ಕಾಸರಗೋಡು: ಜಿಲ್ಲೆಯಲ್ಲಿ ಮಳೆ ಪ್ರಮಾಣ ತಗ್ಗಿದ್ದು, ಹೊಳೆಗಳಲ್ಲಿ ನೀರಿನ ಮಟ್ಟ ಇಳಿಕೆಯಾಗತೊಡಗಿದೆ. ಕಳೆದ ಒಂದು ವಾರದ ರಜೆಯ ನಂತರ ಶಾಲೆಗಳು ಮಂಗಳವಾರ ಪುನರಾರಂಭಗೊಂಡಿತು.ಈ ಮಧ್ಯೆ ನಿರಂತರ 9 ದಿನಗಳಷ್ಟು ಕಾಲ ಸುರಿದ ಭೀತಿಯ ಮಳೆಯ ಕರಾಳತೆ ಇದೀಗ ಒಂದೊಂದೇ ಜಾಹೀರುಗೊಳ್ಳುತ್ತಿದೆ. ಹಲವೆಡೆ ಗ್ರಾಮೀಣ ಪ್ರದೇಶಗಳ ಕಾಲುಸಂಕಗಳು ಕೊಚ್ಚಿಹೋಗಿದ್ದು ದಡ ದಾಡುವುದು ಅಸಾಧ್ಯವಾಗಿದೆ. ಹಲವು ಮನೆಗಳು, ಕೃಷಿ ಭೂಮಿಗಳು ಜಲಾವೃತಗೊಂಡು ನಷ್ಟ ಸಂಭವಿಸಿದೆ. ಕುಂಬಳೆ-ಬದಿಯಡ್ಕ-ಮುಳ್ಳೇರಿಯ ರಸ್ತೆ ಕಾಮಗಾರಿ ಅಲ್ಲೋಲಕಲ್ಲೋಲಗೊಂಡು ಅಕ್ಷರಶಃ ಗದ್ದೆ ನಿರ್ಮಾಣವಾಗಿದೆ. ಮಳೆ ಕಡಿಮೆಯಾಗಿರುವುದರಿಂದ ಒಂದೆರಡು ದಿನಗಲಲ್ಲಿ ಬಿತ್ತನೆ ನಡೆಸಬಹುದಾಗಿದೆ.
ಚೆರ್ಕಳ ಸನಿಹ ಬೇವಿಂಜೆಯಲ್ಲಿ ಸುಬೈರ್ ಎಂಬವರ ಎರಡಂತಸ್ತಿನ ಮನೆ ಮೇಲೆ ಗುಡ್ಡ ಕುಸಿದು ಹಾನಿ ಸಂಭವಿಸಿದೆ. ಮನೆಯವರು ಪವಾಡಸದೃಶವಾಗಿ ಪಾರಾಗಿದ್ದಾರೆ. ಬಿರುಸಿನ ಮಳೆಗೆ ಮಂಜೇಶ್ವರ ವರ್ಕಾಡಿ ಸುಂಕದಕಟ್ಟೆಯ ವಾಣಿಜ್ಯ ಸಂಕೀರ್ಣ ಹೊಂದಿದ ಕಟ್ಟಡದ ಒಂದು ಪಾಶ್ರ್ವ ಕುಸಿದು ಹಾಣಿಗೀಡಾಗಿದೆ. ಕಟ್ಟಡದಲ್ಲಿದ್ದವರನ್ನು ತೆರವುಗೊಳಿಸಲಾಗಿದೆ. ಮುಳಿಯಾರು ಪಾತನಡ್ಕದ ಕುತ್ತಿಕ್ಕಾರುಮೂಲೆಯಲ್ಲಿ ಮೋಹನ ಎಂಬವರ ಹೆಂಚುಹಾಸಿನ ಮನೆ ಬಿರುಸಿನ ಮಳೆಗೆ ಧರಾಶಾಯಿಯಾಗಿದೆ.
ಚಿತ್ರ ಮಾಹಿತಿ: ಮುಳಿಯಾರು ಪಾತನಡ್ಕದ ಕುತ್ತಿಕ್ಕಾರುಮೂಲೆಯಲ್ಲಿ ಮೋಹನ ಎಂಬವರ ಮನೆ ಕುಸಿದು ಹಾನಿ ಸಂಭವಿಸಿದೆ.