದ ಎರಡು ಎಸ್ ಸಿ ಕಾಲೋನಿಗಳ ಮೂಲಸೌಕರ್ಯ ಅಭಿವೃದ್ಧಿಗೆ 2 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಶಾಸಕ ಎ.ಕೆ.ಎಂ.ಅಶ್ರಫ್ ಹೇಳಿರುವರು.
ಮಂಗಲ್ಪಾಡಿ ಪಂಚಾಯಿತಿಯ ಪುಳಿಕುತ್ತಿ ಮತ್ತು ಪುತ್ತಿಗೆ ಪಂಚಾಯಿತಿಯ ಬಾತೂರಿನ ಎಸ್ಸಿ ಕಾಲೋನಿಗಳಿಗೆ ತಲಾ 1 ಕೋಟಿ ರೂ. ಮಂಜೂರು ಮಾಡಲಾಗಿದೆ.
ಯೋಜನೆಯ ಭಾಗವಾಗಿ ಕಾಲೋನಿಯಲ್ಲಿ ರಸ್ತೆ, ಪಾದಚಾರಿ ಮಾರ್ಗ, ಚರಂಡಿ, ಕುಡಿಯುವ ನೀರು ಮತ್ತು ನೀರಾವರಿ ಸೌಲಭ್ಯ, ಮನೆಗಳ ನವೀಕರಣ, ಅಂತರ್ಜಾಲ ಸಂಪರ್ಕ, ಸಾರ್ವಜನಿಕ ಸ್ಥಳಗಳಿಗೆ ಮತ್ತು ಕಾಲೋನಿಯ ಮನೆಗಳಿಗೆ ವಿದ್ಯುದ್ದೀಕರಣ, ಸೋಲಾರ್ ಬೀದಿ ದೀಪಗಳ ಅಳವಡಿಕೆ, ಮಹಿಳೆಯರಿಗೆ ಸ್ವಉದ್ಯೋಗ ಯೋಜನೆಗಳು, ಇತರೆ ಲೋಕೋಪಯೋಗಿ ಸೌಲಭ್ಯಗಳ ನಿರ್ಮಾಣ, ಸಾರ್ವಜನಿಕ ಆಸ್ತಿ ನಿರ್ವಹಣೆ ಮತ್ತು ಸುಧಾರಣೆ ಕೈಗೊಳ್ಳಲು ವಿನಿಯೋಗಿಸಲಾಗುತ್ತದೆ. ಆಯಾ ಕಾಲೋನಿಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಕಾಲೊನಿ ನಿವಾಸಿಗಳ ಸೂಚನೆಯಂತೆ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳನ್ನು ಒಳಗೊಂಡಂತೆ ಅಂದಾಜು ಪಟ್ಟಿ ತಯಾರಿಸಲಾಗುವುದು.
ಏಪ್ರಿಲ್ 11 ರಂದು ಬೆಳಗ್ಗೆ 10 ಗಂಟೆಗೆ ಬಾತೂರಿನಲ್ಲಿ ಹಾಗೂ ಮಧ್ಯಾಹ್ನ 1 ಗಂಟೆಗೆ ಪುಳಿಕುತ್ತಿಯಲ್ಲಿ ಸಭೆ ಕರೆಯಲಾಗುವುದು ಎಂದು ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ.


