ವಯನಾಡ್: ವಯನಾಡ್ ಸಂಸದ ರಾಹುಲ್ ಗಾಂಧಿ ಅವರ ಕಚೇರಿ ಮೇಲೆ ದಾಳಿ ನಡೆಸಿದ ಪ್ರಕರಣದ ಆರೋಪಿಗಳನ್ನು ಘೋಷಣೆಗಳನ್ನು ಕೂಗಿ, ಕೆಂಬಣ್ಣದ ಬಟ್ಟೆ ಧರಿಸಿ ಸ್ವಾಗತಿಸಲಾಗಿದೆ. ಕಚೇರಿ ದಾಳಿ ಪ್ರಕರಣದಲ್ಲಿ ರಿಮಾಂಡ್ ಆಗಿದ್ದ 29 ಎಸ್ಎಫ್ಐ ಕಾರ್ಯಕರ್ತರಿಗೆ ಜಾಮೀನು ಮಂಜೂರಾಗಿದೆ. ಇದಾದ ಬಳಿಕ ಆರೋಪಿಗಳನ್ನು ಬರಮಾಡಿಕೊಳ್ಳಲು ಕಾರ್ಯಕರ್ತರು ಜೈಲಿನ ಹೊರಗೆ ಕಾದು ನಿಂತಿದ್ದರು. ಕಲ್ಪಟ್ಟಾ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿನ್ನೆ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.
ಜೈಲಿನಿಂದ ಹೊರಬಂದ ಆರೋಪಿಗಳಿಗೆ ಸಹೃದಯರು ಅದ್ಧೂರಿ ಸ್ವಾಗತ ಏರ್ಪಡಿಸಿದ್ದರು. ಎಸ್ಎಫ್ಐ-ಡಿವೈಎಫ್ಐ ಕಾರ್ಯಕರ್ತರು ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತಿಸಿದರು. ಕಚೇರಿ ದಾಳಿಗೆ ಸಂಬಂಧಿಸಿದಂತೆ ಆರೋಪಿಗಳು ಒಂದು ವಾರಕ್ಕೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದರು. ಜೂನ್ 26 ರಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ಜೋಯಲ್ ಜೋಸೆಫ್, ಕಾರ್ಯದರ್ಶಿ ಜಿಷ್ಣು ಶಾಜಿ ಮತ್ತು ಮೂವರು ಮಹಿಳಾ ಕಾರ್ಯಕರ್ತರು ಸೇರಿದಂತೆ 29 ಜನರನ್ನು ಬಂಧಿಸಲಾಗಿತ್ತು. ಅವರ ವಿರುದ್ಧ ಪೋಲೀಸರು ಜಾಮೀನು ರಹಿತ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿದ್ದರು.