ನವದೆಹಲಿ: ನ್ಯಾಯಾಂಗದ ಇತಿಹಾಸದಲ್ಲಿ ಅಪರೂಪದಲ್ಲಿ ಅಪರೂಪ ಎನ್ನುವ ಘಟನೆಯೊಂದು ಇದೀಗ ನಡೆದಿದೆ. ಸುಪ್ರೀಂಕೋರ್ಟ್ ವಿರುದ್ಧವೇ ನಿವೃತ್ತ ನ್ಯಾಯಮೂರ್ತಿಗಳು, ಸೇನಾ ಅಧಿಕಾರಿಗಳು ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ತಿರುಗಿಬಿದ್ದಿದ್ದಾರೆ.
ಹಿಂದೂ ದೇವತೆಗಳ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದ್ದನ್ನು ಕೇಳಿಸಿಕೊಳ್ಳಲಾಗದೇ ಅವರಿಗೆ ತಿರುಗೇಟು ನೀಡುವಾಗ ಪ್ರವಾದಿ ಮೊಹಮ್ಮದ್ ಕುರಿತು ಹೇಳಿದ ಕಾರಣಕ್ಕೆ ಕಾಂಗ್ರೆಸ್ಸಿಗರು ಹಾಗೂ ಹಲವು ಇಸ್ಲಾಮಿಕ್ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿರುವ ನೂಪುರ್ ಶರ್ಮಾ ಕುರಿತು ಸುಪ್ರೀಂಕೋರ್ಟ್ ಈಚೆಗೆ ನೀಡಿದ್ದ ಮೌಖಿಕ ಆದೇಶ ಇಂಥದ್ದೊಂದು ಕುತೂಹಲದ ತಿರುವು ಪಡೆದುಕೊಂಡಿದೆ.
ಪ್ರವಾದಿ ಮೊಹಮ್ಮದ್ ಕುರಿತು ನೂಪುರ್ ಶರ್ಮಾ ಈ ರೀತಿ ಹೇಳಲು ಕಾರಣ ಏನು ಎಂಬ ಬಗ್ಗೆ ಖುದ್ದು ನೂಪುರ್ ಅವರು ದಾಖಲೆ ಸಹಿತ ತೋರಿಸಿದ್ದಾರೆ. ಇದೇ ಮಾತನ್ನು ಈ ಹಿಂದೆ ಜಾಕೀರ್ ನಾಯಕ್ ಹೇಳಿದ್ದರ ಕುರಿತು ವಿಡಿಯೋ ಕೂಡ ಜನರ ಮುಂದಿಟ್ಟಿದ್ದಾರೆ. ಆದರೆ ನೂಪುರ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಅವರು ದೇಶದ ಕ್ಷಮೆ ಯಾಚಿಸಬೇಕು ಎಂದು ಸುಪ್ರೀಂಕೋರ್ಟ್ ಇತ್ತೀಚಿಗೆ ಮೌಖಿಕವಾಗಿ ಸೂಚಿಸಿತ್ತು.
ದೇಶದಲ್ಲಿ ಈಗ ಏನು ನಡೆಯುತ್ತಿದೆಯೋ ಅದಕ್ಕೆ ಸೂಪುರ್ ಅವರೇ ಹೊಣೆ. ಅವರನ್ನು ಹೇಗೆ ಪ್ರಚೋದಿಸಲಾಯಿತು ಎಂಬ ಮಾಧ್ಯಮ ಚರ್ಚೆಯನ್ನು ನಾವು ಕೂಡ ನೋಡಿದ್ದೇವೆ. ಆದರೆ, ಅದಕ್ಕೆ ಆಕೆ ಪ್ರತಿಕ್ರಿಯಿಸಿದ ರೀತಿ ಮತ್ತು ತಾನೂ ಕೂಡ ವಕೀಲೆ ಎಂದು ಹೇಳಿಕೊಂಡಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ. ಇಡೀ ದೇಶದ ಜನತೆಯ ಮುಂದೆ ಆಕೆ ಕ್ಷಮೆಯಾಚಿಸಲೇಬೇಕು ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದರು. ತಮ್ಮ ವಿರುದ್ಧ ದಾಖಲಾಗಿರುವ ಎಲ್ಲ ಎಫ್ಐಆರ್ಗಳನ್ನು ದೆಹಲಿಗೆ ವರ್ಗಾಯಿಸಲು ಕೋರಿ ಸುಪ್ರಿಂಕೋರ್ಟ್ಗೆ ನೂಪುರ್ ಶರ್ಮಾ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಈ ರೀತಿ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.
