ತಿರುವನಂತಪುರ; ಕಾಂಗ್ರೆಸ್ನಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕು ಎಂದು ಮಾಜಿ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಒತ್ತಾಯಿಸಿದ್ದಾರೆ. ಪಕ್ಷದ ಸಂವಿಧಾನದಲ್ಲಿ ಪ್ರತಿ ಹಂತದಲ್ಲಿರುವ ಪದಾಧಿಕಾರಿಗಳ ಸಂಖ್ಯೆಯನ್ನು ನಿಗದಿಪಡಿಸಬೇಕು ಎಂದು ಆಗ್ರಹಿಸಿದರು. ಲೋಕಸಭೆ ಚುನಾವಣೆಗೂ ಮುನ್ನ ಪಕ್ಷ ಜಾರಿಗೆ ತರಬೇಕಾದ ವಿಷಯಗಳನ್ನು ಅವರು ವಿವರಿಸಿದರು.
ಡಿಸಿಸಿಗಳನ್ನು ಪುನರ್ ಸಂಘಟಿಸಿ ಎಐಸಿಸಿ ಸದಸ್ಯರ ಸಂಖ್ಯೆಯನ್ನು ಕಡಿತಗೊಳಿಸಬೇಕು. ಎಲ್ಲ ಹಂತಗಳಲ್ಲಿ ಬದಲಾವಣೆ ತಂದರೆ ಮಾತ್ರ ಕಾಂಗ್ರೆಸ್ ಬಲಗೊಳ್ಳಲು ಸಾಧ್ಯ. ಸಂಘಟನಾತ್ಮಕವಾಗಿ ಮತ್ತು ರಾಜಕೀಯವಾಗಿ ಬಲಗೊಳ್ಳಬೇಕಾದರೆ ಕಾಂಗ್ರೆಸ್ ನಿಲುವುಗಳನ್ನು ಬದಲಾಯಿಸಬೇಕು ಎಂದು ಚೆನ್ನಿತ್ತಲ ಹೇಳಿದರು. ರಾಜಸ್ಥಾನದ ಉದಯಪುರದಲ್ಲಿ ಮುಂದಿನ ವಾರ ನಡೆಯಲಿರುವ ಚಿಂತನ್ ಶಿಬಿರಕ್ಕೆ ಮುನ್ನ ಉಪ ಸಮಿತಿಯಲ್ಲಿ ಚೆನ್ನಿತ್ತಲ ಈ ಸಲಹೆಗಳನ್ನು ನೀಡಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಪಕ್ಷ ಮುನ್ನಡೆಯಬೇಕು ಎಂದು ಅವರು ಆಗ್ರಹಿಸಿದರು. ರಾಹುಲ್ ನೇತೃತ್ವದ ಭಾರತ ಪ್ರವಾಸ ಪಕ್ಷಕ್ಕೆ ಹೊಸ ಹುರುಪು ನೀಡಲಿದೆ. ಜಂಬೂ ಸಮಿತಿಗಳನ್ನು ತೊಡೆದುಹಾಕಬೇಕು ಮತ್ತು ಸಣ್ಣ ರಾಜ್ಯಗಳಲ್ಲಿ ಪಿಸಿಸಿ ಸದಸ್ಯರ ಸಂಖ್ಯೆಯನ್ನು 50 ಮತ್ತು ದೊಡ್ಡ ರಾಜ್ಯಗಳಲ್ಲಿ 100 ಕ್ಕೆ ನಿಗದಿಪಡಿಸಬೇಕು ಎಂದು ಅವರು ಹೇಳಿದರು. ಎಐಸಿಸಿ ಸದಸ್ಯರ ಸಂಖ್ಯೆಯನ್ನು 30ಕ್ಕೆ ಇಳಿಸಬೇಕು ಎಂದೂ ಚೆನ್ನಿತ್ತಲ ಒತ್ತಾಯಿಸಿರುವರು.