ಲಖೀಂಪುರ ಖೇರಿ: ಉತ್ತರ ಪ್ರದೇಶದ ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರನ್ನು ವಜಾಗೊಳಿಸುವುದೂ ಸೇರಿ, ರೈತರ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ(ಎಸ್ಕೆಎಂ) ಲಖೀಂಪುರ ನಗರದಲ್ಲಿ ಹಮ್ಮಿಕೊಂಡಿರುವ ಧರಣಿಗೆ ಗುರವಾರ ಬೆಳಗ್ಗೆ ಚಾಲನೆ ನೀಡಿದೆ.
75 ಗಂಟೆಗಳ ಗಂಟೆಗಳ ಈ ಧರಣಿ ಇದೇ 20ರ ವರೆಗೆ ನಡೆಯಲಿದೆ. ಭಾರತೀಯ ಕಿಸಾನ್ ಯೂನಿಯನ್ನ(ಬಿಕೆಯು) ರಾಷ್ಟ್ರೀಯ ವಕ್ತಾರ ರಾಖೇಶ್ ಟಿಕಾಯತ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಭೂದೇವ್ ಶರ್ಮ ಮತ್ತು ಇತರ ಪ್ರಮುಖ ರೈತ ನಾಯಕರು ಬುಧವಾರವೇ ಲಖೀಂಪುರಕ್ಕೆ ಆಗಮಿಸಿದರು. ಎಸ್ಕೆಎಂನ ಹಲವು ನಾಯಕರು ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಯುಕೆ-ಟಿಕಾಯತ್ ಬಣ ತಿಳಿಸಿದೆ.
ಕಳೆದ ವರ್ಷ ಅಕ್ಟೋಬರ್ 3ರಂದು ಲಖೀಂಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ರೈತರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಹೋರಾಡುತ್ತಿದ್ದೇವೆ. ಅಜಯ್ ಮಿಶ್ರಾರನ್ನು ವಜಾಗೊಳಿಸಬೇಕು, ಮೃತ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು, ಕನಿಷ್ಠ ಬೆಂಬಲ ಬೆಲೆ ನೀಡಲು ಕಾನೂನು ರೂಪಿಸಬೇಕು, 2022ರ ವಿದ್ಯುತ್ ಶುಲ್ಕವನ್ನು ಹಿಂಪಡೆಯಬೇಕು ಎಂಬ ಅಂಶಗಳು ನಮ್ಮ ಬೇಡಿಕೆಗಳಲ್ಲಿ ಸೇರಿವೆ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ಹಲವಾರು ರೈತರು ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಕೆಯು(ಲಾಖೆವಾಲ್) ರಾಜ್ಯ ಉಪಾಧ್ಯಕ್ಷ ಅವತಾರ್ ಸಿಂಗ್ ಮೆಹ್ಲೊ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಜಾರಿ ಮಾಡಿದ್ದ ಮೂರು ಕೃಷಿ ನೀತಿಗಳನ್ನು ಹಿಂಪಡೆಯುವಂತೆ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಸಚಿವ ಅಜಯ್ ಸಿಂಗ್ ಅವರ ಪುತ್ರ ಎಸ್ಯುವಿ ಕಾರು ಹರಿಸಿದ್ದರು. ಈ ಘಟನೆ ಬಳಿಕ ಹಿಂಸಾಚಾರ ನಡೆದಿತ್ತು. ಈ ಎರಡೂ ಪ್ರಕರಣಗಳಲ್ಲಿ ಒಟ್ಟು ಎಂಟು ಜನರು ಮೃತಪಟ್ಟಿದ್ದರು.