ರೋಮ್: ಪೋಪ್ ಫ್ರಾನ್ಸಿಸ್ ಅವರು ರವಿವಾರ ಹೈದರಾಬಾದ್ನ ಆರ್ಚ್ ಬಿಷಪ್ ಆಂಥೋನಿ ಪೂಲಾ ಅವರನ್ನು ಭಾರತದ ಇಬ್ಬರು ಹೊಸ ಕಾರ್ಡಿನಲ್ (ಧರ್ಮ ಪ್ರಾಂತ್ಯಾಧ್ಯಕ್ಷ) ಗಳ ಪೈಕಿ ಒಬ್ಬರಾಗಿ ನೇಮಕ ಮಾಡಿದ್ದಾರೆ.
ಆಂಥೋನಿ ಪೂಲಾ ಈ ಹುದ್ದೆಗೇರಿದ ಭಾರತದ ಮೊಟ್ಟಮೊದಲ ದಲಿತ ಕ್ರಿಶ್ಚಿಯನ್ ಎನಿಸಿಕೊಂಡಿದ್ದು, ಮುಂದಿನ ಪೋಪ್ ಆಯ್ಕೆಗೆ ಮತದಾನ ಮಾಡುವ ಹಕ್ಕು ಪಡೆದಿದ್ದಾರೆ.
ಕಾರ್ಡಿನಲ್ ಆಗಿ ನೇಮಕಗೊಂಡಿರುವ ಮೊಟ್ಟಮೊದಲ ತೆಗುಲು ಮಾತನಾಡುವ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಕಾರ್ಡಿನಲ್ ಎನ್ನುವುದು ಪೋಪ್ ಬಳಿಕ ಎರಡನೇ ಅತ್ಯುನ್ನತ ಹುದ್ದೆಯಾಗಿದೆ.
ವಿಶ್ವದಲ್ಲೇ ಈ ಹುದ್ದೆಗೇರಿದ ಮೊದಲ ದಲಿತ ವ್ಯಕ್ತಿ ಎನಿಸಿಕೊಂಡಿದ್ದಾರೆ. "ಇದು ಕ್ರೈಸ್ತಧರ್ಮದ ಇತಿಹಾಸದಲ್ಲಿ ದಮನಕ್ಕೆ ಒಳಗಾದ ವರ್ಗಕ್ಕೆ ಸಿಕ್ಕಿದ ಗೌರವ" ಎಂದು ಹೈದರಾಬಾದ್ನ ವಿಕಾರ್ ಜನರಲ್ ಫಾದರ್ ಎಸ್ ಬೆರ್ನಾರ್ಡ್ ಬಣ್ಣಿಸಿದ್ದಾರೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ 1951ರ ನವೆಂಬರ್ 15ರಂದು ಹುಟ್ಟಿದ ಬಿಷಪ್ ಪೂಲಾ, ಕರ್ನೂಲಿನ ಮೈನರ್ ಸೆಮಿನರಿಯನ್ನು ಸೇರಿ ಬಳಿಕ ಬೆಂಗಳೂರಿನಲ್ಲಿರುವ ಸಂತ ಪೀಟರ್ ರವರ ಪಾಂಟಿಫೀಶಿಯಲ್ ಮೇಜರ್ ಸೆಮಿನರಿಯಲ್ಲಿ ಅಧ್ಯಯನ ಮಾಡಿದರು.
ಯೂಥ್ ಕಮಿಷನ್, ಎಪಿ ಸೋಶಿಯಲ್ ಸರ್ವೀಸ್ ಸೊಸೈಟಿ, ಎಸ್ಸಿ/ಬಿಸಿ ಅಯೋಗದ ಅಧ್ಯಕ್ಷರಾಗಿ ತೆಲುಗು ಕ್ಯಾಥೋಲಿಕ್ ಬಿಷಪ್ರ ಕಾನ್ಫರೆನ್ಸ್ ನ ಖಜಾಂಚಿಯಾಗಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಪೂಲಾ ಅವರು 1992ರ ಫೆಬ್ರುವರಿ 20ರಂದು ಅರ್ಚಕ ಪದವಿ ಪಡೆದರು. 2008ರ ಫೆಬ್ರುವರಿ 8ರಂದು ಕರ್ನೂಲ್ ಬಿಷಪ್ ಆಗಿ ನೇಮಕಗೊಂಡ ಅವರಿಗೆ 2008ರ ಏಪ್ರಿಲ್ 19ರಂದು ಬಿಷಪ್ ಪಟ್ಟಾಧಿಕಾರ ನೀಡಲಾಯಿತು.
2020ರ ನವೆಂಬರ್ 19ರಂದು ಹೈದರಾಬಾದ್ನ ಆರ್ಚ್ ಬಿಷಪ್ ಆಗಿ ನೇಮಕಗೊಂಡ ಇವರು ಇದೀಗ ಕಾರ್ಡಿನಲ್ ಪದವಿಗೇರಿದ್ದಾರೆ.