ಬಾರ್ಮರ್: ದೆಹಲಿಯಲ್ಲಿ ಮೊಹಮ್ಮದ್ ನಗರ ಎಂಬ ಹೆಸರನ್ನು ಮಾಧವನ್ ನಗರ ಎಂದು ಬದಲಾಯಿಸಿದ ಬೆನ್ನಲ್ಲೇ ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಬಲೋತ್ರಾ ಪ್ರದೇಶದ 'ಮಿಯಾನ್ ಕಾ ಬಡಾ' ರೈಲು ನಿಲ್ದಾಣದ ಹೆಸರನ್ನು ಅಧಿಕೃತವಾಗಿ 'ಮಹೇಶ್ ನಗರ ಹಾಲ್ಟ್' ಎಂದು ಬದಲಾಯಿಸಲಾಗಿದೆ.
ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಕೈಲಾಶ್ ಚೌಧರಿ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಹೆಸರು ಬದಲಾವಣೆ ಮಾಡಲಾಗಿದೆ. 2018ರಲ್ಲಿ ಗ್ರಾಮದ ಹೆಸರನ್ನು 'ಮಿಯಾನ್ ಕಾ ಬಡಾ'ನಿಂದ ಮಹೇಶ್ ನಗರ ಎಂದು ಬದಲಾಯಿಸಲಾಗಿತ್ತು. ಆದರೆ, ರೈಲ್ವೆ ನಿಲ್ದಾಣದ ಹೆಸರನ್ನು ಬದಲಾಯಿಸರಲಿಲ್ಲ. ಹಾಗಾಗಿ ಇದೀಗ ಮಹೇಶ್ ನಗರ ಹಾಲ್ಟ್ ಎಂದು ರೈಲ್ವೆ ನಿಲ್ದಾಣದ ಹೆಸರನ್ನು ಬದಲಾಯಿಸಲಾಗಿದೆ.
ಇದು ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿತ್ತು. ಅದು ಅಲ್ಲದೇ ಇದು ಸುದೀರ್ಘ ಪ್ರಕ್ರಿಯೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡೂ ತಮ್ಮ ಒಪ್ಪಿಗೆ ನೀಡಿದ ನಂತರ ರೈಲ್ವೆ ನಿಲ್ದಾಣದ ಹೆಸರನ್ನು ಬದಲಾಯಿಸಲಾಯಿತು ಎಂದು ಶೇಖಾವತ್ ಹೇಳಿದರು.