ಈ ಮೌಖಿಕ ಆದೇಶ ಈಗ ಹಲವರ ಕಿಡಿ ಹೊತ್ತಿಸಿದೆ. ಸುಪ್ರೀಂ ಕೋರ್ಟ್ ಲಕ್ಷ್ಮಣ ರೇಖೆ ದಾಟಿದೆ ಎಂದು ನಿವೃತ್ತ ಸುಪ್ರೀಂ ಕೋರ್ಟ್, ಹೈಕೋರ್ಟ್ ನ್ಯಾಯಮೂರ್ತಿಗಳು ಸೇರಿದಂತೆ ಹಲವರು ಅಭಿಪ್ರಾಯಪಟ್ಟಿದ್ದಾರೆ.
ಈ ಆದೇಶವನ್ನು ಟೀಕಿಸಿ ಇದರ ವಿರುದ್ಧ 15 ನಿವೃತ್ತ ನ್ಯಾಯಮೂರ್ತಿಗಳು, 77 ಮಾಜಿ ಅಧಿಕಾರಿಗಳು ಮತ್ತು ಸಶಸ್ತ್ರ ಪಡೆಗಳ 25 ನಿವೃತ್ತ ಅಧಿಕಾರಿಗಳು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ. ರಮಣ ಅವರಿಗೆ ಪತ್ರ ಬರೆದಿದ್ದಾರೆ.
ಸಹಿ ಮಾಡಿದವರಲ್ಲಿ ಬಾಂಬೆ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕ್ಷಿತಿಜ್ ವ್ಯಾಸ್, ಗುಜರಾತ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಸ್ ಎಂ ಸೋನಿ, ರಾಜಸ್ಥಾನ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್.ಎಸ್ ರಾಥೋಡ್ ಮತ್ತು ಪ್ರಶಾಂತ್ ಅಗರ್ವಾಲ್, ದೆಹಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಸ್ ಎನ್ ಧಿಂಗ್ರಾ ಸೇರಿದ್ದಾರೆ.
ಇದಲ್ಲದೆ ಮಾಜಿ ಐಎಎಸ್ ಅಧಿಕಾರಿಗಳಾದ ಆರ್ ಎಸ್ ಗೋಪಾಲನ್ ಮತ್ತು ಎಸ್ ಕೃಷ್ಣ ಕುಮಾರ್, ನಿವೃತ್ತ ರಾಯಭಾರಿ ನಿರಂಜನ್ ದೇಸಾಯಿ, ಮಾಜಿ ಡಿಜಿಪಿಗಳಾದ ಎಸ್ ಪಿ ವೈದ್ ಮತ್ತು ಬಿ ಎಲ್ ವೋಹ್ರಾ, ಲೆಫ್ಟಿನೆಂಟ್ ಜನರಲ್ ವಿ ಕೆ ಚತುರ್ವೇದಿ (ನಿವೃತ್ತ) ಮತ್ತು ಏರ್ ಮಾರ್ಷಲ್ ಎಸ್ ಪಿ ಸಿಂಗ್ (ನಿವೃತ್ತ) ಸಹ ಸುಪ್ರೀಂ ಕೋರ್ಟ್ ಅವಲೋಕನದ ಹೇಳಿಕೆಗೆ ಸಹಿ ಹಾಕಿದ್ದಾರೆ.