ನವದೆಹಲಿ: ಅಗ್ನಿವೀರ್ ಎಂಬ ಹೆಸರಿನಲ್ಲಿ ಟೂರ್ ಆಫ್ ಡ್ಯೂಟಿ ಪ್ರಸ್ತಾವನೆಯಡಿ 3 ವರ್ಷಗಳ ಅವಧಿಗೆ ಯುವಕರನ್ನು ನೇಮಕ ಮಾಡಿಕೊಳ್ಳುವುದರಿಂದ ಸೇನೆಗೆ ಒಳಿತಾಗುವುದಿಲ್ಲ ಎಂದು ಸೇವೆಯಲ್ಲಿರುವ ಸೇನಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಈ ಯೋಜನೆಯಿಂದ ಪಿಂಚಣಿ ಹಣವನ್ನು ಉಳಿತಾಯ ಮಾಡಬಹುದು ಎಂದು ಹೇಳಲಾಗುತ್ತಿದೆಯಾದರೂ ಈ ಪ್ರಸ್ತಾವನೆಯಿಂದಾಗಿ ಸೇನೆಯ ನೈತಿಕತೆ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಲಿದೆ ಎಂಬುದು ಸೇವೆಯಲ್ಲಿರುವ ಅಧಿಕಾರಿಗಳು ವಿರೋಧಿಸಲು ಇರುವ ಕಾರಣವಾಗಿದೆ.
ಓರ್ವ ಯೋಧ ಯುದ್ಧದಲ್ಲಿ ಪಾಲ್ಗೊಳ್ಳುವ ಹಂತಕ್ಕೆ ತಯಾರಾಗಬೇಕಾದರೆ ವರ್ಷಗಳು ಬೇಕಾಗುತ್ತವೆ. ಆದರೆ ಟೂರ್ ಫಾರ್ ಡ್ಯೂಟಿಯಡಿ ಬರುವ ಯುವಕರು ಪಳಗುವುದಿಲ್ಲ. ಅಥವಾ ಅರ್ಧ ತಿಳಿದುಕೊಳ್ಳುತ್ತಾರೆ ಎನ್ನುತ್ತಾರೆ ಓರ್ವ ಮೇಜರ್ ಜನರಲ್ .
ಒಂದು ವೇಳೆ, ಭಯೋತ್ಪಾದನೆ ನಿಗ್ರಹ ಹಾಗೂ ಉಗ್ರವಿರೋಧಿ ಕಾರ್ಯಾಚರಣೆಯಂತಹ ಅಥವಾ ದುರ್ಗಮ ಪ್ರದೇಶವಾಗಿರುವ ಸಿಯಾಚಿನ್, ಲಡಾಖ್ ಗಳಲ್ಲಿ ಹೆಚ್ಚು ಒತ್ತಡದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಬೇಕಾದರೆ ಈ ಯುವಕರಿಗೆ ಮೂರುವರ್ಷಗಳಿಗೂ ಮೀರಿ ಇದ್ದರೆ ಕಷ್ಟವಾಗಬಹುದು ಎಂದು.
ಈ ರೀತಿಯ ಪ್ರಸ್ತಾವನೆಗಳು ನಿರೀಕ್ಷಿತ ಫಲಗಳನ್ನು ನೀಡುವುದಿಲ್ಲ ಎಂಬುದಕ್ಕೆ ಚೀನಾದಲ್ಲಿ ಸೈನ್ಯಕ್ಕೆ ಕಡ್ಡಾಯಗೊಳಿಸಲಾದ ಯುವಕರು ಗಲ್ವಾನ್ ನಲ್ಲಿ ಪಿಎಲ್ಎಯ ಪರವಾಗಿ ಹೋರಾಡಿದ ರೀತಿ ಹಾಗೂ ಉಕ್ರೇನ್ ನಲ್ಲಿ ಈಗ ನಡೆಯುತ್ತಿರುವುದು ಅತ್ಯಂತ ಉತ್ತಮ ಉದಾಹರಣೆಯಾಗಬಹುದು. ಓರ್ವ ಯೋಧ ಪರಿಪೂರ್ಣವಾಗಿ ತಯಾರಾಗಲು 5 ವರ್ಷಗಳು ಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
"ಸೇನೆಯ ಅಧಿಕಾರಿಗಳ ಶ್ರೇಣಿ, ಇತರ ಶ್ರೇಣಿಗಳಲ್ಲಿ ಪ್ರಾಯೋಗಿಕ ಆಧಾರದಲ್ಲಿ ಜಾರಿಗೊಳಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಯಶಸ್ವಿಯಾದಲ್ಲಿ ವಿಸ್ತರಿಸಲಾಗುವುದು" ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.