ನವದೆಹಲಿ: ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೊಟೀಸ್ ಜಾರಿಗೊಳಿಸಿದ್ದು, ಜನಗಣಮನದೊಂದಿಗೆ ವಂದೇ ಮಾತರಂ ಸಮಾನ ಸ್ಥಾನಮಾನ ಪಡೆಯುವುದಕ್ಕೆ ಸಾಧ್ಯವೇ? ಎಂದು ಪ್ರಶ್ನಿಸಿದೆ.
ಜನಗಣಮನದೊಂದಿಗೆ ವಂದೇ ಮಾತರಂ ಗೂ ಸಮಾನ ಸ್ಥಾನಮಾನ ನೀಡಬೇಕೆಂದು ಮನವಿ ಮಾಡಿ ಸಲ್ಲಿಸಿದ್ದ ಪಿಐಎಲ್ ಆಧಾರದಲ್ಲಿ ಕೇಂದ್ರಕ್ಕೆ ದೆಹಲಿ ಕ್ಹೈಕೋರ್ಟ್ ನೊಟೀಸ್ ಜಾರಿಗೊಳಿಸಿದೆ.
ನ್ಯಾ.ವಿಪಿನ್ ಸಂಘಿ, ಹಾಗೂ ನ್ಯಾ. ಸಚಿನ್ ದತ್ತ ಅವರಿದ್ದ ವಿಭಾಗೀಯ ಪೀಠ, ಗೃಹ ಸಚಿವಾಲಯ, ಶಿಕ್ಷಣ ಸಚಿವಾಲಯ, ಸಂಸ್ಕೃತಿ ಸಚಿವಾಲಯ, ಕಾನೂನು, ನ್ಯಾಯಾಂಗದ ಸಚಿವಾಲಯ ಮತ್ತಿತರರಿಗೆ ನೊಟೀಸ್ ಜಾರಿ ಮಾಡಿದ್ದು, ಅರ್ಜಿಯನ್ನು ಕೈಗೆತ್ತಿಕೊಳ್ಳುವುದಕ್ಕೂ ಮುನ್ನವೇ ಈ ವಿಷಯವನ್ನು ಮಾಧ್ಯಮಗಳೆದುರು ಕೊಂಡೊಯ್ದಿದ್ದಕ್ಕೆ ಅರ್ಜಿದಾರರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಕರಣದ ವಿಚಾರಣೆಯನ್ನು ಕೋರ್ಟ್ ನವೆಂಬರ್ 9 ಕ್ಕೆ ಮುಂದೂಡಿದೆ. ಎಲ್ಲಾ ಶಾಲೆಗಳು ಶೈಕ್ಷಣಿಕ ಸಂಸ್ಥೆಗಳಲ್ಲಿ ಜನಗಣಮನದೊಂದಿಗೆ ವಂದೇ ಮಾತರಂ ನ್ನೂ ಹಾಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕೆಂದೂ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.