HEALTH TIPS

ರಶ್ದಿ ಮೇಲಿನ ದಾಳಿಗೆ ಭಾರತ ಖಂಡನೆ: ಘಟನೆ ನಡೆದು 2 ವಾರಗಳ ನಂತರ ಪ್ರತಿಕ್ರಿಯೆ

 

           ನವದೆಹಲಿ: ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ನಡೆದ ದಾಳಿಯನ್ನು ಭಾರತ ಇದೇ ಮೊದಲ ಬಾರಿಗೆ ಗುರುವಾರ ಖಂಡಿಸಿದೆ. 'ಇದೊಂದು ಭಯಾನಕ ದಾಳಿ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ' ಎಂದು ಹಾರೈಸಿದೆ.

                ಆಗಸ್ಟ್ 12 ರಂದು ನ್ಯೂಯಾರ್ಕ್‌ನ 'ಷಟೌಕ್ವಾ ಇನ್‌ಸ್ಟಿಟ್ಯೂಷನ್‌'ನಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲು ಹೋಗಿದ್ದ ರಶ್ದಿ ಅವರ ಮೇಲೆ ಹಾದಿ ಮಟರ್ ಎಂಬಾತ ಚೂರಿಯಿಂದ ಭೀಕರವಾಗಿ ದಾಳಿ ನಡೆಸಿದ್ದ.

                  'ಭಾರತ ಯಾವಾಗಲೂ ಹಿಂಸೆ ಮತ್ತು ಉಗ್ರವಾದದ ವಿರುದ್ಧ ನಿಲ್ಲುತ್ತದೆ. ನಾವು ಸಲ್ಮಾನ್ ರಶ್ದಿ ಅವರ ಮೇಲಿನ ಭೀಕರ ದಾಳಿಯನ್ನು ಖಂಡಿಸುತ್ತೇವೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಮ್ಮ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

              ಮುಂಬೈ ಮೂಲದ ವಿವಾದಿತ ಲೇಖಕ ಸಲ್ಮಾನ್ ರಶ್ದಿ ಅವರ ಮೇಲಿನ ದಾಳಿಯನ್ನು ಅಮೆರಿಕ ಸೇರಿದಂತೆ ಹಲವು ದೇಶಗಳು, ವ್ಯಕ್ತಿಗಳು ಖಂಡಿಸಿದ್ದಾರೆ.

               'ರಶ್ದಿ ಅವರ ಮೇಲಿನ ದಾಳಿಯಲ್ಲಿ ಇರಾನ್‌ ಕೈವಾಡ ಇಲ್ಲ' ಎಂದು ಇರಾನ್‌ ವಿದೇಶಾಂಗ ಸಚಿವಾಲಯದ ವಕ್ತಾರ ನಾಸಿರ್‌ ಖನಾನಿ ಇತ್ತೀಚೆಗೆ ಸ್ಪಷ್ಟಪಡಿಸಿದ್ದಾರೆ.

                ರಶ್ದಿ ಅವರ ಹತ್ಯೆ ಮಾಡುವಂತೆ ಇರಾನ್‌ನ ಸರ್ವೋಚ್ಚ ನಾಯಕ ಅಯಾತ್‌ ಉಲ್ಲಾ ಖೊಮೇನಿ ಫತ್ವಾ ಹೊರಡಿಸಿದ್ದರು. ರಶ್ದಿ ಅವರ 'ದಿ ಸಟಾನಿಕ್‌ ವರ್ಸಸ್‌' ಕಾದಂಬರಿ ಪ್ರಕಟವಾದ ಬಳಿಕ ಖೊಮೇನಿ ಈ ಘೋಷಣೆ ಮಾಡಿದ್ದರು. ಈ ಕಾರಣದಿಂದಾಗಿಯೇ ರಶ್ದಿ ಅವರ ಮೇಲಿನ ದಾಳಿಯಲ್ಲಿ ಇರಾನ್‌ ಕೈವಾಡ ಇರಬಹುದು ಎಂದು ಅನುಮಾನಿಸಲಾಗುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries